ಆನೆ ದಾಳಿಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹೆಚ್ ಕೆ ಸುರೇಶ್, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಸಾರ್ವಜನಿಕವಾಗಿ ಬಟ್ಟೆಗಳನ್ನು ಬಿಚ್ಚಲಾಗುತ್ತದೆಂದು ಬೆದರಿಕೆ ಹಾಕಿದ್ದಾರೆ. ಇಂತಹ ಶಾಸಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಅರಣ್ಯ ಸಂರಕ್ಷಣಾಧಿಕಾರಿಗಳ ಸಂಘದಿಂದ ಉಪವಿಭಾಗಾಧಿಕಾರಿ ಮಾರುತಿ ಮುಖಾಂತರ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ಕಳೆದ ಎರಡ್ಮೂರು ದಿನಗಳ ಹಿಂದೆ ಬೇಲೂರು ವಲಯದಲ್ಲಿ ಆನೆ ದಾಳಿಯಿಂದ ಮೃತಪಟ್ಟ ಪ್ರಕರಣದ ಸಂದರ್ಭದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್ ಕೆ ಸುರೇಶ್ ಇಲಾಖಾ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯಿಂದ ಕಾಡಾನೆಗಳ ಕುರಿತು ಬೆಳ್ಳಾವರ ಗ್ರಾಮದಲ್ಲಿ ಪ್ರಚಾರ ಪಡಿಸಿ, ಮುಂಜಾಗೃತ ಕ್ರಮ ವಹಿಸುವಂತೆ ಗ್ರಾಮಾಸ್ಥರಿಗೆ ಸೂಕ್ತ ಎಚ್ಚರಿಕೆ ನೀಡಿ, ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಆಕಸ್ಮಿಕವಾಗಿ ಕಾಡಾನೆ ದಾಳಿಯಿಂದ ಬೆಳ್ಳಾವರ ಗ್ರಾಮದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಶಾಸಕ ಸುರೇಶ್ ಅವರು ಸಂರಕ್ಷಣಾಧಿಕಾರಿಗಳಿಗೆ ಸಾರ್ವಜನಿಕವಾಗಿ ಬಟ್ಟೆ ಬಿಚ್ಚುವುದಾಗಿ ಹೇಳಿ ಅವಮಾನ ಮಾಡಿದಾರೆ” ಎಂದು ಅರಣ್ಯ ಇಲಾಖೆಯ ಅಧಿಕಾರಿ ಕೃಷ್ಣ ಆರೋಪಿಸಿದರು.
“ಕಾಡಾನೆ ದಾಳಿಯಿಂದ ವೃದ್ಧೆಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹಾಸನ ಅರಣ್ಯ ವಿಭಾಗದ ಹಿರಿಯ ಅರಣ್ಯಾಧಿಕಾರಿಗಳು, ಅರಣ್ಯ ಸಂರಕ್ಷಣಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಎಲ್ಲ ಕ್ಷೇತ್ರ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ, ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಮ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ, ಬೇಲೂರು ಕ್ಷೇತ್ರದ ಶಾಸಕ ಹೆಚ್ ಕೆ ಸುರೇಶ್ ಅವರು ಅಧಿಕಾರಿಗಳು ಹಾಗೂ ಸಾರ್ವಜನಿಕರು ನೆರೆದಿದ್ದಂತಹ ಸಂದರ್ಭದಲ್ಲಿ ಸರ್ಕಾರದ ಕಾನೂನಾತ್ಮಕ ರೀತಿಯಲ್ಲಿ ವಿಚಾರ ತಿಳಿದುಕೊಳ್ಳದೆ ಏಕಾಏಕಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಮನಬಂದಂತೆ ನಿಂದಿಸಿದ್ದಾರೆ” ಎಂದು ತಿಳಿಸಿದರು.
“ಹಾಸನ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಾರ್ವಜನಿಕರ ಮುಂದೆಯೇ, ಏಕವಚನದಲ್ಲಿ ಬೈದು ಹಿಯಾಳಿಸಿ, ಸಾರ್ವಜನಿಕವಾಗಿ ಭಾರತೀಯ ಅರಣ್ಯ ಸೇವೆಗೆ ಸೇರಿದ ಇಲಾಖೆಯ ಅತ್ಯುನ್ನತ ಅಧಿಕಾರಿಯ ಹುದ್ದೆಗೆ, ಅಧಿಕಾರಿಗಳ ಕರ್ತವ್ಯಗಳಿಗೆ ಮತ್ತು ಅಧಿಕಾರಿಗಳ ಕುಟುಂಬದವರಿಗೆ ಒಬ್ಬ ಜವಾಬ್ದಾರಿಯುತ ಹುದ್ದೆಯಲ್ಲಿರುವ ಶಾಸಕರು ಅವಮಾನ ಮಾಡಿದ್ದು, ಇಲಾಖೆ ಸಿಬ್ಬಂದಿಯವರು ಕಾಡಾನೆ ಹಾವಳಿ ತಡೆಗಟ್ಟಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ತಿಳುವಳಿಕೆ ಇದ್ದರೂ ಮನಬಂದಂತೆ ಅವಾಚ್ಯ ಶಬ್ಧಗಳನ್ನು ಬಳಸಿದ್ದಾರೆ” ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.
“ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿಗಳ ಆತ್ಮಸ್ಥೈರ್ಯವನ್ನು ಕುಗ್ಗಿಸಿರುತ್ತಾರೆ. ಶಾಸಕರು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಾರ್ವಜನಿಕವಾಗಿ ಬಟ್ಟೆಗಳನ್ನು ಬಿಚ್ಚಲಾಗುತ್ತದೆಂದು ಬೆದರಿಕೆ ಹಾಕಿ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಈ ಘಟನೆಯನ್ನು ತಮ್ಮ ದುರುದ್ದೇಶಕ್ಕಾಗಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರ ಪ್ರಚೋದನೆಗಳಿಂದ ಅರಣ್ಯ ಇಲಾಖೆಯ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಯಾವುದೇ ಅನಾಹುತಗಳಾದರೂ ಶಾಸಕರೇ ನೇರ ಹೊಣೆಗಾರರಾಗಿರುತ್ತಾರೆ” ಎಂದು ಉಪ ಅರಣ್ಯ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಮಾಧ್ಯಮದೊಂದಿಗೆ ಮಾತಾಡಿದರು.
ಇದನ್ನೂ ಓದಿದ್ದೀರಾ?ಹಾಸನ l ಮುಂದುವರೆದ ಮೈಕ್ರೋ ಫೈನಾನ್ಸ್ ಕಿರುಕುಳ; ಕೊಟ್ಟಿಗೆಗೆ ಬಿದ್ದಿದ್ದ ಕುಟುಂಬ ಮರಳಿ ಮನೆಗೆ
ಈ ವೇಳೆ ಅರಣ್ಯ ಅಧಿಕಾರಿಗಳ ಸಂಘದ ಯತೀಶ್, ದಿಲೀಪ್, ಚಂದ್ರೇಗೌಡ, ಮಧುಸೂದನ್, ಕಲಂದರ್, ಮೋಹನ್, ತೇಜಸ್ವಿನಿ ಹಾಗೂ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.
