ಸೆಪ್ಟೆಂಬರ್ 22 ರವಿವಾರದಂದು ಮಧ್ಯಾಹ್ನ 3:30 ಗಂಟೆಗೆ ಗದಗ ಜಿಲ್ಲಾ ಲಿಂಗಾಯತ ಸಮಾವೇಶ ಶ್ರೀ ಜಗದ್ಗುರು ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜರುಗಲಿದೆ ಎಂದು ಮಹಾಸಭಾ ಮುಖಂಡ, ಶರಣತತ್ವ ಚಿಂತಕ ಅಶೋಕ ಬರಗುಂಡಿ ತಿಳಿಸಿದರು.
ಜಿಲ್ಲಾ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆಯುವ ಸಮಾವೇಶದ ಸಾನಿಧ್ಯವನ್ನು ಗದಗ ಜಗದ್ಗುರು ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ವಹಿಸಲಿದ್ದಾರೆ. ಬೆಳಗಾವಿ ಜಿಲ್ಲೆಯ, ಬಸವಬೆಳವಿ ಚರಂತೇಶ್ವರ ಮಠದ ಶರಣಬಸವ ಸ್ವಾಮಿಗಳು ಹಾಗೂ ವಿಜಯಪುರದ ಪ್ರಗತಿಪರ, ಶರಣತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ್ ಕ್ರಮವಾಗಿ ಲಿಂಗಾಯತ ಬೆಳೆದು ಬಂದ ಬಗೆ, ಅದರ ಇತಿಹಾಸ ಹಾಗೂ ಲಿಂಗಾಯತ ಜ್ವಲಂತವಾಗಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತಾದ ಚಿಂತನೆಗಳ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಎಲ್ಲ ಚಿಂತನೆಗಳ ನೇತೃತ್ವವನ್ನು ಸಮಾವೇಶದ ಮುಖ್ಯ ಅತಿಥಿಗಳಾಗಿರುವ, ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ನಡೆಸಿಕೊಡುತ್ತಾರೆ. ಜೆಎಲ್ಎಮ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚೆಟ್ಟಿ ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಅಂದು ಮುಂಜಾನೆ 10:30 ಗಂಟೆಗೆ ಕೇಂದ್ರ ಜಾಗತಿಕ ಲಿಂಗಾಯತ ಮಹಾಸಭಾದ ಆರನೇ ಸರ್ವಸಾಮಾನ್ಯ ವಾರ್ಷಿಕ ಮಹಾಸಭೆ ಜರುಗಲಿದೆ. ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮಿಗಳ ಸನ್ನಿಧಾನದಲ್ಲಿ ಈ ಮಹಾಸಭೆ ನಡೆಸಲು ಯೋಜಿಸಲಾಗಿದೆ. ಇದರಲ್ಲಿ ಕೇಂದ್ರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಕರ್ನಾಟಕದ ಎಲ್ಲ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು ಸದಸ್ಯರು, ಹೊರದೇಶದ ಪ್ರತಿನಿಧಿಗಳು, ವಿಶೇಷ ಆಹ್ವಾನಿತರು, ಮಹಾಪೋಷಕರು, ದಾಸೋಹಿ ಸದಸ್ಯರು, ಎಲ್ಲಾ ಪ್ರಾತಿನಿಧಿಕ ಸದಸ್ಯರು ಮಹಾಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಬರಗುಂಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಚೆಟ್ಟಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶೆಟ್ಟರ, ಕಾರ್ಯದರ್ಶಿ ಗೌರಕ್ಕ ಬಡಿಗಣ್ಣವರ, ಜಿಲ್ಲಾ ಮುಖಂಡರಾದ ಎಸ್.ಎ. ಮುಗದ, ಪ್ರಕಾಶ ಅಸುಂಡಿ, ಜಿ.ಬಿ. ಪಾಟೀಲ ಉಪಸ್ಥಿತರಿದ್ದರು.