ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜನರಿಗೆ ಸ್ಥಳೀಯವಾಗಿ ನಿರಂತರವಾಗಿ ಅಕುಶಲ ಕೆಲಸವನ್ನು ಒದಗಿಸುವ ಐಇಸಿ ಕಾರ್ಯಕ್ರಮದಡಿ ದುಡಿಯೋಣ ಬಾ ಅಭಿಯಾನಕ್ಕೆ ತಾಲ್ಲೂಕು ಪಂಚಾಯಿತಿ ಇಓ ಶಿವಪ್ರಕಾಶ್ ಚಾಲನೆ ನೀಡಿದರು.
ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಹೋಬಳಿ ಎಂ.ಎಚ್.ಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಅಭಿಯಾನ ಕಾರ್ಯಕ್ರಮ ಹಾಗೂ ಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮನೆ ಮನೆಗೆ ಕರಪತ್ರ ಹಂಚಿ ದುಡಿಯೋಣ ಬಾ ಯೋಜನೆ ಬಗ್ಗೆ ವ್ಯಾಪಕವಾಗಿ ಜಾಗೃತಿ ಮೂಡಿಸಿ ಮಾತನಾಡಿದರು.
ಕನಿಷ್ಠ 200 ಕೂಲಿಕಾರರಿಗೆ ಈ ಬೇಸಿಗೆಯಲ್ಲಿ ಮೂರು ತಿಂಗಳು ನಿರಂತರ ಉದ್ಯೋಗವನ್ನು ಒದಗಿಸಲಾಗುತ್ತಿದೆ. ಸ್ವ ಸಹಾಯ ಸಂಘಗಳ ಸಭೆಯನ್ನು ಆಯೋಜನೆ ಮಾಡಿ ಯೋಜನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ಹೆಚ್ಚಾಗಿ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರಿಪಿಸಲಾಗುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಹಾಗೂ ಬ್ಯಾನರಗಳನ್ನು ಅಳವಡಿಸಿ ಪ್ರಚಾರಮಾಡಲಾಗುತ್ತಿದೆ. ಅಕುಶಲ ಕೂಲಿ ಕಾರ್ಮಿಕರು ತಮ್ಮ ಜಮೀನಿನಲ್ಲಿ ಬದು ನಿರ್ಮಾಣ, ಪೌಷ್ಟಿಕ ಕೈತೋಟ, ಅಂಗಾಂಶ ಬಾಳೆ, ಪಪ್ಪಾಯಿ, ನುಗ್ಗೆ, ಸೀಬೆ, ದಾಳಿಂಬೆ, ಮಲ್ಲಿಗೆ, ಗುಲಾಬಿ ಇನ್ನಿತರ ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಬಹುದು ಎಂದ ಅವರು ಅಭಿಯಾನದ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನುಗಳಲ್ಲಿ ಬದು ಅಥವಾ ಕೃಷಿ ಹೊಂಡ ಅಥವಾ ತೆರೆದ ಬಾವಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು.
ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ಕೆಲಸ ಒದಗಿಸಲು ಈಗಾಗಲೇ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಕೆ, ತಾಂತ್ರಿಕ ಮತ್ತು ಆಡಳಿತ ಮಂಜೂರಾತಿ, ಸಾರ್ವಜನಿಕ ಮಾಹಿತಿ ಫಲಕ ಅಳವಡಿಕೆ ಮತ್ತು ಜಿಯೋ ಟ್ಯಾಗ್ ಸೇರಿದಂತೆ ಕಾಮಗಾರಿ ಪ್ರಾರಂಭಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ತಾಲ್ಲೂಕು ಐಇಸಿ ಸಂಯೋಜಕ ರಾಘವೇಂದ್ರ ಮಾತನಾಡಿ ಬೇಸಿಗೆ ಕಾಲದಲ್ಲಿ ಉದ್ಯೋಗ ಅರಸಿ ಗ್ರಾಮಗಳನ್ನು ತೊರೆಯುವ ಗುಳೆ ಹೋಗುವ ಘಟನೆಗಳು ಹೆಚ್ಚಾಗಿ ಕಾಣುತ್ತಿದೆ. ಈ ಹಿನ್ನಲೆ ಅರವತ್ತು ದಿನಗಳ ಕಾಲ ಕೆಲಸ ಮಾಡಿದ್ದಲ್ಲಿ 16,500 ರೂಗಳನ್ನು ದುಡಿಯಬಹುದು. ಈ ಹಣ ಮುಂದಿನ ಕೃಷಿ ಚಟುವಟಿಕೆಗೆ, ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬಹುದು. ಮರಳುಗಾಡಿನಲ್ಲಿ ನೀರು ಸಿಕ್ಕಂತೆ ದುಡಿಯೋಣ ಬಾ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕಿದೆ. ಈ ಹಿನ್ನಲೆ ಯೋಜನೆಯಿಂದ ದೂರ ಉಳಿಯುವ ಫಲಾನುಭವಿಗಳಿಗೆ ಅರಿವು ಮೂಡಿಸುವ ಕೆಲಸ ಐಇಸಿ ಕಾರ್ಯಕ್ರಮ ಮೂಲಕ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಪಿಡಿಓ ಕೆ.ಎಂ.ಶೇಖರ್ ಮಾತನಾಡಿ ಗ್ರಾಮ ಮಟ್ಟದ ಉಸ್ತುವಾರಿ ಸಮಿತಿಗಳನ್ನು ರಚಿಸಿ ಅಭಿಯಾನ ಯಶಸ್ವಿಗೆ ಬದ್ಧವಾಗಿ ಪಂಚಾಯಿತಿ ಕೆಲಸ ಮಾಡಲಿದೆ. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಅಗತ್ಯವಿರುವೆಡೆ ಶಿಶುಪಾಲನೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದ ಅವರು ಕಾಲುವೆಗಳ ಪುನಶ್ಚೇತನ, ಕೆರೆ ಹೂಳೆತ್ತುವುದು, ಸಮಗ್ರವಾಗಿ ಕೆರೆ ಅಭಿವೃದ್ದಿ ಪಡಿಸುವುದು, ಹಳ್ಳಗಳನ್ನು ಹೂಳೆತ್ತುವುದು, ನಾಲಾ ಹೂಳೆತ್ತುವುದು, ಬಸಿಗಾಲುವೆ ನಿರ್ಮಾಣ , ಅರಣ್ಯ ಪ್ರದೇಶದಲ್ಲಿ ಬ್ಲಾಕ್ ಪ್ಲಾಂಟೇಶನ್ ಕಾಮಗಾರಿಗಳನ್ನು 2025-26 ನೇ ಸಾಲಿನ ಹೊಸ ಆರ್ಥಿಕ ವರ್ಷದ ಎಪ್ರಿಲ್ 01 ರಿಂದ ಪ್ರಾರಂಬಿಸಲಾಗುವುದು. ಇದರ ಪ್ರಯೋಜನ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಪಂಚಾಯಿತಿ ಸದಸ್ಯೆ ರಾಮಕ್ಕ, ಸಿಬ್ಬಂದಿಗಳಾದ ಕೆ.ಎನ್.ಗೀತಾ, ಜಯಶ್ರೀ, ಕೃಷಿ ಸಖಿ, ಪಶುಸಖಿ ಸೇರಿದಂತೆ ಪಂಚಾಯಿತಿ ಎಲ್ಲಾ ಸಿಬ್ಬಂದಿಗಳು ಇದ್ದರು.