ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಮುಖಂಡರು, ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಧನ ನೀಡಲು ಆದೇಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಕೊಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಕಳೆದ ಎರಡು ವರ್ಷಗಳಿಂದ ಕೊಟ್ಟಿಲ್ಲ. ಈ ಮಧ್ಯೆ ರಾಜ್ಯಸರ್ಕಾರ ಸಹಾಯಧನ ಪರಿಷ್ಕರಣೆ ಹೆಸರಿನಲ್ಲಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ಶೈಕ್ಷಣಿಕ ಸಹಾಯ ಧನವನ್ನೂ ಕಡಿತ ಮಾಡಿರುವುದನ್ನು ಎಸ್ಎಫ್ಐ ಮುಖಂಡರು ಖಂಡಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಮುಖಂಡ ಗಣೇಶ ರಾಠೋಡ್, ಸರ್ಕಾರಗಳು ಕಾರ್ಮಿಕರ ಪರವಾಗಿ, ಕಾರ್ಮಿಕ ಮಕ್ಕಳ ಪರವಾಗಿ ನೀತಿ ರೂಪಿಸಬೇಕು. ವಿಪರ್ಯಾಸವೆಂದರೆ ಸರ್ಕಾರ ಕಾರ್ಮಿಕ ಸೆಸ್ಸಹಣ ಜಮಾ ಆಗಿರುವುದನ್ನು, ಅವರ ಮಕ್ಕಳಿಗೆ ನೀಡಲು ಮೀನಾಮೇಷ ಎಣಿಸುತ್ತಿದೆ. ಇನ್ನೊಂದು ಕಡೆ ಕಾರ್ಮಿಕ ಹೆಸರಿನಲ್ಲಿ ಜಮಾ ಆಗಬೇಕಿದ್ದ ಹಣವನ್ನು ಜಮಾ ಆಗದಂತೆ ಕಾನೂನು ತಿದ್ದುಪಡಿ ಮಾಡಿದೆ.
ಕಾರ್ಮಿಕ ಕೋಡ್ ಮಾಡಿ ಅದರಲ್ಲಿ ಯಾವುದೇ ಕಟ್ಟಡ ಕಟ್ಟುವವರು ಕಾರ್ಮಿಕ ಹೆಸರಿನಲ್ಲಿ ಸೆಸ್ಸ್ ಹಣ ಕಟ್ಟುವ ನಿಯಮ ಇತ್ತು. ಅದು 2.5ಲಕ್ಷ ರೂ. ಮೇಲೆ ಖರ್ಚು ಮಾಡಿ ಕಟ್ಟಡ ಕಟ್ಟಿದರೆ ಅದರ ಸೆಸ್ಸನ್ನು ಕಟ್ಟಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಕಾರ್ಮಿಕರ ಕೋಡನಲ್ಲಿ ತಿದ್ದುಪಡಿಮಾಡಿ, 10ಲಕ್ಷ ರೂ. ಮೇಲ್ಪಟ್ಟ ಖರ್ಚು ಮಾಡಿ ಕಟ್ಟಡ ಕಟ್ಟಿದರೆ ಮಾತ್ರವೇ ಸೆಸ್ಸ್ ಎನ್ನುವ ನಿಯಮ ಮಾಡಿದ್ದರ ಭಾಗವಾಗಿ ಇಂದು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಹಣ ಇಲ್ಲದಂತೆ ಮಾಡಿದೆ ವಿನಃ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ನೀಡುವುದರಿಂದ ಅಲ್ಲಿನ ಹಣ ಖಾಲಿ ಆಗಿಲ್ಲ ಎಂಬ ಸಣ್ಣ ಜ್ಞಾನವು ಸರ್ಕಾರಕ್ಕೆ ಇಲ್ಲವಾಗಿದೆ ಎಂದು ಕಿಡಿಯಾಡಿದರು.
ಸರ್ಕಾರ ಕಾರ್ಮಿಕ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನಸಹಾಯವನ್ನು ಪರಿಷ್ಕರಣೆಯ ಹೆಸರಿನಲ್ಲಿ ಕಡಿತ ಮಾಡದೇ, ತಕ್ಷಣ ಕಳೆದ ಎರಡು ವರ್ಷಗಳ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಲು ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಗೆ ಸ್ವಾತಂತ್ರ್ಯವಾಗಿ ನಿರ್ಧಾರ ತೆಗೆದುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಧನ ನೀಡಲು ಆದೇಶ ನೀಡಬೇಕೆಂದು ಪರ್ತಿಕಾಗೋಷ್ಠಿಯಲ್ಲಿ ಎಸ್ಎಫ್ಐ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಚಂದ್ರು ರಾಠೋಡ, ಪ್ರದೀಪ್.ಎಮ್, ಶರಣು, ಮಹಾಂತೇಶ್ ಪೂಜಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.