ರಾಜ್ಯದ ಜನತೆಗೆ ಉತ್ತಮ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆ ಒದಗಿಸಲು 325 ಹೊಸ ಬಸ್ ಖರೀದಿಗೆ ಸದ್ಯದಲ್ಲೇ ಕ್ರಮ ಜರುಗಿಸಲಾಗುತ್ತದೆ. ಒಟ್ಟಾರೆ 5,000 ಬಸ್ ಖರೀದಿ ಮಾಡುವ ಉದ್ದೇಶವಿದೆ ಎಂದು ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶನಿವಾರದಂದು ಜರುಗಿದ ಈ ಕಾರ್ಯಕ್ರಮದಲ್ಲಿ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ಗಳ ಲೋಕಾರ್ಪಣೆ, ಅಪಘಾತ ರಹಿತಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಕಳೆದ ನಾಲ್ಕು ವರ್ಷಗಳಿಂದ ಹೊಸ ಬಸ್ಗಳ ಖರೀದಿಯಾಗಿರಲಿಲ್ಲ, 7 ವರ್ಷಗಳಿಂದ ನೇಮಕಾತಿಗಳು ನಡೆದಿರಲಿಲ್ಲ. ಸದ್ಯ ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಾತಿಗೆ ಅನುಮತಿ ನೀಡಿದ್ದು, ನೇಮಕಾತಿ ಜವಾಬ್ದಾರಿಯನ್ನು ಆಯಾ ವಿಭಾಗೀಯ ಸಂಸ್ಥೆಗಳಿಗೆ ನೀಡಿದೆ. ಈಗಾಗಲೇ 145 ಜನರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ” ಎಂದರು.
ನಗರದಲ್ಲಿ ಸೂಕ್ತ ನಿವೇಶನ ಒದಗಿಸಿದ್ದಲ್ಲಿ ಸುಸಜ್ಜಿತ ಟ್ರಕ್ ಟರ್ಮಿನಲ್ ಮಂಜೂರು ಮಾಡಲಾಗುವುದು. ಈ ಕುರಿತು ಮುಂಬರುವ ಆಯವ್ಯಯದಲ್ಲಿ ವಿಷಯ ಮಂಡಿಸಲಾಗುವುದು. ಜಿಲ್ಲೆಗಳಲ್ಲಿ ಚಾಲನಾ ಪರವಾನಗಿ ನೀಡುವ ಕ್ಯಾಂಪ್ಗಳನ್ನು ಆಯೋಜಿಸಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರಾಜ್ಯದಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ. ಅವುಗಳ ನಿರ್ವಹಣೆ ಮಾಡಬೇಕಾಗಿರುವುದು ಅಧಿಕಾರಿಗಳ ಜವಾಬ್ದಾರಿ” ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ಅವರು ನಗದು ರಹಿತ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿ, “ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಔಷಧಿ, ಪುಸ್ತಕ ವ್ಯವಸ್ಥೆ, ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವಸ್ತುಗಳು ಸ್ಥಳದಲ್ಲೇ ಸಿಗುವಂತಾಗಬೇಕು. ವಿಮಾನ ನಿಲ್ದಾಣದಲ್ಲಿ ಸಿಗುವ ವ್ಯವಸ್ಥೆಯಂತೆ ಬಸ್ ನಿಲ್ದಾಣದಲ್ಲಿಯೂ ಇರಬೇಕು. ₹25 ಲಕ್ಷ ವೆಚ್ಚ ಮಾಡಿದ್ದಲ್ಲಿ ಈ ನಿಲ್ದಾಣವು ಭವ್ಯವಾಗಿ ನಿರ್ಮಾಣವಾಗಲಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು” ಎಂದು ಸೂಚಿಸಿದರು.
ಸಾರಿಗೆ ಇಲಾಖೆಯಿಂದ ಗದಗ ಜಿಲ್ಲೆಗೆ ಕಡಿಮೆ ಕೆಲಸವಾಗಿದೆ. ಜಿಲ್ಲೆಗೆ ಆದಷ್ಟು ಬೇಗ ಟ್ರಕ್ ಟರ್ಮಿನಲ್ ಮಂಜೂರು ಮಾಡಬೇಕು ಎಂದು ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಸಚಿವ ಎಚ್ ಕೆ ಪಾಟೀಲ್ ಅವರು ಮನವಿ ಮಾಡಿದರು.
ಗದಗ ನಗರದಲ್ಲಿ ಕೆಲವಡೆ ಮಿನಿ ಬಸ್ ನಿಲ್ದಾಣಗಳನ್ನು ಮಂಜೂರು ಮಾಡಲು, ವಿಭಾಗೀಯ ಚಾಲಕ ತರಬೇತಿ ಕೇಂದ್ರ, ಅಶ್ವಮೇಧ ಬಸ್ ವ್ಯವಸ್ಥೆ, ಇನ್ನೂ ಹೆಚ್ಚಿನ ಬಸ್ ವ್ಯವಸ್ಥೆ ಮಂಜೂರು, ಲೈಸೆನ್ಸ್ ನೀಡುವ ಪ್ರಕ್ರಿಯೆ ಅತ್ಯಾಧುನೀಕರಣ, ಚಾಲನಾ ಪರವಾನಗಿ ನಿಡುವ ಕ್ಯಾಂಪ್ಗಳ ಆಯೋಜನೆ ಸೇರಿದಂತೆ ಎಚ್ ಕೆ ಪಾಟೀಲ್ ಹಲವು ಮನವಿಗಳನ್ನು ಮಾಡಿದರು.
ವಾಕರಸಾಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, “ಶಕ್ತಿ ಯೋಜನೆಯನ್ನು ವಿಭಾಗದ ಆರು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಈವರೆಗೆ ಹುಬ್ಬಳ್ಳಿ ವಿಭಾಗದ 6 ಜಿಲ್ಲೆಯಲ್ಲಿ ಅಂದಾಜು 34 ಕೋಟಿ ಜನ ಸಂಚರಿಸಿದ್ದಾರೆ. ರಾಜ್ಯದಲ್ಲಿ ಹೊಸ ಬಸ್ ಖರೀದಿಗೆ ಸರ್ಕಾರ ₹500 ಕೋಟಿ ಮೀಸಲಿಟ್ಟು ವಾಕರಸಾಸಂಸ್ಥೆಗೆ ₹150 ಕೋಟಿ ನೀಡಿದೆ. ಈ ಪೈಕಿ ಮೊದಲ ಹಂತದ ₹20 ಕೋಟಿ ವೆಚ್ಚದಲ್ಲಿ 50 ಬಸ್ ಖರೀದಿಸಲಾಗಿದೆ. ಸರ್ಕಾರ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದ್ದು, ಅಪಘಾತ ರಹಿತ ಸೇವೆ ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಅಪಘಾತ ರಹಿತ ಸೇವೆ ಸಲ್ಲಿಸಿದ 48 ಜನರಿಗೆ ಇಂದು ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಮನಗರ | ರೆಕಾರ್ಡ್ ರೂಂ ದಾಖಲೆಗಳು ಡಿಜಿಟಲೀಕರಣವಾಗುತ್ತಿವೆ: ಜಿಲ್ಲಾಧಿಕಾರಿ
ಕಾರ್ಯಕ್ರಮದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿದ 48 ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಿದರು. ಮಾಜಿ ಶಾಸಕ ಡಿ ಆರ್ ಪಾಟೀಲ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಸೀನಪ್ಪ, ಗಣ್ಯರುಗಳಾದ ಬಿ ಬಿ ಅಸೂಟಿ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.