ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ದಾಖಲಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿ ಇದೇ 30ರಂದು ಬೃಹತ್ ಹೋರಾಟ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಜನಪರ ಚಳವಳಿಗಳ ಒಕ್ಕೂಟ ನಿರ್ಧರಿಸಿದೆ.
ಹಾಸನ ಜಿಲ್ಲಾ ಕಸಾಪ ಭವನದಲ್ಲಿ ನಡೆದ ರಾಜ್ಯಮಟ್ಟದ ಸಮಾಲೋಚನೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ಕರೆ ನೀಡಲಾಗಿದೆ.
ರೆಡ್ ಕಾರ್ನರ್ ನೋಟಿಸ್ ಕೊಟ್ಟು ವೀಸ ರದ್ದುಪಡಿಸಿ: ಹಿರಿಯ ವಕೀಲ ವೆಂಕಟೇಶ್
ಹಿರಿಯ ವಕೀಲ ವೆಂಕಟೇಶ್ ಮಾತನಾಡಿ, “ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತನಗಿರುವ ರಾಜಕೀಯ ಅಧಿಕಾರ, ರಾಜ್ಯದ ಪ್ರಮುಖ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆ ಮತ್ತು ತನಗಿರುವ ಪ್ರಬಲ ಜಾತಿಯ ಹಿನ್ನೆಲೆಯನ್ನು ಬಳಸಿಕೊಂಡು ನೂರಾರು ಮಹಿಳೆಯರ ಮೇಲೆ ಪ್ರಭಾವ ಬೀರಿ ಮತ್ತು ಒತ್ತಡ ಹಾಕಿ ಅವರನ್ನು ತನ್ನ ವಿಕೃತ ಲೈಂಗಿಕ ದಾಹಕ್ಕೆ ಬಳಸಿಕೊಂಡು ಅವರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ಮತ್ತು ಮಹಿಳೆಯರೊಂದಿಗೆ ನಡೆಸಿರುವ ಅಶ್ಲೀಲ ವಿಡಿಯೋ ಸಂಭಾಷಣೆಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡು ವಿಡಿಯೋಗಳನ್ನು, ಫೋಟೋಗಳನ್ನು, ವಿಡಿಯೋ ಕಾಲ್ ಸ್ಟೀನ್ ಶಾಟ್ಗಳನ್ನು ಸಾವಿರಾರು ಸಂಖ್ಯೆಯಲ್ಲಿ ಶೇಖರಿಸಿಟ್ಟುಕೊಂಡಿರುವ ಪ್ರಕರಣ ಈ ಹಿಂದೆ ಯಾರೂ ಎಲ್ಲಿಯೂ ಕಂಡು ಕೇಳರಿಯದ ಅತ್ಯಂತ ಹೀನ ಮತ್ತು ನೀಚ ಕೃತ್ಯವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ವಿಡಿಯೋಗಳು ಮತ್ತು ಚಿತ್ರಗಳನ್ನು ಪೆನ್ಡ್ರೈವ್ ಮತ್ತು ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕವಾಗಿ ಹಂಚುವ ಮೂಲಕ ಮಹಿಳೆಯರ ಘನತೆಯ ಮೇಲೆ ದಾಳಿ ಮಾಡಿದ ವ್ಯಕ್ತಿಗಳ ತ್ವರಿತ ಬಂಧನ, ವಿಚಾರಣೆ ಹಾಗೂ ಶಿಕ್ಷೆಯನ್ನು ಖಾತ್ರಿಗೊಳಿಸಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
“ಪ್ರಜ್ವಲ್ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಈ ಮೊದಲೇ ತಿಳಿದಿದ್ದರೂ ಕೂಡ 2024ರ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿ ಚುನಾವಣೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯವಾದುದು. ಪೆನ್ಡ್ರೈವ್ ತನ್ನ ಬಳಿ ಇದೆಯೆಂದು ಹೇಳಿಕೊಂಡಿದ್ದ ಜಿ. ದೇವರಾಜೇಗೌಡ ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಮತ್ತಷ್ಟು ಆಶ್ಲೀಲ ವೀಡಿಯೋಗಳು ಮತ್ತು ಅಶ್ಲೀಲ ಚಿತ್ರಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆಯು ಸಂಪೂರ್ಣ ವಿಫಲವಾಗಿದೆ” ಎಂದರು.
ಪ್ರಜ್ವಲ್ ರೇವಣ್ಣನ ಪ್ರಕರಣದಲ್ಲಿ ಬಿಜೆಪಿಯ ನಡೆ ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ. ತನ್ನದೇ ಪಕ್ಷದ ಮುಖಂಡ ಪ್ರಜ್ವಲ್ ರೇವಣ್ಣ ಇಂತಹ ಕೃತ್ಯ ನಡೆಸಿರುವುದು ಅಧಿಕೃತವಾಗಿ ತಿಳಿದಿದ್ದರೂ ಕೂಡ ಮೌನವಾಗಿರುವುದನ್ನು ನೋಡಿದರೆ, ಬಿಜೆಪಿಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಕ್ಕಿಂತ ಜೆಡಿಎಸ್ ಮೈತ್ರಿಯಿಂದ ಆಗಬಹುದಾದ ರಾಜಕೀಯ ಲಾಭವಷ್ಟೇ ಮುಖ್ಯವಾಗಿರುವುದು ಸ್ಪಷ್ಟ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ಬಂಧಿಸಲು ಕೇಂದ್ರ ಸರ್ಕಾರ ಅನುಸರಿಸಲೇಬೇಕಾದ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸದೆ ಕೇವಲ ಆರೋಪ ಪ್ರತ್ಯಾರೋಪದಲ್ಲಿ ತೊಡಗಿರುವುದು ಹಲವು ಅನುಮಾನಗಳಿಗೆ ಅವಕಾಶ ನೀಡುತ್ತದೆ” ಎಂದರು.
“ಜೆಡಿಎಸ್ ಮತ್ತು ಬಿಜೆಪಿ ಇಡೀ ಪ್ರಕರಣದ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಾ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಒತ್ತಡ ಹೇರುತ್ತಿವೆ. ಕಾಂಗ್ರೆಸ್ ಕೂಡ ಬಿಜೆಪಿ ಮತ್ತು ಜೆಡಿಸ್ ಜತೆಗೆ ಕೆಸರೆರಚಾಟದಲ್ಲಿ ತೊಡಗಿದ್ದು, ಪ್ರಕರಣದ ಗಂಭೀರತೆಗೆ ಧಕ್ಕೆ ಉಂಟಾಗುತ್ತಿದೆ ಈ ಎಲ್ಲ ಬೆಳವಣಿಗೆಗಳಿಂದ ಪ್ರಕರಣದಲ್ಲಿ ಕೇಂದ್ರ ಬಿಂದುವಾಗಿರುವ ದೌರ್ಜನ್ಯಕ್ಕೊಳಗಾಗಿರುವ ನೂರಾರು ಮಹಿಳೆಯರ ವಿಷಯ ಪಕ್ಕಕ್ಕೆ ಸರಿಯುತ್ತಿದೆ. ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಲ್ಲಿ ಜೆಡಿಎಸ್ನ ಮಹಿಳಾ ನಾಯಕಿಯರು ಮತ್ತು ಪ್ರಮುಖ ಕಾರ್ಯಕರ್ತೆಯರೂ ಜೊತೆಗೆ ಮಹಿಳಾ ಅಧಿಕಾರಿಗಳು, ನೌಕರರು ಮತ್ತು ವೃತ್ತಿಪರರು ಇರುವುದರಿಂದ ಮುಂದೆ ಮಹಿಳೆಯರು ನೇರವಾಗಿ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪಾಲ್ಗೊಳ್ಳುವ ಕುರಿತು ಬಹಳ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿಯೂ ನಾವು ಆಲೋಚಿಸಬೇಕಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಜ್ಯ ಸರ್ಕಾರ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕು. ಈ ಸಂಬಂಧ ಕೂಡಲೇ ರೆಡ್ ಕಾರ್ನರ್ ನೋಟಿಸ್ ನೀಡಬೇಕು. ಕೇಂದ್ರ ಸರ್ಕಾರ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ವೀಸಾವನ್ನು ಕೂಡಲೇ ರದ್ದುಪಡಿಸಿ ಆತ ಜಗತ್ತಿನ ಯಾವುದೇ ದೇಶದಲ್ಲಿದ್ದರೂ ಅಂತಾರಾಷ್ಟ್ರೀಯ ಪೊಲೀಸರ ಸಹಾಯ ಪಡೆದು ಆತನನ್ನು ಕೂಡಲೇ ಬಂಧಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ನೀಡಬೇಕು. ಸಂತ್ರಸ್ತ ಮಹಿಳೆಯರ ಲೈಂಗಿಕ ವಿಡಿಯೋಗಳು ಮತ್ತು ಚಿತ್ರಗಳನ್ನು ಸಾರ್ವಜನಿಕರಿಗೆ ಪೆನ್ಡ್ರೈವ್, ಸಾಮಾಜಿಕ ಮಾಧ್ಯಮ ಮತ್ತಿತರೆ ಸಾಧನಗಳ ಮುಖಾಂತರ ಸಾರ್ವಜನಿಕವಾಗಿ ಹಂಚಲು ಸಂಚು ನಡೆಸಿದ ಹಾಗೂ ಸಾರ್ವಜನಿಕವಾಗಿ ಹಂಚಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಮೇಲೆ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಐಎಲ್ ವರದಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಪೊಲೀಸರು ನಿರ್ಲಕ್ಷ್ಯ ವಹಿಸಿದ್ದೇ ಅಂಜಲಿ ಹತ್ಯೆಗೆ ಕಾರಣ; ಆರೋಪ
ಸಭೆಯಲ್ಲಿ ಹೈಕೋರ್ಟ್ ಹಿರಿಯ ವಕೀಲ ವೆಂಕಟೇಶ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಳಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ
ಕೆ ಎಸ್ ವಿಮಲಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗೌರಮ್ಮ, ಸಿಐಟಿಯು ರಾಜ್ಯಾಧ್ಯಕ್ಷ ವರಲಕ್ಷ್ಮಿ, ಮೈಸೂರು ಪ್ರಗತಿಪರ ಚಿಂತಕರು ಉಗ್ರ ನರಸಿಂಹ ಗೌಡ. ಅಖಿಲ ವಿದ್ಯಾಸಂದ್ರ ಪ್ರಗತಿಪರ ಹೋರಾಟಗಾರರು, ಜನಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಎಚ್ ಕೆ ಸಂದೇಶ್, ಧರ್ಮೇಶ್, ಮಲ್ಲಪ್ಪ ಎಸ್ ಎನ್, ಎಂ ಸೋಮಶೇಖರ್, ಗೊರೂರು ರಾಜು, ಮುಬಾಶೀರ್ ಅಹಮದ್, ಹೆಚ್ ಆರ್ ನವೀನ್ ಕುಮಾರ್, ಆರ್ ಪಿ ವೆಂಕಟೇಶ್ ಮೂರ್ತಿ, ಕೆ ಈರಪ್ಪ, ಎಂ ಜಿ ಪೃಥ್ವಿ, ಶಿವಣ್ಣ, ವಿಜಯಕುಮಾರ್, ಸುವರ್ಣ, ಕೆ ಟಿ ಶಿವಪ್ರಸಾದ್, ಗಮನ ಮಹಿಳಾ ಸಂಘ ರಾಜ್ಯಾಧ್ಯಕ್ಷ ಮಧು ಭೂಷಣ್, ವಕೀಲೆ ಮೈತ್ರಿ ಕೃಷ್ಣನ್, ದಲಿತ ರಾಜ್ಯಾಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ, ಪ್ರಾಂತ ರೈತ ಸಂಘ ರಾಜ್ಯಾ ಕಾರ್ಯದರ್ಶಿ ಟಿ ಯಶವಂತ, ಕರ್ನಾಟಕ ಜನಶಕ್ತಿ ಮಲ್ಲಿಗೆ ಸಿರಿಮನೆ, ಕಾಮಾತಿ ಸೇರಿದಂತೆ ಇತರರು ಇದ್ದರು.
