ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಕೋಟ್ಪಾ ಕಾಯ್ದೆ-2003 ಕುರಿತು ಹಾಗೂ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತು ಪೊಲೀಸರಿಗೆ ತರಬೇತಿ ಕಾರ್ಯಾಗಾರ ನಡೆದಿದೆ.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯುಕ್ತಾಶ್ರಯದಲ್ಲಿ ಕಾರ್ಯಾಗಾರ ನಡೆದಿದೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಗುರುಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ, ತಂಬಾಕು ಬಳಕೆಯಿಂದ ಪರಿಸರ ಹಾಗೂ ನಮ್ಮ ಸುತ್ತ ಮುತ್ತಲಿನ ಪ್ರದೇಶ ಕಲುಷಿತ ಹಾಗೂ ಅನಾರೋಗ್ಯ ವಾತಾವರಣ ಉಂಟಾಗುತ್ತಿರುವದನ್ನು ತಡೆಗಟ್ಟಲು ಕ್ರಮವಹಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಎಸ್.ಎಸ್.ನೀಲಗುಂದ ಅವರು ಕಾರ್ಯಗಾರ ಉದ್ದೇಶಿಸಿ ಮಾತನಾಡುತ್ತ, ತಂಬಾಕು ನಿಯಂತ್ರಣ ಕುರಿತು ನಮ್ಮ ಇಲಾಖೆಯ ವತಿಯಿಂದ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳಿಗೆ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವದರ ಮೂಲಕ ಜಿಲ್ಲೆಯ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮಕೈಗೊಳ್ಳಲಾಗಿದೆ, ಕೋಟ್ಪಾ ಕಾಯ್ದೆ ಅನುಷ್ಟಾನಕ್ಕೆ ಮುಖ್ಯವಾಗಿ ಪೊಲೀಸ್ ಇಲಾಖೆಯ ಪ್ರಮುಖ ಪಾತ್ರವಹಿಸುತ್ತದೆ ಅದೇ ರೀತಿ ಸಹಕಾರ ಕೂಡ ನೀಡುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸಮೀಕ್ಷಣಾಧಿಕಾರಿಗಳಾದ ಡಾ. ವೆಂಕಟೇಶ ರಾಠೋಡ ಅವರು ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಭಯಾನಕ ಖಾಯಿಲೆಗಳು, ಅಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಶೀಘ್ರ ಚಿಕಿತ್ಸೆ ಪಡೆಯಲು ತಿಳಿಸಿದರು, ಜಿಲ್ಲಾ ವ್ಯಸನಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿವಿರವಾದ ಮಾಹಿತಿ ನೀಡಿದರು.
ಉಪ ಪೊಲೀಸ್ ಅಧೀಕ್ಷಕರು ಜೆ.ಎಚ್.ಇನಾಮದಾರ ಅವರು ಮಾತನಾಡಿ, ತಂಬಾಕು ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಇನ್ನಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಕೋಟ್ಪಾ ಕಾಯ್ದೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷಾನಗೊಳಿಸುವಲ್ಲಿ ನಮ್ಮ ಇಲಾಖೆಯ ಸಹಕಾರ ಸದಾ ಇರುವದಾಗಿ ತಿಳಿಸಿದರು.
ನಗರದ ಜಿಮ್ಸ್ ಸಹ ಪ್ರಾಧ್ಯಾಪಕರಾದ ಡಾ. ಅರವಿಂದ ಕರಿನಾಗಣ್ಣವರ್ ಅವರು ಮಾತನಾಡಿ, ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿಯಲ್ಲಿ ತಂಬಾಕಿನಲ್ಲಿರುವ ನಿಕೋಟಿನ್ ಅಂಶ ದೇಹದಲ್ಲಿ ಸೇರಿ ನರಮಂಡಲದ ಕಾರ್ಯದ ಮೇಲೆ ಪರೀಣಾಮ ಬೀರಿ ರಕ್ತ ಹಾಗೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತೆಯ ಉಂಟಾಗಿ ದೇಹದ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ತಂಬಾಕು ತ್ಯಜಿಸಲು ನಮ್ಮ ಜೀವನ ಶೈಲಿಯಲ್ಲಿ ಕೈಗೊಳಬೇಕಾದ ಬದಲಾವಣೆಗಳ ಕುರಿತು ಪರಿಣಾಮಕಾರಿ ರೀತಿಯಲ್ಲಿ ತಿಳಿಸಿದರು.
ಎನ್.ಟಿ.ಸಿ.ಪಿ. ಜಿಲ್ಲಾ ಸಲಹೆಗಾರ ಗೋಪಾಲ ಸುರಪುರ ಅವರು ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ಕುರಿತು ಮಾತನಾಡುತ್ತಾ ತಂಬಾಕು ಬಳಕೆ ಹಾಗೂ ಮಾರಾಟ ಕೋಟ್ಪಾ ಕಾಯ್ದೆಯಡಿ ಮಾಡಲು ಸೆಕ್ಷನ್ 4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸೆಕ್ಷನ್5 ತಂಬಾಕು ಉತ್ಪನ್ನಗಳ ನೇರ ಪರೋಕ್ಷ ಜಾಹಿರಾತು ನಿಷೇಧ, ಸೆಕ್ಷನ್ 6ಎ 18 ವರ್ಷದೊಳಗಿನವರಿಗೆ ನಿಷೇಧ, 6ಬಿ ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಗಜದ ವರೆಗೆ ತಂಬಾಕು ನಿಷೆಧ, ಸೆಕ್ಷನ್ 7 ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಆರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ, ಈ ಕಾಯ್ದೆಗಳ ಅನುಷ್ಟಾನ ಸ್ಟಾಪ್ ಟೊಬ್ಯಾಕೋ ಆ್ಯಫ್ ಹಾಗೂ ತಂಬಾಕು ಮಾರಾಟ ಪರವಾನಿಗೆ ಕುರಿತು ಮಾತನಾಡಿದರು.
ಕಾರ್ಯಕ್ರಮವನ್ನು ಎಸ್.ಎಸ್.ಪೀರಾ ಕಾರ್ಯಕ್ರಮ ನಿರೂಪಿಸಿರು. ಕು. ಯಮುನಾ ಪ್ರಾರ್ಥಿಸಿದರು. ವಿಠ್ಠಲ್ ನಾಯ್ಕ ಸ್ವಾಗತಿಸಿದರು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ.ಎಸ್.ರಬ್ಬನಗೌಡರ ವಂದಿಸಿದರು, ಕಾರ್ಯಕ್ರಮದಲ್ಲಿ ಬಿ.ಎ.ಜಾದವ ವೃತ್ತ ಪೊಲೀಸ್ ನಿರೀಕ್ಷಕರು, ಶಿವಕುಮಾರ ಬಗಾಡೆ, ಪೈಯಾಜ.ಎಂ ಹಾಗೂ ಜಿಲ್ಲಾ ಸಮೀಕ್ಷಾ ಘಟಕದ ಸಿಬ್ಬಂದಿಗಳು, ಆರ್.ಡಿ.ಪಿ.ಆರ್ ವಿದ್ಯಾರ್ಥಿಗಳಾದ ಪವಿತ್ರಾ, ಸಿದ್ದು.ಎಸ್, ಯಮುನಾ ಹಾಜರಿದ್ದರು.