2025-26ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೊಸ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಅದರಂತೆ ಗದಗ ಜಿಲ್ಲೆಗೆ ಕೆಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಮೆಡಿಕಲ್ ಕಾಲೇಜಿನಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಕ್ಯಾಥ್ ಲ್ಯಾಬ್ ಸೌಲಭ್ಯದೊಂದಿಗೆ ಸೂಪರ್ ಸ್ಪೆಷಾಲಿಟಿ ಕಾರ್ಡಿಯಾಕ್ ಪ್ರಾರಂಭಿಸಲು ಅನುದಾನ ನಿಗದಿ ಮಾಡಲಾಗಿದೆ. ಕೆ-ಶಿಫ್ 4 ಯೋಜನೆಯಡಿಯಲ್ಲಿ 5736 ಕೋಟಿ ರೂ ವೆಚ್ಚದಲ್ಲಿ ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನೊಂದಿಗೆ 875 ಕಿಮೀ ಉದ್ದದ 11 ರಸ್ತೆ, ಗಿಣಿಗೇರ-ಮುಂಡರಗಿ 41 ಮೀಟರ್ ರಸ್ತೆ ಅಭಿವೃದ್ಧಿಪಡಿಸಲು ಮುಂದಾಗಿರುವುದು ಮೂಲ ಸೌಕರ್ಯಕ್ಕೆ ಒತ್ತು ನೀಡಿದಂತಾಗಿದೆ.
ಜಿಲ್ಲೆಯ ಲಕ್ಕುಂಡಿಯಲ್ಲಿನ ಐತಿಹಾಸಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಪ್ರಚ್ಯಾವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತುಸಂಗ್ರಹಾಲಯವನ್ನು ಪ್ರಾರಂಭಿಸುವುದು ಜಿಲ್ಲೆಗೆ ನೀಡಿರುವ ಮತ್ತೊಂದು ಪ್ರಮುಖ ಯೋಜನೆಯಾಗಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಕೂಡ ಸುಧಾರಿಸುತ್ತದೆ ಎನ್ನುವುದು ಜನತೆಯ ಮಾತು.
ಹೊಸದಾಗಿ ರಚನೆಯಾದ 63 ತಾಲೂಕುಗಳ ಪೈಕಿ 2024-25ರಲ್ಲಿ ಗಜೇಂದ್ರಗಡದ ಪ್ರಜಾಸೌಧಕ್ಕೆ ಅನುಮೋದನೆ ನೀಡಲಾಗಿತ್ತು. 2025-26ನೇ ಸಾಲಿನ ಬಜೆಟ್ನಲ್ಲಿ ಲಕ್ಷ್ಮೇಶ್ವರ ಪ್ರಜಾಸೌಧ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ.
ರಾಜ್ಯ ವಿಪತ್ತು ಉಪಶಮನ ನಿಧಿ ಹಾಗೂ ರಾಷ್ಟ್ರೀಯ 20 ಉಪಶಮನ ನಿಧಿ ಅನುದಾನದ ಅಡಿಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಕೋಟುಮಚಗಿ ಗ್ರಾಮದಿಂದ ವೀರಪುರ ಗ್ರಾಮದವರೆಗೆ ಹಿರೇಹಳ್ಳ ಹೂಳೆತ್ತುವ ಮೂಲಕ 60 ಕೋಟಿ ರೂ ವೆಚ್ಚದಲ್ಲಿ ಪ್ರವಾಹ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಇದು ಜಿಲ್ಲೆಯ ಜನತೆ ಕಾಂಗ್ರೆಸ್ ಸರ್ಕಾರದ ಮೇಲಿಟ್ಟಿರುವ ಭರವಸೆಗೆ ಪೂರಕವಾಗಿದೆ.
ಜಿಲ್ಲೆಯಲ್ಲಿ ವರ್ಷಗಳಿಂದ ಬರಿದಾಗಿದ್ದ ಶಿರಹಟ್ಟಿ ಕೆರೆಯನ್ನು ತುಂಬಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಕೆರೆ ತುಂಬಿಸುವ ಕಾರ್ಯ ಶೀಘ್ರ ನಡೆದರೆ ಈ ಬೇಸಿಗೆ ಹೊತ್ತಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಜತೆಗೆ ಅಂತರ್ಜಲ ಮಟ್ಟ ಸುಧಾರಿಸುತ್ತದೆ. ಕೆರೆಯ ಸುತ್ತ ಮುತ್ತಲಿನ ಬೇಸಿಗೆ ಬೆಳೆಗೆ ಸಮರ್ಪಕ ನೀರು ಪೂರೈಕೆಯಾಗುತ್ತದೆ.
ರೈಲ್ವೆಯೊಂದಿಗೆ 50:50 ಅನುಪಾತದಲ್ಲಿ ಒಂಬತ್ತು ಯೋಜನೆಗಳನ್ನು ಕೈಗೆತ್ತುಕೊಂಡಿದೆ. ಏಳು ಯೋಜನೆಗಳ ಭೂಸ್ವಾಧೀನದ ಪೂರ್ಣ ವೆಚ್ಚವನ್ನು ರಾಜ್ಯ ಸರಕಾರವೇ ಭರಿಸುತ್ತದೆ. ಒಂಬತ್ತು ಯೋಜನೆಗಳಲ್ಲಿ ಗದಗ-ವಾಡಿಯು ಒಂದಾಗಿದೆ.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ, ಕೃಷಿ ಅಭಿವೃದ್ಧಿ, ಶಿಕ್ಷಣಾಭಿವೃದ್ಧಿ, ಪ್ರವಾಸೋದ್ಯಮಕ್ಕೆ ಒತ್ತು, ಕೈಗಾರಿಕೆ, ಉದ್ಯೋಗ ಸೃಷ್ಟಿ ಸೇರಿದಂತೆ ಮತ್ತೂ ನಿರೀಕ್ಷೆಗಳನ್ನು ಗದಗ ಜನತೆ ಇಟ್ಟುಕೊಂಡಿತ್ತ. ಆದರೆ ಈ ಬಜೆಟ್, ಬೆರಳೆಣಿಕೆಯಷ್ಟು ಬೇಡಿಕೆಗಳನ್ನು ಹೊರತುಪಡಿಸಿ ಬಹುತೇಕ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಜಿಲ್ಲೆಯ ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.