ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದ ಬಳಿ ವಿದೇಶಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಒಡಿಶಾ ರಾಜ್ಯದ ಬಿಬಾಸ್(42) ಎಂಬ ವ್ಯಕ್ತಿಯ ಶವ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.
ಮಲ್ಲಾಪುರದ ವಿದ್ಯುತ್ ಉತ್ಪಾದನೆ ಘಟಕದ ಬಳಿ ಶವ ಪತ್ತೆಯಾಗಿದ್ದು, ಅಗ್ನಿಶಾಮಕ, ಪೊಲೀಸ್ ಇಲಾಖೆ ಹಾಗೂ ಸ್ಥಳೀಯರ ನೆರವಿನಿಂದ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದ ಪ್ರವಾಸಿಗ ಡೇನಿಯಲ್ ಹಾಗೂ ಇಸ್ರೇಲ್ ಮೂಲದ ಮಹಿಳೆ, ಗಂಗಾವತಿ ತಾಲೂಕಿನ ಆನೆಗೊಂದಿಯ ಹೋಂಸ್ಟೇವೊಂದರ ಮಾಲಕಿ, ಮಹಾರಾಷ್ಟ್ರದ ನಾಸಿಕ್ನ ಪಂಕಜ್ ಪಟೇಲ್ ಹಾಗೂ ಒಡಿಶಾದ ಬಿಬಾಸ್ ಎಂಬುವರು ಜೊತೆಯಾಗಿ ವಿಹಾರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗುರುವಾರ ಮಧ್ಯರಾತ್ರಿ ಅಪರಿಚಿತ ಮೂವರು ಯುವಕರು ಈ ಗುಂಪಿನ ಮೇಲೆ ದಾಳಿ ಮಾಡಿದ್ದರು. ಹಣಕ್ಕೆ ಬೇಡಿಕೆ ಇಟ್ಟು, ಈ ಗುಂಪಿನಲ್ಲಿದ್ದ ಪುರುಷರನ್ನು ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಿ, ವಿದೇಶಿ ಮಹಿಳೆ ಮತ್ತು ಸ್ಥಳೀಯ ಮಹಿಳೆಯ ಮೇಲೆ ಆರೋಪಿಗಳು ಲೈಂಗಿಕ ಶೋಷಣೆ ಮಾಡಿ ಅತ್ಯಾಚಾರ ಎಸಗಿರುವ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸ್ಥಳೀಯ ಪೊಲೀಸರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಕಾಲುವೆಗೆ ತಳ್ಳಿದ್ದ ವ್ಯಕ್ತಿಗಳ ಪೈಕಿ ಡೇನಿಯಲ್ ಮತ್ತು ಪಂಕಜ್ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. ಒಡಿಶಾದ ಬಿಬಾಸ್ ಕಾಲುವೆಯಲ್ಲಿ ನಾಪತ್ತೆಯಾಗಿದ್ದರು. ಶುಕ್ರವಾರ ಇಡೀ ದಿನ ಹುಡುಕಾಡಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ ಮಲ್ಲಾಪುರದಲ್ಲಿ ಶವ ಪತ್ತೆಯಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳ ಕುರಿತು ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಆರೋಪಿಗಳ ಹುಕಾಟಕ್ಕೆ ಶೋಧಕಾರ್ಯ ಆರಂಭವಾಗಿದೆ. ಆರೋಪಿಗಳು ಸಿಕ್ಕ ಬಳಿಕ ಹೆಚ್ಚಿನ ಮಾಹಿತಿ ಹೊರಬರಬೇಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಅರಣ್ಯ ಪಾಲಾದ ಲಕ್ಷ್ಮಣಪುರ ಗ್ರಾಮ : ಪರಿಹಾರವೂ ಇಲ್ಲ, ಪುನರ್ವಸತಿಯು ಇಲ್ಲ
ಪ್ರಕರಣದ ಹಿನ್ನೆಲೆ: ಗುರುವಾರ ತಡರಾತ್ರಿ ತಾಲೂಕಿನ ಪ್ರವಾಸಿತಾಣ ಸಾಣಾಪುರ ಕೆರೆ ಬಳಿ ಜಂಗ್ಲಿಗೆ ಹೋಗುವ ರಸ್ತೆ ಮಧ್ಯದಲ್ಲಿನ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ಗಿಟಾರ್ ಬಾರಿಸುತ್ತ ಕುಳಿತಿದ್ದ ಅಮೆರಿಕ ಹಾಗೂ ಇಸ್ರೇಲ್ ಮೂಲದ ಇಬ್ಬರು ವಿದೇಶಿ ಹಾಗೂ ಮೂವರು ದೇಶಿಯ ಪ್ರವಾಸಿಗರ ಮೇಲೆ ಮೂವರು ಯುವಕರು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ವಾಗ್ವಾದ ನಡೆದು ಪರಸ್ಪರ ಕೈಕೈ ಮಿಲಾಯಿಸಿದ್ದು, ಪ್ರವಾಸಿಗರ ತಂಡದಲ್ಲಿದ್ದ ಒಡಿಶಾದ ಪುರುಷ ಪ್ರವಾಸಿಗನನ್ನು ಆರೋಪಿಗಳು ಕಾಲುವೆಗೆ ತಳ್ಳಿದ್ದರು. ಬಳಿಕ ಇವರ ಗುಂಪಿನಲ್ಲಿದ್ದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪವೂ ಕೇಳಿ ಬಂದಿತ್ತು. ಈ ಬಗ್ಗೆ ದೂರು ಕೂಡ ದಾಖಲಾಗಿತ್ತು. ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಒಡಿಶಾ ಮೂಲದ ಪ್ರವಾಸಿ ಯುವಕ ಬಿಬಾಸ್ ಶವ ಪತ್ತೆಯಾಗಿದೆ.