ತುಮಕೂರು ಜಿಲ್ಲೆಯ ಜೀವನಾಡಿ ಹೇಮಾವತಿ ನೀರು ವಂಚಿತರಾಗುವ ಮುನ್ನ ಜಿಲ್ಲೆಯ ಎಲ್ಲಾ ಮುಖಂಡರು ಎಚ್ಚೆತ್ತು ರಾಜಕಾರಣ ದೂರವಿಟ್ಟು ಎಕ್ಸ್ ಪ್ರೆಸ್ ಕೆನಾಲ್ ವಿರೋಧಿ ಹೋರಾಟಕ್ಕೆ ಕೈ ಜೋಡಿಸಿ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಕರೆ ನೀಡಿದರು.
ತಾಲ್ಲೂಕಿನ ಕಡಬ ಗ್ರಾಮದಿಂದ ಬೈಕ್ ಜಾಥಾ ಮೂಲಕ ಕಾಡಶೆಟ್ಟಿಹಳ್ಳಿ ಬಳಿಯ ಕೆನಾಲ್ ಕಾಮಗಾರಿ ಬಳಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹೇಮಾವತಿ ನೀರು ತಾಲ್ಲೂಕಿನ ರೈತರ ಬದುಕಿಗೆ ಹತ್ತಿರವಾಗಿದೆ. ಬರಡು ಭೂಮಿಯಾಗಿದ್ದ ಎಷ್ಟೋ ಜಮೀನುಗಳಲ್ಲಿ ಒಂದು ತೆಂಗು ಅಡಿಕೆ ಕಂಗೊಳಿಸುತ್ತದೆ. ಆದರೆ ಈಗ ಹೇಮಾವತಿ ನೀರು ನಮ್ಮಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ. ನಿಯಮ ಮೀರಿ ಅವೈಜ್ಞಾನಿಕವಾಗಿ ಪೈಪ್ ಲೈನ್ ಕೆನಾಲ್ ಮೂಲಕ ನೀರು ತೆಗೆದುಕೊಳ್ಳುವ ಸರ್ಕಾರದ ಪ್ರಭಾವಿ ಸಚಿವರ ಪ್ರಯತ್ನಕ್ಕೆ ತಡೆಯೊಡ್ಡಬೇಕಿದೆ ಎಂದು ಕರೆ ನೀಡಿದರು.
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ಹೋರಾಟ ಸಮಿತಿ ರಚನೆಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ಗೃಹ ಸಚಿವರ ಮನೆಗೆ ಮುತ್ತಿಗೆ, ತಾಲ್ಲೂಕುವಾರು ಹೋರಾಟ ನಡೆದಿದೆ. ಇದರ ಫಲವಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಆದರೆ ಅಧಿಕಾರಿಗಳು ಬೃಹತ್ ಗಾತ್ರದ ಪೈಪ್ ತರಲು ಅವಕಾಶ ಮಾಡಿದರು. ಕೆಲ ಭಾಗದಲ್ಲಿ ಪೊಲೀಸ್ ಇಲಾಖೆ ಬಳಸಿ ಕೆಲಸ ಮಾಡಲು ಮುಂದಾದರು. ಎಲ್ಲವೂ ತಡೆದರೂ ಮತ್ತೇ ಕಳ್ಳಾಟ ಶುರುವಾಗಿದೆ. ಹೀಗೆ ರೈತರ ತಾಳ್ಮೆ ಪರೀಕ್ಷೆ ಮಾಡಿದರೆ ಪರಿಣಾಮ ಕೆಟ್ಟದಾಗಿ ಕಾಣಲಿದೆ. ಇದು ಸರ್ಕಾರಕ್ಕೆ ಎಚ್ಚರಿಕೆ ಎಂದರು.

ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಅಕ್ರಮವಾಗಿ ನಡೆಯುತ್ತಿರುವ ಈ ಕಾಮಗಾರಿ ಕಾನೂನು ನಿಯಮವನ್ನು ಗಾಳಿಗೆ ತೂರಲಾಗಿದೆ. ಮುಖ್ಯ ನಾಲೆಯ ಮೂಲಕ ನೀರಿನ ಹಂಚಿಕೆ ಹೆಚ್ಚಿಸಿ ತೆಗೆದುಕೊಂಡು ಹೋಗಲಿ. ಆದರೆ ಇಲ್ಲಿ ಜಿಲ್ಲೆಯ ಹಂಚಿಕೆಯ ಪಾಲಿನಲ್ಲೇ ಮಾಗಡಿಯತ್ತ ಹರಿಸಲು ಮುಂದಾಗಿರುವುದು ಅಧಿಕಾರ ದುರ್ಬಳಕೆಯಾಗಿದೆ. ಯಾವುದೇ ಭೂಮಿ ವಶದ ಪ್ರಕ್ರಿಯೆ ನಡೆದಿಲ್ಲ. ಸರ್ಕಾರದ ಜಮೀನು ಹುಡುಕಿ ಅಲ್ಲಿ ಕೆಲಸ ಆರಂಭಿಸಿ ನಂತರ ರಸ್ತೆಯ ಬದಿಯಲ್ಲೇ ಪೈಪ್ ಅಳವಡಿಸಲು ಮುಂದಾಗಿದ್ದಾರೆ. ನಾಲೆಯ ಕೆಳ ಭಾಗದಲ್ಲಿ 12 ಅಡಿ ವ್ಯಾಸದ ಪೈಪ್ ನೀರನ್ನು ಸಂಪೂರ್ಣ ಸೆಳೆಯುತ್ತದೆ. ಹನಿ ನೀರು ಗುಬ್ಬಿ ಸೇರಿದಂತೆ ಆರು ತಾಲ್ಲೂಕಿಗೆ ಸಿಗೋದಿಲ್ಲ. ಈ ಬಗ್ಗೆ ಕಾಂಗ್ರೆಸ್ ಸಚಿವರು, ಶಾಸಕರು ಮಾತಾಡುತ್ತಿಲ್ಲ. ರೈತರೇ ಒಗ್ಗೂಡಿ ಉಗ್ರ ಹೋರಾಟ ನಡೆಸಿ ನೀರು ಉಳಿಸಿಕೊಳ್ಳುವ ಅನಿವಾರ್ಯವಿದೆ. ತಾಲ್ಲೂಕಿನ ಸಾವಿರಾರು ರೈತರು ಹೋರಾಟಕ್ಕೆ ಧುಮುಕಿ ಎಂದು ಕರೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಮಾತನಾಡಿ ಸ್ಥಳೀಯ ಗ್ರಾಮ ಪಂಚಾಯಿತಿ ತನ್ನದೇ ಆಡಳಿತ ಅಧಿಕಾರ ಹೊಂದಿದೆ. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಸಲು ಗ್ರಾಮ ಪಂಚಾಯಿತಿ ಒಪ್ಪಿಗೆ ಅತ್ಯವಶ್ಯಕ. ಸಭೆಯಲ್ಲಿ ಅನುಮೋದನೆ ಆಗಿದ್ದಲ್ಲಿ ಮಾತ್ರ ಕೆಲಸ ನಡೆಯಬೇಕು. ಗ್ರಾಮ ಸಭೆ ನಡೆಸಿ ರೈತರ ಆಗುಹೋಗು ಚರ್ಚಿಸಬೇಕು. ಯಾವುದನ್ನೂ ನಡೆಸದೆ ಏಕಾಏಕಿ ಮುಖ್ಯನಾಲೆಯಿಂದ ನೀರು ತೆಗೆದುಕೊಳ್ಳುವುದು ಕಾನೂನು ಉಲ್ಲಂಘನೆ. ಕಾನೂನು ಹೋರಾಟಕ್ಕೆ ನ್ಯಾಯಾಲಯ ಮೆಟ್ಟಿಲೇರುವುದು ಮುಂದಿನ ನಿರ್ಧಾರ ಆಗಲಿದೆ ಎಂದರು.
ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಸ್ಥಗಿತಗೊಂಡ ಪೈಪ್ ಲೈನ್ ಕೆಲಸವನ್ನು ಪೊಲೀಸರ ಕಾವಲಿನಲ್ಲಿ ನಡೆಸಲು ಮುಂದಾದ ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲು ಬೈಕ್ ಜಾಥಾ ನಡೆಸಲಾಗುತ್ತಿದೆ. ನೂರಾರು ಸಂಖ್ಯೆಯ ರೈತರ ಎಚ್ಚರಿಕೆಗೆ ಬೆಲೆ ನೀಡದೇ ಕೆಲಸ ಮುಂದುವರೆದರೆ ಸಾವಿರಾರು ರೈತರು ಹೇಮಾವತಿ ಕಚೇರಿ ಮುತ್ತಿಗೆ ಹಾಕುತ್ತಾರೆ. ಬೆಂಗಳೂರು ಚಲೋ ಕೂಡಾ ನಡೆಸಿ ವಿಧಾನಸೌಧ ಮುತ್ತಿಗೆ ಹಾಕುತ್ತಾರೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಚನ್ನಬಸವಣ್ಣ, ಮಂಜುನಾಥ್, ಶಿವಕುಮಾರ್, ಸತೀಶ್, ಮಹದೇವಯ್ಯ, ಯತೀಶ್, ನರಸಿಂಹಮೂರ್ತಿ, ಬಸವರಾಜು ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.