ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ ಕಲಾಪದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಡಾ. ಬಿ ಆರ್ ಅಂಬೇಡ್ಕರ್ ಅಭಿಮಾನಿಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟವು ಡಿಸೆಂಬರ್ 24ರಂದು ಗದಗ ಬಂದ್ಗೆ ಕರೆ ನೀಡಿದೆ.
ಗದಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖಂಡರು, ಡಿ. 24ರ ಮಂಗಳವಾರ ‘ಗದಗ ಬಂದ್’ ಕರೆ ನೀಡಲಾಗಿದೆ. ಇದಕ್ಕೆ ಎಲ್ಲ ಸಂಘಟನೆಗಳು ಕೈಜೋಡಿಸಿದ್ದು, ದೇಶದ ಮಟ್ಟದಲ್ಲಿ ಗಮನ ಸೆಳೆಯುವ ಹಾಗೆ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ಹಾಗೂ ಆರ್.ಎಸ್.ಎಸ್ ಸಂವಿಧಾನ ಜಾರಿಗೆ ಬಂದಾಗಿನಿಂದಲೂ ಅವರು ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನವನ್ನು ಒಪ್ಪಿಕೊಂಡಿಲ್ಲ.ಇಡೀ ದೇಶದಲ್ಲಿ ಮನುಸ್ಮೃತಿಯನ್ನು ಬಲವಂತವಾಗಿ ಹೇರಲು ಹೊರಟಿದ್ದಾರೆ. ಅಮಿತ್ ಶಾ ಅವರ ಅಂಬೇಡ್ಕರ್ ಕುರಿತ ಹೇಳಿಕೆ ಇಡೀ ದೇಶದ ದಲಿತರ ಹಾಗೂ ಪ್ರಗತಿಪರರ ಭಾವನೆಗಳಿಗೆ ಧಕ್ಕೆಯಾಗಿದೆ. ಇದನ್ನು ಖಂಡಿಸಿ ಮಂಗಳವಾರದಂದು ಗದಗ ಬಂದ್ಗೆ ಕರೆ ಕೊಟ್ಟಿದ್ದು, ಈ ಬಂದ್ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 6 ಲಕ್ಷಕ್ಕೂ ಅಧಿಕ ಮಂದಿಯ ಆಗಮನ: ಸಚಿವ ಚಲುವರಾಯಸ್ವಾಮಿ
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಅಯ್ಯಪ್ಪ ನಾಯ್ಕರ, ಬಸವರಾಜ ಕಡೇಮನಿ, ವಿಜಯ ಮುಳಗುಂದ, ಆನಂದ ಶಿಂಗಾಡಿ, ಶೇಕಣ್ಣ ಕವಳಿಕಾಯಿ, ಹನುಮಂತಪ್ಪ ಕಿನ್ನಾಳ, ಶಾಂತಣ್ಣ ಮಾಳವಾಡ.ಎಸ್.ಜಿ.ಕೊಪ್ಪಳ, ನಿಸ್ಸಾರ ಅಹ್ಮದ್ ಖಾಜಿ, ಭಾಷಾಸಾಭ್ ಮುಲ್ಲಸಮುದ್ರ, ಬಾಲರಾಜ್ ಅರಬರ, ನಾಗರಾಜ್ ಗೋಕಾವಿ, ಮಲ್ಲೇಶ್ ಹೊಸಮನಿ, ಬಸವರಾಜ ಬೇವಿನಮರದ, ಮೈಲಾರಪ್ಪ ಚಳ್ಳಮರದ, ಪರಮೇಶ್ ಕಾಳೆ, ರಾಘವೇಂದ್ರ ಪರಾಪೂರ, ಗಣೇಶ ಹುಬ್ಬಳ್ಳಿ ಅನೇಕರು ಉಪಸ್ಥಿತರಿದ್ದರು.
