ಗದಗ ಪಟ್ಟಣದ ಎಸ್ಎಫ್ಐ ಕಚೇರಿಯಲ್ಲಿ ಸಾರ್ವತ್ರಿಕ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ, ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ, ಸಾಮರಸ್ಯ, ಭಾವೈಕ್ಯತೆ ಮತ್ತು ಬಹುತ್ವ ಪರಂಪರೆಯ ಸಂರಕ್ಷಣೆಗಾಗಿ 5ನೇ ಗದಗ ಜಿಲ್ಲಾ ಸಮ್ಮೇಳನ ನಡೆಯಿತು.
ಸಮ್ಮೇಳನವನ್ನು ಉದ್ಘಾಟಿಸಿ ಎಸ್ಎಫ್ಐನ ರಾಜ್ಯ ಪದಾಧಿಕಾರಿ ಗಣೇಶ ರಾಠೋಡ್ ಮಾತನಾಡಿ, “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಶೈಕ್ಷಣಿಕ ವಲಯವನ್ನು ಹದಗೆಸುತ್ತಿದ್ದು ಗೊಂದಲದ ಗೂಡಾಗಿದೆ. ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ಗಲಾಟೆ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ ಹಾಗೆ ಪಠ್ಯ ಪುಸ್ತಕದ ಬದಲಾವಣೆ ಮೂಲಕ ಸರ್ಕಾರವೇ ಕೇಸರಿಕರಣಕ್ಕೆ ಇಳಿದಿದ್ದು ಖೇದಕರವಾಗಿತ್ತು. ಎಲ್ಲವನ್ನು ಸಹಿಸಿಕೊಂಡು ಬಂದ ವಿದ್ಯಾರ್ಥಿಗಳು ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಕಲಿಸಿದ್ದಾರೆ” ಎಂದರು.
ಇಂದಿನ ಸರ್ಕಾರವು ಸರಿಯಾದ ನೀತಿ ಇಲ್ಲದೇ ಹೆಣಗುತ್ತಿವೆ. ಜಿಲ್ಲೆಗೊಂದು ನರ್ಸಿಂಗ್ ಕಾಲೇಜುಗಳು ಪ್ರಾರಂಭಿಸಲು ಒತ್ತಾಯಿಸಬೇಕಿದೆ. ಜೊತೆಗೆ ಹಾಸ್ಟೆಲ್ ಕೊರತೆ, ಬಸ್ ಸಮಸ್ಯೆ, ಶಿಕ್ಷಕರ, ಉಪನ್ಯಾಸಕರ, ಮೂಲಭೂತ ಸೌಕರ್ಯಗಳ ಕೊರತೆ ನಿರಂತರವಾಗಿದ್ದು, ಸರಿದೂಗಿಸಲು ಸರ್ಕಾರಗಳು ಮುಂದಾಗುತ್ತಿಲ್ಲ. ಎಲ್ಲಾ ಸಮಸ್ಯೆಗಳ ಮಧ್ಯೆ ವಿದ್ಯಾರ್ಥಿ ಸಮ್ಮೇಳನ ನಡೆಯುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ಸಂಘಟಿತರಾಗಿ ಜನಜಾಗೃತಿ ಮೂಡಿಸುವ ಕಾರ್ಯ ಮತ್ತು ಹೋರಾಟ ಮಾಡಿ ಹಕ್ಕುಗಳನ್ನು ಪಡೆದುಕೊಳ್ಳವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಎಸ್ಎಫ್ಐನಂತಹ ನಮ್ಮ ಸಂಘಟನೆ ಒಂದು ವಿಶ್ವವಿದ್ಯಾಲಯ ಇದ್ದ ಹಾಗೆ. ಇಲ್ಲಿನ ವಿದ್ಯಾರ್ಥಿ ನಾಯಕರು ಯಾವಾಗಲೂ ಪರಿಪೂರ್ಣ ವಿದ್ಯಾರ್ಥಿಗಳಾಗಿ ಹೋರಹೊಮ್ಮುತ್ತಾರೆ. ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಸಮಾಜವಾದದ ಆಶಯ ಹೊತ್ತು ನಡೆಯುತ್ತಿರುವ ಎಸ್ಎಫ್ಐ ಸಂಘಟನೆಯ ಸಮ್ಮೇಳನಕ್ಕೆ ಬಹಳ ಮಹತ್ವ ಇದೆ. ಗದಗ ಜಿಲ್ಲೆಯ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಈ ಸಮ್ಮೇಳನ ನಿರ್ಣಯ ತೆಗೆದುಕೊಂಡು ಕಾರ್ಯ ರೂಪಿಸಲಿದೆ ಎಂದರು.
ನಂತರ ಸಮ್ಮೇಳನದ ಕಾರ್ಯ ಕಲಾಪ ನಡೆಯಿತು ಜಿಲ್ಲೆಯ ಕರಡು ವರದಿ ಮಂಡನೆ ನಂತರ ಅದರ ಮೇಲೆ ತಾಲೂಕುವಾರು ಚರ್ಚೆ ಆನಂತರ ಜಿಲ್ಲೆಯ ಹೊಸ ಸಮಿತಿ ರಚನೆ ಮಾಡಲಾಯಿತು.
ಸಮ್ಮೇಳನದಲ್ಲಿ ಆಯ್ಕೆಯಾದ ನೂತನ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಚಂದ್ರು ರಾಠೋಡ, ಕಾರ್ಯದರ್ಶಿಯಾಗಿ ಸುದೀಪ್ ಹೂಗಾರ್, ಉಪಾಧ್ಯಕ್ಷರಾಗಿ ಗಣೇಶ ಛಲವಾದಿ, ಅನೀಲ್ ರಾಠೋಡ, ಸಹಕಾರ್ಯಾದರ್ಶಿಗಳಾಗಿ ಕಿರಣ, ಪ್ರದೀಪ್ ಎಂ. ಸದಸ್ಯರು: ಶರಣು ಎಂ, ಮಾಂತೇಶ ಪೂಜಾರ, ರಾಜು, ವಿನೋದ ಮುಂಡರಗಿ, ಮಂಜುನಾಥ್ ಗದಗ, ಕಾರ್ತಿಕ ಲಕ್ಷ್ಮೇಶ್ವರ, ದೇವರಾಜು, ಡೇನಿಷ, ನವೀನ, ಕವಿತಾ ಮೇಟಿ ಒಟ್ಟು 17 ಜನರ ಜಿಲ್ಲಾ ಸಮಿತಿಯನ್ನು ರಚನೆ ಮಾಡಲಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು: ನಾಲ್ವರ ಸಾವು
ಈ ಸಂದರ್ಭದಲ್ಲಿ ಎಸ್ಎಫ್ಐನ ಗಜೇಂದ್ರಗಡ ತಾಲೂಕು ಅಧ್ಯಕ್ಷರಾದ ಅನಿಲ್ ರಾಠೋಡ, ಮುಂಡರಗಿ ತಾಲೂಕು ಮುಖಂಡರಾದ ಗಣೇಶ ಛಲವಾದಿ, ರೋಣ ತಾಲೂಕು ಮುಖಂಡರಾದ ಸುದೀಪ್ ಹೂಗಾರ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರತಿನಿಧಿಗಳಾದ ಸುದೀಪ್ ಹುಬ್ಬಳ್ಳಿ, ಮುಪ್ಪಯ್ಯ, ಶರಣು, ಮಾಂತೇಶ, ರಾಜು, ವಿನೋದ, ಮಂಜುನಾಥ, ಕಾರ್ತಿಕ, ದೇವರಾಜ, ಅಪ್ಪು, ಡೆನೀಷ, ನವೀನ, ಕವಿತಾ, ಕಿರಣ, ಆಕಾಶ, ಪ್ರವೀಣ್ ಹಾಗೂ ಇತರರು ಹಾಜರಿದ್ದರು.
