ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಶಿಕ್ಷಣ ಇಲಾಖೆ ಸೂಕ್ತ ವೇದಿಕೆ ಸೃಷ್ಟಿಸಿಕೊಟ್ಟಿದೆ. ಶಿಕ್ಷಕ ವರ್ಗ ಸಹ ಮಕ್ಕಳಿಗೆ ತರಬೇತಿ ನೀಡಿ ಸಂಕುಚಿತ ಮನೋಭಾವ ತೊಡೆದು ಪ್ರತಿಭೆಗೆ ನೀರೆರೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಬಿ.ನರಸಿಂಹಮೂರ್ತಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಕಲ್ಗುಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮೂಲಕ ಹತ್ತು ಹಲವು ಗ್ರಾಮೀಣ ಪ್ರತಿಭೆ ಇಂದು ಬಹುಮುಖ ಪ್ರತಿಭೆಗಳಾಗಿ ಹೊರ ಹೊಮ್ಮಿದೆ ಎಂದರು.
ಶಾಲೆಯ ವಾರ್ಷಿಕೋತ್ಸವ ಮಕ್ಕಳ ಆಸಕ್ತಿ ಅನುಸಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುವು ಮಾಡಲಾಗಿ ರಾಮಾಯಣ ನಾಟಕವನ್ನು ಈ ಶಾಲೆ ಮಕ್ಕಳು ಪ್ರದರ್ಶನ ಮಾಡಿರುವುದು ವಿಶೇಷ ಎನಿಸಿದೆ. ಪೌರಾಣಿಕ ಐತಿಹಾಸಿಕ ನಾಟಕಗಳು ಮಕ್ಕಳಲ್ಲಿ ಪ್ರಭಾವ ಬೀರಿದೆ. ವೇದಿಕೆಯಲ್ಲಿ ನಿರ್ಭಯವಾಗಿ ಮಕ್ಕಳು ಮಾತನಾಡುವುದು ಒಂದು ಕಲೆಯೇ ಸರಿ. ಇದು ಮಕ್ಕಳ ಮುಂದಿನ ಭವಿಷ್ಯ ಕೂಡಾ ಉಜ್ವಲವಾಗುತ್ತದೆ ಎಂದರು.

ಸರ್ಕಾರಿ ಶಾಲೆಯು ಕನ್ನಡ ಶಾಲೆಗಳಾಗಿ ಉಳಿದಿವೆ. ಬಿಸಿಯೂಟ, ಸಮವಸ್ತ್ರ, ಹಾಲು, ಮೊಟ್ಟೆ, ರಾಗಿ ಹಂಬ್ಲಿ ಹೀಗೆ ಹಲವು ಪೌಷ್ಟಿಕ ಆಹಾರ ನೀಡಿ ಮಕ್ಕಳ ಅಪೌಷ್ಟಿಕತೆ ದೂರ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಅಲ್ಲಿನ ಶಿಕ್ಷಕರು ಅರ್ಹತೆ ಇರುವ ಕಾರಣ ಮಕ್ಕಳ ಬೆಳೆವಣಿಗೆ ಸೂಕ್ತ ಪಾಠ ಪ್ರವಚನ ಕೊಡುತ್ತಾರೆ. ಈ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ವ್ಯಾಮೋಹ ಬಿಟ್ಟು ಪೋಷಕರು ಗ್ರಾಮೀಣ ಸರ್ಕಾರಿ ಶಾಲೆಯನ್ನು ಬೆಳೆಸಿ ಪೋಷಿಸಬೇಕು ಎಂದು ಮನವಿ ಮಾಡಿದರು.
ನಲ್ಲೂರು ಗ್ರಾಪಂ ಅಧ್ಯಕ್ಷ ವತ್ಸಲಕುಮಾರ್ ಮಾತನಾಡಿ ಹಳ್ಳಿಗಾಡಿನ ಮಕ್ಕಳಿಗೆ ಸೂಕ್ತ ಶಿಕ್ಷಣ ಸಿಗದೆ ಕೃಷಿಕರಾಗಿಯೇ ಬೆಳೆದ ಕಾಲ ಈಗಿಲ್ಲ. ಹಳ್ಳಿಗಳಲ್ಲಿ ಕಾನ್ವೆಂಟ್ ವ್ಯಾಮೋಹ ಶಾಲಾ ವಾಹನಗಳಾಗಿ ಬಂದು ಪೋಷಕರಲ್ಲಿ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಆದರೆ ಸಾವಿರಾರು ವೆಚ್ಚ ಮಾಡಿಕೊಂಡು ಶಿಕ್ಷಣ ನೀಡುವ ಬದಲು ಸರ್ಕಾರಿ ಶಾಲೆಯನ್ನೇ ಬಳಸಿಕೊಂಡರೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಈ ಬಗ್ಗೆ ಮಕ್ಕಳ ತಂದೆತಾಯಿಯರು ಯೋಚಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಾಮಾಯಣ, ಲವಕುಶ ಕಾಳಗ ಯಕ್ಷಗಾನ ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಗಂಗಣ್ಣ, ರೇಣುಕಮ್ಮ, ಆನಂದಪ್ಪ, ಎಸ್ ಡಿಎಂಸಿ ಅಧ್ಯಕ್ಷ ರಂಗನಾಥಯ್ಯ, ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವೆಂಕಟೇಶಪ್ಪ, ಗೌರವಾಧ್ಯಕ್ಷ ಪಟೇಲ್ ಮೂಡ್ಲಪ್ಪ, ವಾಲ್ಮೀಕಿ ಸಂಘದ ಅಧ್ಯಕ್ಷ ರಾಕೇಶ್, ಡಿಎಸ್ಎಸ್ ಮುಖಂಡರಾದ ಕೋಟೆ ಕಲ್ಲೇಶ್, ರಂಗಸ್ವಾಮಿ, ಪಾಂಡು, ಶಿಕ್ಷಕರಾದ ಅನಂತಕುಮಾರ್, ನಿವೇದಿತಾ, ರಂಗಪ್ಪ, ಆರಕ್ಷಕ ಸಿಬ್ಬಂದಿ ಕೆಂಪರಾಜು
