“ಐತಿಹಾಸಿಕ ಭೀಷ್ಮ ಕೆರೆ ಪರಿಸರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಸುಂದರ ವಿಹಾರ ಧಾಮ ಮಾಡಲಾಗಿದೆ. ಭೀಷ್ಮಕೆರೆಯಲ್ಲಿ ಶೀಘ್ರ ಸೈಕ್ಲೀಂಗ್ ವ್ಯವಸ್ಥೆ ಕೂಡ ಮಾಡಲಾಗುವುದು” ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿದರು.
ಗದಗ ಪಟ್ಟಣದ ಭೀಷ್ಮ ವಿಹಾರ ಧಾಮದ ನಡುಗಡ್ಡೆಯಲ್ಲಿ ಇಂದು ಬಸವ ಜಯಂತಿ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ-ಬೆಟಗೇರಿ ನಗರಸಭೆ ಸಹಯೋಗದಲ್ಲಿ ಬಸವ ಜಯಂತಿ ಅಂಗವಾಗಿ ಸಂಗೀತಗಾರ ರಾಮಚಂದ್ರ ಹಡಪದ, ಸ್ಪರ್ಶ ಇವರ ತಂಡದಿಂದ ಆಯೋಜಿಸಲಾದ ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವರು ಮಾತನಾಡಿದರು.
“ಭೀಷ್ಮ ಕೆರೆ ಆವರಣದಲ್ಲಿ ಈಗಾಗಲೇ ಬೋಟಿಂಗ್ ಆರಂಭವಾಗಿದ್ದು, ಪ್ರತಿನಿತ್ಯ 15 ಸಾವಿರ ಆದಾಯ ಸೃಷ್ಟಿಯಾಗುತ್ತಿದೆ. ಹೀಗಾಗಿ ಭೀಷ್ಮ ವಿಹಾರ ಧಾಮವನ್ನು ಮತ್ತಷ್ಟು ಆಕರ್ಷಣೀಯವಾಗಿಸಲು ಮೇ 20ರಂದು ಕೆರೆ ನೀರಿನ ಮೇಲೆ ಓಡುವ ಸೈಕಲ್ ಸವಾರಿ ಆರಂಭಿಸಲಾಗುವುದು” ಎಂದು ಹೇಳಿದರು.
“ಐತಿಹಾಸಿಕ 63 ಎಕರೆ ಕೆರೆ ಅಭಿವೃದ್ಧಿ ಮಾಡಲು ಅವಕಾಶವಿದೆ. ಸದ್ಯ 33 ಎಕರೆ ಮಾತ್ರ ಅಭಿವೃದ್ಧಿ ಮಾಡಲಾಗಿದೆ. ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಸಾರ್ವಜನಿಕರೂ ಅಭಿವೃದ್ಧಿಗೆ ಕೈ ಜೋಡಿಸಬೇಕು. ಅಂದಾಗ ಮಾತ್ರ ವಿಹಾರಧಾಮ ಮತ್ತಷ್ಟು ಸುಂದರವಾಗಲು ಸಾಧ್ಯ” ಎಂದರು.
“ಬಸವ ಜಯಂತಿಯಂದು ಭೀಷ್ಮ ಕೆರೆ ಆವರಣ ಇಷ್ಟೊಂದು ಸುಂದರವಾಗಲು ಪ್ರಭು ಬುರಬುರೆ, ಬಿ ಬಿ ಅಸೂಟಿ, ಗುರಣ್ಣ ಬಳಗಾನೂರ ಸೇರಿದಂತೆ ಹಲವರ ಆಸಕ್ತಿ, ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಸೇರಿದಂತೆ ಹಲವಾರು ಅಧಿಕಾರಿಗಳ ಅವಿರತ ಶ್ರಮ ಅಡಗಿದೆ. ಅವರ ಜೊತೆಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳಿಗೆ” ಅಭಿನಂಧನೆ ತಿಳಿಸಿದರು.
ಜಿಲ್ಲಾಧಿಕಾರಿ ಸಿಎನ್ ಶ್ರೀಧರ ಅವರು ಪ್ರಾಸ್ತಾವಿಕ ಮಾತನಾಡಿ, “116 ಅಡಿ ಎತ್ತರದ ಬಸವ ಪುತ್ಥಳಿ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ” ಎಂದರು.
ಸಮಾರಂಭದಲ್ಲಿ ಹೆಸರಾಂತ ಕಲಾವಿದ ರಾಮಚಂದ್ರ ಹಡಪದ್ ಅವರನ್ನು ಸಚಿವ ಎಚ್ ಕೆ ಪಾಟೀಲ ಅವರು ಜಿಲ್ಲಾಡಳಿತದಿಂದ ಸತ್ಕರಿಸಿ ಗೌರವಿಸಿದರು. ಜೊತೆಗೆ ಸ್ಪರ್ಶ ಕಲಾತಂಡದ ಸರ್ವ ಸದಸ್ಯರನ್ನು ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಗದಗ | ಸೂಪರ್ ಮಾರುಕಟ್ಟೆ ಕಾಂಪೌಂಡ್, ಪಿಲ್ಲರುಗಳಲ್ಲಿ ಬಿರುಕು: ಕಳಪೆ ಕಾಮಗಾರಿ ಆರೋಪ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ. ಆರ್ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕ ಅಧ್ಯಕ್ಷ ಅಶೋಕ ಮಂದಾಲಿ , ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೇಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಬಾಹುಬಲಿ ಜೈಜರ ಕಾರ್ಯಕ್ರಮ ನಿರೂಪಿಸಿದರು.
