ಐತಿಹಾಸಿಕ ಲಕ್ಕುಂಡಿಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪಟ್ಟಿಗೆ ಸೇರಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸುವ ಪ್ರಾಚ್ಯಾವಶೇಷ ಸಂಗ್ರಹಣೆ ಕಾರ್ಯ ಪರಿಣಾಮಕಾರಿಯಾಗಿ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಪೂರಕ ಚಟುವಟಿಕೆಗಳು ನಡೆಯಲಿ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ಅವರು ಹೇಳಿದರು.
ಗದಗ ಜಿಲ್ಲೆಯ ಲಕ್ಕುಂಡಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಲಕ್ಕುಂಡಿಯ ತಿಪ್ಪೆಯಲ್ಲಿಯೂ ಕೂಡಾ ಐತಿಹಾಸಿಕ ಶಿಲೆಗಳು ದೊರೆಯುತ್ತವೆ. ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲಾ ಒಂದು ಐತಿಹಾಸಿಕ ವಸ್ತು ಸಿಗುತ್ತದೆ. ಲಕ್ಕುಂಡಿಯಲ್ಲಿ ಹೊಸ ದೇವಾಸ್ಥಾನ, ಕಟ್ಟಡಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಬೇಕಾಗಿಲ್ಲ. ಈಗ ಇರುವ ಐತಿಹಾಸಿಕ ವಸ್ತುಗಳನ್ನೇ ಸರಿಯಾಗಿ ಹೊಂದಿಸಿ, ಸ್ವಚ್ಛಗೊಳಿಸಿ ಇಡುವ ಕಾರ್ಯವಾಗಬೇಕು” ಎಂದರು.
“ಐತಿಹಾಸಿಕ ವಸ್ತುವಿನ ಬಗ್ಗೆ ಅರಿವಿಲ್ಲದೆ ತಮ್ಮ ಹಿತ್ತಲೊಳಗೆ ಹುಗಿದು ಬಿದ್ದಿರುವ ಶಿಲೆಗಳು, ಗೋಡೆಗಳ ಮೇಲಿರುವ ಶಾಸನಗಳಾಗಿರಬಹುದು, ನಾಣ್ಯ, ಮನೆಯ ಕೆಳಗಿರುವ ಗುಡಿ ಅಥವಾ ಬಾವಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಗ ಗ್ರಾಮದ ಮೇಲಿನ ಅಭಿಮಾನದಿಂದ, ತ್ಯಾಗ ಮನೋಭಾವದಿಂದ ಸ್ವಯಂ ಪ್ರೇರಣೆಯಿಂದ ಎಲ್ಲರೂ ಸಹಕಾರ ನೀಡುತ್ತಾರೆನ್ನುವ ವಿಶ್ವಾಸವಿದೆ” ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
“ಪ್ರಾವಾಸೋದ್ಯಮ ಇಲಾಖೆಯ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ, ರೂಟ್ ಮ್ಯಾಪ್ ಹಾಕಿಗೊಂಡು, ಅಲಂಕಾರಿಕ ಪಾಲಿಕೆ ತೆಗೆದುಕೊಂಡು ಗ್ರಾಮದ ಪ್ರತಿ ಮನೆಗಳಿಗೆ ಹೋಗಿ ಅವರ ಮನೆಯಲ್ಲಿರುವ ಐತಿಹಾಸಿಕ ವಸ್ತುಗಳನ್ನು ಅವರ ಹೆಸರಿನಲ್ಲಿ ನೊಂದಾಯಿಸಿ ಸ್ವೀಕೃತ ಮಾಡಿಕೊಳ್ಳಬೇಕು” ಎಂದು ಸೂಚಿಸಿದರು.
“ಈ ವಿಶೇಷ ಅಭಿಯಾನದ ಎಲ್ಲ ತಂಡಗಳು ಗುರಿ ಹೊಂದಿ ಕೆಲಸ ಮಾಡಿ ಕನಿಷ್ಟ 30-40 ಪ್ರಾಚ್ಯಾವಶೇಷ ವಸ್ತುಗಳನ್ನು ಸಂಗ್ರಹ ಮಾಡುವ ಕೆಲಸವಾಗಬೇಕು. ಸಂಗ್ರಹವಾದ ಎಲ್ಲ ಐತಿಹಾಸಿಕ ವಸ್ತುಗಳನ್ನು ಸುರಕ್ಷಿತವಾಗಿ ಒಂದೇಡೆ ಇರಿಸಬೇಕು. ಮುಂದೆ ನಿಯಮಾನುಸಾರವಾಗಿ ಆಯುಕ್ತರು ಕಾರ್ಯಪ್ರವೃತ್ತರಾಗಬೇಕು” ಎಂದು ತಿಳಿಸಿದರು.
ಪ್ರವಾಸೋದ್ಯಮ ನಿರ್ದೇಶಕ ಡಾ ಕೆ ವಿ ರಾಜೇಂದ್ರ ಮಾತನಾಡಿ, “ಮನೆ ಮನೆಗೆ ಪಾಲಿಕೆ ತೆಗೆದುಕೊಂಡು ಹೋಗುವ ಮೊದಲೇ ಎನ್ಸಿಸಿ, ಸ್ತ್ರೀ ಶಕ್ತಿ ಗುಂಪು, ಸ್ವಯಂ ಸೇವಕರಿಗೆ ಐತಿಹಾಸಿಕ ವಸ್ತುಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು” ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, “ನವೆಂಬರ್ 22 ರಿಂದ 24ರವರೆಗೆ ಲಕ್ಕುಂಡಿಯಲ್ಲಿ ನಡೆಯುವ ಪ್ರಾಚ್ಯಾವಶೇಷ ಸಂಗ್ರಹಣಾ ಅಭಿಯಾನ ಶಿಸ್ತುಬದ್ಧವಾಗಿ ನಡೆಯಲು ಪ್ರಾಧಿಕಾರದ ಆಯುಕ್ತರು ರೂಪರೇಷೆ ಸಿದ್ಧಪಡಿಸಬೇಕು. ಅಲ್ಲದೇ ಸಂಗ್ರಹಿಸಿದ ಪ್ರಾಚೀನ ಅವಶೇಷಗಳನ್ನು ಸುರಕ್ಷಿತವಾಗಿ ಶೇಖರಿಸಲು ವ್ಯವಸ್ಥೆ ಕಲ್ಪಿಸಬೇಕು. ಒಟ್ಟಾರೆ ಅಭಿಯಾನ ಯಶಸ್ಸಿಗೆ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಒಂದು ಟ್ವೀಟ್ನಿಂದ ಏನಾಗುತ್ತದೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ!
ಸಭೆಯಲ್ಲಿ ಲಕ್ಕುಂಡಿ ಪ್ರಾಧಿಕಾರದ ರಾಜ್ಯ ಸಲಹಾ ಸಮಿತಿ ಸದಸ್ಯ ಸಿದ್ದು ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪೂಜಾರ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ್ ಎಸ್, ಜಿ ಪಂ ಉಪಕಾರ್ಯದರ್ಶಿ ಸಿ ಆರ್ ಮುಂಡರಗಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಬಿ ಸಂಕದ, ಶರಣು ಗೊಗೇರಿ, ಎಸಿ ಗಂಗಪ್ಪ, ವೀರಯ್ಯಸ್ವಾಮಿ, ಅ ದ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.