ಭಾರತ ಸರ್ವಜನಾಂಗದ ಶಾಂತಿಯ ತೋಟ. ಈ ದೇಶದಲ್ಲಿ ಎಲ್ಲ ಧರ್ಮದವರು ಸ್ವಚ್ಛಂದವಾಗಿ ಬದುಕುತ್ತಿದ್ದಾರೆ. ಈ ಬದುಕನ್ನು, ಈ ತೋಟವನ್ನು ಜಾತಿಯ ಹೆಸರಿನಲ್ಲಿ, ಗೋಹತ್ಯೆ ಹೆಸರಿನಲ್ಲಿ, ದಲಿತರ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಬೇಕು ಎಂದು ಶರಣು ಪೂಜಾರ ಹೇಳಿದರು.
ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರವಿ ಮಾದರ ಅವರ ನೇತೃತ್ವದಲ್ಲಿ ‘ಗೋ ಹತ್ಯೆ ನಿಷೇಧ ಕಾಯ್ದೆ ರದ್ದತಿ’ ಖಂಡಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಕೋಲಾರ ಜಿಲ್ಲೆಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ಆರೋಪಿಗಳನ್ನು ಗಲ್ಲಿಗೆ ಹಾಕಬೇಕು. ಮಧ್ಯಪ್ರದೇಶದಲ್ಲಿ ಮಾನವನ ಘನತೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡ ಪ್ರವೇಶ್ ಶುಕ್ಲಾ ಎಂಬ ಆರೋಪಿಯನ್ನು ಗಡಿಪಾರು ಮಾಡಬೇಕು ಹಾಗೂ ಪ್ರಸ್ತುತದಲ್ಲಿಯೂ ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬೇಕು” ಎಂದು ಖಂಡಿಸಿ ಪ್ರತಿಭಟನೆ ನಡೆಸಿದರು.
ದಸಂಸ ಜಿಲ್ಲಾ ಸಂಚಾಲಕ ಶರಣು ಪೂಜಾರ ಮಾತನಾಡಿ, “ಬಿಜೆಪಿ ನಾಯಕರು ಗೋ ಹತ್ಯೆ ನಿರ್ಬಂಧ ಹೇರಲೇಬೇಕು ಎಂಬ ದೃಢ ನಿಶ್ಚಯದೊಂದಿಗೆ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದರು. ಆದರೆ, ಈ ಕಾಯ್ದೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್, ʼತಮ್ಮಪಕ್ಷ ಅಧಿಕಾರಕ್ಕೆ ಬಂದರೆ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆʼ ಎಂದು ಹೇಳಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ರಾಜ್ಯದ ಶೋಷಿತ ಜನರಲ್ಲಿ ನಂಬಿಕೆ ಇದೆ” ಈ ನಂಬಿಕೆಯನ್ನು ಹುಸಿಗೊಳಿಸಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಗೆ ನೀಡಿದರು.
“ಜಾತಿಗ್ರಸ್ತ ಮನುವಾದಿಗಳು , ಆರ್ಎಸ್ಎಸ್ ಪುಂಡರು ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಬೇಕು. ಇಲ್ಲದಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ” ಎಂದು ಶರಣು ಪುಜಾರ ಎಚ್ಚರಿಕೆ ನೀಡಿದರು.
ಹೋರಾಟಗಾರ, ಸಂಘಟಕ ಮಾರುತಿ ಚಟಗಿ ಮಾತನಾಡಿ,”ದನದ ಹೆಸರಿನ ಮೇಲೆ ದಲಿತರನ್ನು ಕೊಲ್ಲುವುದು, ಹಿಂಸಿಸುವುದು, ದೌರ್ಜನ್ಯ ನಡೆಸುವುದು ಆರ್ಎಸ್ಎಸ್ ಪುಂಡರ ನೀತಿಯನ್ನು ನಾವು ಒಟ್ಟಾಗಿ ವಿರೋಧಿಸಬೇಕು. ಈ ದೇಶದಲ್ಲಿ ಪ್ರತಿಯೊಬ್ಬರಿಗೂ ತಾವು ಸೇವಿಸುವ ಆಹಾರದ ಹಕ್ಕಿದೆ. ಮಾಂಸ ತಿನ್ನಬೇಡಿ ಎನ್ನುವುದಕ್ಕೆ ಇವರ್ಯಾರು? ನಮ್ಮ ಆಹಾರ ನಮ್ಮ ಹಕ್ಕು. ಅದನ್ನು ನಾವು ಹಕ್ಕಿನಿಂದಲೇ ಸೇವಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್ಎಸ್ ಸಂಘಟಕ ಉಮೇಶ ರಾಠೋಡ್ ಮಾತನಾಡಿ, “ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ದಲಿತರ ಮೇಲಿನ ದೌರ್ಜಗಳು, ಮರ್ಯಾದೆ ಹತ್ಯೆ ಪ್ರಕರಣಗಳು, ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳು ಇನ್ನೂ ಕೊನೆಗೊಂಡಿಲ್ಲ. ಅದು ಇವತ್ತಿಗೂ ನಡೆಯುತ್ತಿವೆ. ಇದಕ್ಕೆ ಸೂಕ್ತ ಕಾನೂನನ್ನು ರೂಪಿಸುವಲ್ಲಿ ಹಿಂದಿನ ಬಿಜೆಪಿ ಸರ್ಕಾರ ವಿಫಲವಾಗಿದೆ. ಸಾಮಾಜಿಕ ನ್ಯಾಯದ ಪರವಾಗಿರುವ ಕಾಂಗ್ರೆಸ್ ಸರ್ಕಾರ ಸೂಕ್ತವಾದ ಕಾನೂನು ಮಾಡಿಸಿ ದಲಿತರಿಗೆ ರಕ್ಷಣೆ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಲೂಟಿ, ಜನರಿಗೆ ಅನ್ಯಾಯ, ಕಲಾಪದ ಸಮಯ ಹಾಳು ಮಾಡುವುದೇ ಬಿಜೆಪಿ ಕೆಲಸ: ಕೃಷ್ಣಭೈರೇಗೌಡ ಕಿಡಿ
ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಸಂಚಾಲಕ ಗಣೇಶ ರಾಠೋಡ್, ಡಿಎಸ್ಎಸ್ ಮುಖಂಡರು ಬಸವರಾಜ ಕಡಬಿನ, ಪರಶು ಕಾಳೆ, ಶರಣು ದೊಡ್ಡಮನಿ, ಮರಿಯಪ್ಪ ಮಾದರ, ನೀಲಪ್ಪ ಗುಡಿಮನಿ, ಆನಂದ ಅರಳಿಗಿಡದ, ಶಿವು ಚವ್ಹಾಣ, ಅಲ್ಲಾಭಕ್ಷ ಮುಂಚಾಲಿ, ಆನಂದ ಮಾದರ, ಹನಮಂತ ಮೂಲಿಮನಿ, ಮಾರುತ್ತಿಬಂಡಿವಡ್ಡರ ಹಾಗೂ ಡಿಎಸ್ಎಸ್ ಕಾರ್ಯಕರ್ತರು ಇದ್ದರು.