ರೋಸ್ಟರ್ ನಿಯಮಗಳ ಅನುಸಾರವಾಗಿ ಹೊರಗುತ್ತಿಗೆ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕೆಂದು ಸರಕಾರ ಸುತ್ತೋಲೆ ಹೊರಡಿಸಲು ಬೇಗ ಕ್ರಮಕೈಗೊಳ್ಳಬೇಕು. ಈಗಾಗಲೇ ಕರ್ನಾಟಕ ಸರ್ಕಾರವು ಹೊರಗುತ್ತಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅಳವಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ನೇಮಕಾತಿಗೆ ಪಾಲಿಸಬೇಕಾದ ನಿಯಮಗಳನ್ನು ಮಾರ್ಪಡಿಸಬೇಕೆಂದು ಗದಗ ಪಟ್ಟಣದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸಂಘರ್ಷ ಸಮಿತಿಯಿಂದ ನಡೆಸಿದ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಹಲವಾರು ವರ್ಷಗಳಿಂದ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳೇ ನಡೆಯದೆ ಅಹಿಂದ ಸಮುದಾಯದ ಲಕ್ಷಾಂತರ ನಿರುದ್ಯೋಗಿ ಯುವಸಮೂಹವು ಅಕ್ಷರಶಃ ಬೀದಿಗೆ ಬಿದ್ದಿತ್ತು. ಇಂತಹ ಹೊತ್ತಿನಲ್ಲಿ ತಮ್ಮ ಸರ್ಕಾರದ ಈ ಆದೇಶವು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಮುಖ ಹೆಜ್ಜೆ ಆಗಲಿದೆ. ಆದರೆ, ಸುತ್ತೋಲೆಯ 1 ಮತ್ತು 6ನೇ ಷರತ್ತುಗಳು ಈ ಆದೇಶದ ಸದುದ್ದೇಶದ ಆಶಯಗಳಿಗೆ ವಿರುದ್ಧವಾಗಿವೆ ಎಂದು ಡಿಎಸ್ಎಸ್ ಸಂಘಟನಾ ಸಂಚಾಲಕ ವೆಂಕಟೇಶಯ್ಯ ಹೇಳಿದರು.
“1ನೇ ಷರತ್ತಿನಲ್ಲಿ ಹೊರಗುತ್ತಿಗೆ ಮೀಸಲಾತಿ ನೀತಿಯು 45 ದಿನಗಳಿಗಿಂತ ಕಡಿಮೆ ಅವಧಿಯ ನೇಮಕಾತಿಗಳಿಗೆ ಅನ್ವಯಿಸುವುದಿಲ್ಲ ಎಂದಿದೆ. ಇದು ಮೀಸಲಾತಿ ವಿರೋಧಿಗಳಿಗೆ ಅನುಕೂಲಕರವಾಗಿದ್ದು ಅದನ್ನು ರದ್ದುಪಡಿಸಿ, ಮೀಸಲಾತಿ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಆದೇಶಿಸಬೇಕು” ಎಂದು ಹೇಳಿದರು.
“6ನೇ ಷರತ್ತಿನಲ್ಲಿ ಯಾವುದೇ ಇಲಾಖೆಯಲ್ಲಿ ಕನಿಷ್ಟ 20 ಮಂದಿ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವಾಗ ಮಾತ್ರ ಮೀಸಲಾತಿ ನೀತಿಯನ್ನು ಜಾರಿಗೊಳಿಸತಕ್ಕದ್ದು ಎಂದಿರುವುದು ತುಂಬಾ ಅವೈಜ್ಞಾನಿಕ ಮತ್ತು ದುರುದ್ದೇಶಪೂರಿತವಾಗಿದೆ. ಇಪ್ಪತ್ತಕ್ಕಿಂತ ಹೆಚ್ಚು ನೇಮಕಾತಿಗಳಿದ್ದಾಗ ಮಾತ್ರ ಮೀಸಲಾತಿ ನೀತಿ ಅನ್ವಯಿಸುತ್ತದೆಂದು ಸರ್ಕಾರವೇ ನಿರ್ಬಂಧ ಹೇಳಿದರೆ, ಇದ್ದಾಗ ಎಲ್ಲ ನೇಮಕಾತಿ ಉದ್ಯೋಗಗಳನ್ನು 20ರ ಒಳಗೇ ನಿಗದಿ ಮಾಡುತ್ತಾ ಹೋಗುವ ಮೀಸಲಾತಿ ವಂಚಕರಿಗೆ ಅನುಕೂಲ ಮಾಡಿ ಕೊಟ್ಟಂತಾಗುತ್ತದೆ. ಹಾಗಾಗಿ ಸುತ್ತೋಲೆಯ ಈ ಎರಡೂ ಷರತ್ತುಗಳನ್ನು ರದ್ದುಪಡಿಸಬೇಕು” ಎಂದು ವೆಂಕಟೇಶಯ್ಯ ಒತ್ತಾಯಿಸಿದರು.
ದಸಂಸ ಮುಖಂಡ ಶರೀಫ್ ಬಿಳಿಯಲಿ ಮಾತನಾಡಿ, “ಹುದ್ದೆಗಳ ಸಂಖ್ಯೆ ಎಷ್ಟೇ ಇರಲಿ ಮತ್ತು ಎಷ್ಟೇ ಅವಧಿಯದ್ದಾಗಿರಲಿ ಅಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಸ್ಟರ್ ನಿಯಮಗಳ ಅನುಸಾರವಾಗಿ ನೇಮಕಾತಿ ಪ್ರಕ್ರಿಯೆಗಳು ಕಡ್ಡಾಯವಾಗಿ ಇರಲೇಬೇಕೆಂದು ಸರಕಾರ ಸುತ್ತೋಲೆ ಹೊರಡಿಸಲು ಬೇಗ ಕ್ರಮಕೈಗೊಳ್ಳಬೇಕು. ಒಂದು ವೇಳೆ ಸರ್ಕಾರ ಈ ಸಂಬಂಧವಾಗಿ ಯಾವುದೇ ತುರ್ತು ಕ್ರಮ ಕೈಗೊಳ್ಳದೇ ಇದ್ದಲ್ಲಿ, ರಾಜ್ಯ ಮಟ್ಟದ ಹೋರಾಟವನ್ನು ಹಮ್ಮಿಕೊಳ್ಳಲಾಗುದು” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಹೊರಗುತ್ತಿಗೆ ನೇಮಕಾತಿ ನಿಯಮದ ಆದೇಶ ತಿದ್ದುಪಡಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ
ಪ್ರತಿಭಟನೆಯಲ್ಲಿ, ದಸಂಸ ಮುಖಂಡರು ಬಾಲರಾಜ್ ಅರಬರ್, ಕೃಷ್ಣ ಮಡಿವಾಳರ, ಮಲ್ಲಪ್ಪ ಬಾವಿಮನಿ, ಆನಂದ ಶಿಂಗಡಿ, ಮುತ್ತು ಬಿಳಿಯಲಿ, ಪಾಸು ಕಾಳೆ, ಎಚ್ ಎಸ್ ಜೋಗಣ್ಣವರ, ಮೌನೇಶ ಹಾದಿಮನಿ, ಪರಶುರಾಮ್ ಭಜಂತ್ರಿ, ಪರಮೇಶ್ ಕಾಳೆ ಹೊನ್ನಪ್ಪ ಸಾಕಿ, ಬಾಲರಾಜ್ ಅರಬರ, ನಾಗರಾಜ್ ಗೋಕಾವಿ, ಉಮರ್ ನಾಗಾವಿ, ಯಲ್ಲಪ್ಪ ರಾಮಗಿರಿ, ಪಾಕಿರೇಶ್ ರಾಮಗಿರಿ, ಮಲ್ಲೇಶ ಹೊಸಮನಿ, ಕರಿಯಪ್ಪ ಶಿರಹಟ್ಟಿ, ಮಾರುತಿ ಭಜಂತ್ರಿ ಇದ್ದರು.