ಹಲವು ಜಾತಿ ಜನಾಂಗದಿಂದ ಅಪಸ್ವರ ಕೇಳಿ ಬಂದ ಹಿನ್ನಲೆ ವೈಜ್ಞಾನಿಕ ರೀತಿಯಲ್ಲಿ ಇರದ ಜಾತಿ ಗಣತಿ ಪುನರ್ ಪರಿಶೀಲಿಸಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಒತ್ತಾಯಿಸಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ 50 ಲಕ್ಷ ವೆಚ್ಚದ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಯೂನಿಟ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಅವರು ಸಣ್ಣಪುಟ್ಟ ಸಮುದಾಯಗಳು ಸಹ ಜಾತಿ ಗಣತಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿನ್ನಲೆ ಮತ್ತೊಮ್ಮೆ ಪರಿಶೀಲನೆ ಅಗತ್ಯ ಎಂದು ಪುನರುಚ್ಚರಿಸಿದರು.
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗಿಸಿದ ಪ್ರಕರಣ ಖಂಡನೀಯ. ಇದು ಸರ್ಕಾರದ ಆದೇಶವಲ್ಲ. ಕಾಮನ್ ಸೆನ್ಸ್ ಇಲ್ಲದ ಕೆಲ ಸಿಬ್ಬಂದಿಗಳಿಂದ ಈ ಘಟನೆ ನಡೆದಿದೆ. ಜನಿವಾರದಿಂದ ಯಾವ ತೊಂದರೆ ಆಗುತ್ತಿತ್ತು ತಿಳಿದಿಲ್ಲ. ಧಾರ್ಮಿಕ ಭಾವನೆಗೆ ದಕ್ಕೆ ತಂದು ಕೆಲಸ ಮಾಡುವ ಅಗತ್ಯವಿಲ್ಲ. ಮಿತಿ ಮೀರಿದ ನಡವಳಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದ ಅವರು ತಲೆ ಕೆಟ್ಟ ರೀತಿ ಹೇಳಿಕೆ ನೀಡುವುದು ಈಗಿನ ರಾಜಕಾರಣದಲ್ಲಿ ಫ್ಯಾಶನ್ ಆಗುತ್ತಿದೆ. ಹಿಂದೆ ಪ್ರತಿ ಪದಕ್ಕೂ ಗಂಭೀರತೆ ಇರುತ್ತಿತ್ತು. ಮನಬಂದಂತೆ ಸುಳ್ಳಿನ ಸರಮಾಲೆ ಹಾಕುತ್ತಾರೆ. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಪ್ರತಿದಿನ ಈ ಸಾಲಿನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ : ತುಮಕೂರು | ಶೋಷಿತರ ಬದಕು ಬದಲಿಸಿದ ʼಅಂಬೇಡ್ಕರ್ʼ ಕೋಚಿಂಗ್ ಸೆಂಟರ್
ಬಹು ಬೇಡಿಕೆಯ ಡಿಜಿಟಲ್ ಸ್ಕ್ಯಾನಿಂಗ್ ಯಂತ್ರ ಗುಬ್ಬಿಗೆ ಬಂದಿದೆ. ತಾಂತ್ರಿಕ ಹುದ್ದೆ ಮಂಜೂರಾತಿ ಮಾಡಿಸಲು ಹಾಗೂ ದೊಡ್ಡಗುಣಿ, ಬಿದರೆ ಆಸ್ಪತ್ರೆಗೆ ಅವಶ್ಯ ಮಂಜೂರಾತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಬಳಿ ಚರ್ಚಿಸಿದ್ದೇನೆ ಎಂದ ಅವರು ಎಚ್ ಎಎಲ್ ಘಟಕ ಗುಬ್ಬಿ ಆಸ್ಪತ್ರೆಗೆ ಎರಡು ಕೋಟಿ ಹಣ ನೀಡಿದೆ. ಜೊತೆಗೆ 1.65 ಕೋಟಿ ರೂಗಳಲ್ಲಿ ನವೀಕರಣ ಕೆಲಸ ಕೂಡ ನಡೆದಿದೆ. ಡಯಾಲಿಸಿಸ್ ಮೂರು ಹಾಸಿಗೆ ಕಾರ್ಯ ನಿರ್ವಹಿಸಿದೆ. ಜೊತೆಗೆ ಜಿ.ಹೊಸಹಳ್ಳಿ ಕ್ರಾಸ್ ಬಳಿ ಮಂಜೂರಾದ ಐದು ಎಕರೆ ಪ್ರದೇಶದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವ ತಯಾರಿ ಸರ್ಕಾರದ ಹಂತಕ್ಕೆ ತಲುಪಿದೆ ಎಂದರು.
ಸಚಿವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂಬುದಕ್ಕೆ ಯಾವುದೇ ವೈಯಕ್ತಿಕ ಕಾರಣಗಳಿಲ್ಲ. ಸಮಯ ಸಿಕ್ಕಾಗ ಎಲ್ಲಾ ಕಾರ್ಯಕ್ರಮಕ್ಕೆ ಹೋಗಿದ್ದೇನೆ. ಮನಸ್ಸಿಗೆ ಒಪ್ಪದ ಕಾರ್ಯಕ್ರಮಕ್ಕೆ ಹೋಗುವುದಿಲ್ಲ. ಸಚಿವರಿಗೂ ನನಗೂ ಯಾವುದೇ ವೈಮನಸ್ಯ ಇಲ್ಲ. ನಾನೇನು ಅವರ ಆಸ್ತಿ ಹೊಡೆದಿಲ್ಲ. ಅವರೇನು ನನ್ನ ಆಸ್ತಿ ಹೊಡೆದಿಲ್ಲ ಎಂದು ಉತ್ತರ ನೀಡಿದ ಅವರು ನನಗೆ ಬಕೇಟ್ ರಾಜಕಾರಣ ಬರೋಲ್ಲ. ಸಲಾಂ ಹೊಡೆದು ಅಧಿಕಾರ ಎಂದೂ ಪಡೆದಿಲ್ಲ. ಇಂದ್ರ ಚಂದ್ರ ಎಂದು ಹೊಗಳಿ ಅಧಿಕಾರ ಪಡೆಯುವ ಜಾಯಮಾನ ನನ್ನದಲ್ಲ. ಅಧಿಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಖಡಕ್ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ಮಹಮ್ಮದ್ ಸಾದಿಕ್, ಕುಮಾರ್, ಸಿ.ಮೋಹನ್, ರೇಣುಕಾ ಪ್ರಸಾದ್, ಶೌಕತ್ ಆಲಿ, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಬಗರ್ ಹುಕುಂ ಸಮಿತಿ ಸದಸ್ಯ ನರಸಿಂಹಯ್ಯ, ಅಶೋಕ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದು ಮಾಧವ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಕೇಶವರಾಜ್ ಇತರರು ಇದ್ದರು.