ಹೊಸಪೇಟೆಯಲ್ಲಿರುವ ತುಂಗಭದ್ರಾ ನೀರನ್ನು ಉಳಿಸುವಂತೆ ಒತ್ತಾಯಿಸಿ ವಿಜಯನಗರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಆ ಬಳಿಕ ಹಗರಿಬೊಮ್ಮನಹಳ್ಳಿಯ ತಹಶೀಲ್ದಾರ್ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ರಾಜ್ಯ ಕಾರ್ಯದರ್ಶಿ ಗೋಣಿಬಸಪ್ಪ ಬಿ.ಮಾತನಾಡಿ, “ವಿಜಯನಗರ ಜಿಲ್ಲೆಯ ತುಂಗಭದ್ರ ಡ್ಯಾಮ್ನ 19 ನೇ ಗೇಟ್ ಸಂಪೂರ್ಣ ಕಿತ್ತು ಹೋಗಿದ್ದು, ಅದನ್ನು ಕೂಡಲೆ ರಿಪೇರಿ ಮಾಡಿಸಿ, ನೀರನ್ನು ರಕ್ಷಿಸಬೇಕು. ಈ ನದಿಯ ನೀರನ್ನು ನಂಬಿ ಮೂರು ರಾಜ್ಯಗಳ 22 ಜಿಲ್ಲೆಯ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಈಗ ನೀರು ಸಂಪೂರ್ಣ ಪೋಲಾಗುವುದರಿಂದ ಬೆಳೆಗಳಿಗೆ ಹಾಕಿರುವ ಬಂಡವಾಳ ನಷ್ಟವಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ತುಂಗ ಭದ್ರ ಹಿನ್ನೀರಿನ ಏತ ನೀರಾವರಿ ಯೋಜನೆಗಳನ್ನು ನಂಬಿ ಕೋಟ್ಯಾನುಗಟ್ಟಲೆ ಬಂಡವಾಳ ಹಾಕಿ ಹಲವು ರೈತರು ಕೃಷಿ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ರಸ್ಟ್ ಗೇಟ್ ಒಡೆದು ನೀರು ಹೋಗುತ್ತಿರುವುದರಿಂದ ಹಾಕಿರುವ ಬಂಡವಾಳ ವಾಪಸು ಬರದೇ ರೈತರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾಲದ ಹೊರೆಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರಬಹುದು. ಇದನ್ನು ತಡೆಗಟ್ಟಬೇಕಾದರೆ, ಎಲ್ಲ ರೈತರಿಗೆ ಬೆಳೆ ಪರಿಹಾರ ಕೂಡಲೇ ನೀಡಬೇಕು. ಈ ಬಗ್ಗೆ ಕೇಂದ್ರ ಮತ್ತೆ ರಾಜ್ಯ ಸರ್ಕಾರಗಳು ಸಮೀಕ್ಷೆ ಮಾಡಿ, ಬೆಳೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿ. ಗೋಣಿಬಸಪ್ಪ, ಎನ್. ವೀರಣ್ಣ, ಹರಟಿಕಾಳಪ್ಪ, ಕೆ. ಶಿವಣ್ಣ, ವಿ. ನಾಗೇಂದ್ರಪ್ಪ, ರವಿಕುಮಾರ್,ಬಿ. ಯಮುನೂರಪ್ಪ, ಬಗಪ್ಪ, ಬಿ. ಬಸವರಾಜ್ ಇನ್ನಿತರರು ಉಪಸ್ಥಿತರಿದ್ದರು.
ಹಕ್ಕೊತ್ತಾಯಗಳು:
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಪರಿಹಾರ ಒದಗಿಸಿ ಕೊಡಬೇಕು.
- ತುಂಗಭದ್ರ ಡ್ಯಾಮ್ನ ಕ್ರಸ್ಟ್ ಗೇಟ್ನ ಚೇನ್ ಕಟ್ಟಾಗಿ ಗೇಟು ಮುರಿಯಲು ಕಾರಣರಾದ ಬೇಜವಾಬ್ದಾರಿ ಅಧಿಕಾರಿಗಳನ್ನು ಈ ಕೂಡಲೆ ಅಮಾನತುಗೊಳಿಸಬೇಕು
- ಕೂಡಲೆ ಗೇಟ್ ರಿಪೇರಿ ಮಾಡಬೇಕು.
- ಆಯಕಟ್ಟಿನ ರೈತರ ಮುಂಗಾರಿನ ಬೆಳೆಗೆ ಮತ್ತು ಏತ ನೀರಾವರಿ ಯೋಜನೆಯ ಎಲ್ಲ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ಪರಿಹಾರವನ್ನು 1 ಎಕರೆಗೆ ರೂ 25,000ದಂತೆ ಕೂಡಲೇ ನೀಡಬೇಕು.
