ಪ್ರಸ್ತುತ ತಾಂತ್ರಿಕ ಯುಗದಲ್ಲಿ ಮಾನವೀಯತೆ ಕಳೆದುಕೊಳ್ಳುತ್ತಿದೆ. ಮೊದಲೆಲ್ಲಾ ಗ್ರಾಮೀಣ ಭಾಗದಲ್ಲಿ ಹಿರಿಯರ ಮಾರ್ಗದರ್ಶನ ಪಡೆಯುತ್ತಿದ್ದರು. ಆದರೆ ಗ್ರಾಮೀಣ ಹಾಗೂ ನಗರಗಳಲ್ಲಿ ಪ್ರಸ್ತುತ ದಿನಗಳಲ್ಲಿ ಸಾಕಿ ಸಲಹಿದ ತಂದೆ ತಾಯಂದಿರನ್ನು ಮನೆಯಿಂದ ಹೋರ ಹಾಕುತ್ತಿರುವುದು ಶೋಚನೀಯ ಸಂಗತಿ ಎಂದು ಉಪನ್ಯಾಸಕ ಸೋಮಲಿಂಗ ಕರ್ಣಿ ಹೇಳಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಸ್ನೇಹ ಸಂಜೀವಿನಿ ವಿವಿಧ್ದೋದ್ದೇಶಗಳ ಹಾಗೂ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಮತ್ತು ವೈಭವ ನಿರ್ಗತಿಕರ ವೃದ್ಧಾಶ್ರಮದ ವಾರ್ಷಿಕೋತ್ಸವ ಸಮಾರಂಭ ಹಾಗೂ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು.
“ಹಿರಿಯರು ಮಾನವೀಯ ಮೌಲ್ಯಗಳನ್ನು ತಿಳಿಸುವ ಕತೆಗಳನ್ನು ಹೇಳುವ ಮೂಲಕ ಸಂಸ್ಕಾರ ಕಲಿಸಿಕೊಡುತ್ತಿದ್ದರು. ಆದರೆ ಆ ಸಂಸ್ಕಾರ ಅಳವಡಿಸಿಕೊಳ್ಳದ ಮನುಷ್ಯರು ಹಿರಿಯರನ್ನು ನೋಡಿಕೊಳ್ಳದೆ ಇರುವುದರಿಂದ ಇಂದು ವೃದ್ಧಾಶ್ರಮಗಳು ಆರಂಭವಾಗುತ್ತಿವೆ. ಮನುಷ್ಯರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಅವಶ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಪ್ರತಿಯೊಬ್ಬರೂ ವಿಶ್ವ ಮಾನವರಾಗಿ ಬದುಕಿ, ಸಾಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಲಯನ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗೋವಿಂದರಾಜ್ ಗುಡಿಸಾಗರ ಮಾತನಾಡಿ, “ತಮ್ಮ ಮಕ್ಕಳಿಂದ ದೂರವಾದ ಹಿರಿಯರ ಆರೈಕೆ, ಆರೋಗ್ಯ, ಯೋಗಕ್ಷೇಮ ನೋಡಿಕೊಳ್ಳುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ. ಯುವಕರು ಸೇರಿ ಇಂತಹ ಸಂಸ್ಥೆ ನಿರ್ಮಾಣ ಮಾಡಿ, ಹಿರಿಯರ ಸೇವೆ ಮಾಡುತ್ತಿರುವುದು ಮಹತ್ಕಾರ್ಯ” ಎಂದರು.
ಕಾರ್ಯಕ್ರಮದಲ್ಲಿ ಸಚಿನ್ ತಳವಾರ, ಸ್ನೇಹ ಸಂಜೀವಿನಿ ಸಂಸ್ಥೆ ಅಧ್ಯಕ್ಷ ಶಶಿಕುಮಾರ ಬೋಯಿಟೆ, ಬಸವರಾಜ್ ಹವಳದ ಹಾಗೂ ವಿಧ್ಯಾರ್ಥಿಗಳು ಸೇರಿದಂತೆ ಹಿರಿಯರು ಇದ್ದರು.