“ಮಕ್ಕಳ ಆಂತರಿಕ ವಿಕಾಸಕ್ಕೆ ಗಣಿತ ಗಣಕ ಕಲಿಕಾ ತರಬೇತಿಗಳು ಸೃಜನಶೀಲವಾದ ಚಟುವಟಿಕೆಗಳಾಗಿರುತ್ತವೆ. ಶಿಕ್ಷಕರಲ್ಲಿಯೂ ನವೀನವಾದ ಬೋಧನಾ ಕೌಶಲ್ಯಗಳನ್ನು ಆಳವಡಿಸಿಕೊಳ್ಳಲು ಸಾಧ್ಯವಾಗುವುದು. ಗಣಿತದ ಮೂಲ ಅಂಶಗಳು ಮಕ್ಕಳಲ್ಲಿಯ ವ್ಯವಹಾರದ ಗಣಿತವನ್ನು ಉತ್ತೇಜಿಸಲು ಸರಕಾರ ಇಂತಹ ತರಬೇತಿಗಳನ್ನು ಆಯೋಜಿಸುವುದು ಉಪಯುಕ್ತವಾಗಿದೆ” ಎಂದು ಬಿ.ಆರ್. ದೇವರೆಡ್ಡಿ ಹೇಳಿದರು.
ಗದಗ ಜಿಲ್ಲೆಯ ಗದಗ ತಾಲೂಕಿನ ನಾಗಾವಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉಪನಿರ್ದೇಶಕರ ಕಾರ್ಯಾಲಯ, ಗದಗ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಗದಗ ಸಹಯೋಗದ ಅಡಿಯಲ್ಲಿ ಬೆಳದಡಿ, ಅಡವಿಸೋಮಾಪುರ, ಹುಯಿಲಗೋಳ, ಲಕ್ಕುಂಡಿ, ಕೋಟುಮುಡಗಿ ಮತ್ತು ಕಣಗಿನಹಾಳ 3,4,5 ನೇ ತರಗತಿ ಗಣಿತ ಬೋಧಿಸುವ ಶಿಕ್ಷಕರಿಗೆ ಗಣಿತ ಗಣಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತರಬೇತಿಯ ಮುಖ್ಯ ಅತಿಥಿ ಸುರೇಶ ಕೊಪ್ಪದ ಮಾತನಾಡಿ, “ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿಯಾಗಿದೆ. ಮಗುವಿನ ಬೆಳವಣಿಗೆಯಲ್ಲಿ ಸಮಾಜದ ನಿಯೋಗವಾದ ಶಾಲೆಯ ಪಾತ್ರ ಬಹುಮುಖ್ಯವಾಗಿದೆ. ಗಣಿತ ಮತ್ತು ಅಂಕ ಗಣಿತ ಮೂಲಕ್ರಿಯೆಗಳು ಮಗುವಿನ ಸರ್ವಾಂಗೀಣ ಪ್ರಗತಿಗೆ ಕಾರಣವಾಗಿದೆ. ಗಣಿತ ಕಲಿಕಾ ತರಬೇತಿಯಲ್ಲಿ ಇವು ಸಾಕಾರಗೊಳ್ಳಬೇಕು” ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಜೆ.ಎ. ಭಾವಿಕಟ್ಟಿ ಮಾತನಾಡಿ, ಶಿಕ್ಷಕರಿಗೆ ಗಣಿತ ಗಣಕ ಕಲಿಕಾ ತರಬೇತಿಯ ಉಪಯುಕ್ತತೆಯನ್ನು ತಿಳಿಸಿದರು. ಗಣಿತ ಬೋಧಿಸುವ ಶಿಕ್ಷಕರಿಗೆ ಈ ತರಬೇತಿಗಳು ಸೃಜನಶೀಲತೆಯನ್ನು ಬೆಳಸಿಕೊಳ್ಳಲು ಅನುಕೂಲವಾಗುತ್ತವೆ ಎಂದು ಹೇಳಿದರು.
ಶಾಲೆಯ ಪ್ರಧಾನ ಗುರುಗಳಾದ ಶ್ರೀಮತಿ ಎ.ವಿ. ಯಾಳವಾರ ಸರ್ವರನ್ನು ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಚಂದ್ರು ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನು ಓದಿದ್ದೀರಾ? ಗದಗ | ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲು ಅಭಿಯಾನ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್
ವಿರ್ದ್ಯಾಥಿನಿಯರಾದ ಮೇಘಾ ಮತ್ತು ಪಾರ್ವತಿ ಪ್ರಾರ್ಥಿಸಿದರು. ಸಹಶಿಕ್ಷಕರು ಶ್ರೀ ಶಂಭುಗೌಡ ಎಸ್ ತಮ್ಮನಗೌಡರ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ಸುರೇಶ ದೊಡ್ಡಮನಿ ವಂದಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕನಕಪ್ಪ ಬೇವಿನಮರದ ಹಾಗೂ ಆರು ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರು ಮತ್ತು ಶಿಕ್ಷಕಿಯರು, ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
