ಪ್ರೀತಿಸಿದ್ದ ಹುಡುಗಿ ಮದುವೆಗೆ ನಿರಾಕರಿಸಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬೈರಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದರ್ಶನ್(22) ವಿಷಸೇವಿಸಿ ಮೃತಪಟ್ಟ ದುರ್ದೈವಿ. ಈತ ಬಿ ಎ ಪದವೀಧರನಾಗಿದ್ದು, ಕೃಷಿಕನಾಗಿ ಜೀವನ ಸಾಗಿಸುತ್ತಿದ್ದ. ತನ್ನ ಅಜ್ಜಿ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ಆತ, ಕಳೆದ ಐದಾರು ವರ್ಷಗಳಿಂದ ಮೋನಿಕಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ.
ದರ್ಶನ್ ಮತ್ತು ಮೋನಿಕಾ ಪರಸ್ಪರ ಪ್ರೀತಿಸುತ್ತಿದ್ದು, ತನ್ನನ್ನು ಮದುವೆಯಾಗುವಂತೆ ಆಕೆಯ ಮುಂದೆ ಪ್ರಸ್ತಾಪ ಇಟ್ಟಿದ್ದ. ಆದರೆ ಮೋನಿಕಾ ನಿರಾಕರಿಸಿದ್ದಾಳೆ. ಈ ನಿರಾಕರಣೆಯಿಂದ ಆಘಾತಗೊಂಡಿದ್ದ ಆತ ಮನನೊಂದು ಫೆಬ್ರವರಿ 5ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದ.
ವಿಷ ಸೇವಿಸಿದ ಬಳಿಕ ದರ್ಶನ್ಗೆ ವಾಂತಿ ಆರಂಭವಾಯಿತು. ಈ ಬಗ್ಗೆ ಸ್ನೇಹಿತರಾದ ರವಿ ಮತ್ತು ಯಶ್ವಂತ್ ವಿಚಾರಿಸಿದಾಗ, “ಮೋನಿಕಾ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ, ನನಗೆ ತುಂಬಾ ಬೇಜಾರಾಗಿದೆ” ಎಂದು ಹೇಳಿ ಕುಸಿದುಬಿದ್ದಿದ್ದ. ಈ ವೇಳೆ ಸ್ನೇಹಿತರು ಕೂಡಲೇ ಆತನನ್ನು ಅರಸೀಕೆರೆ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆ ಹಾಗೂ ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ದರ್ಶನ್ ಮೃತಪಟ್ಟಿದ್ದಾನೆ.
ಇದನ್ನೂ ಓದಿದ್ದೀರಾ? ಚಿಕ್ಕಮಗಳೂರು | ಬಾಬಾ ಬುಡನ್ ಗಿರಿಗೆ ಕಾಫಿ ಬೆಳೆ ಹೇಗೆ ಬಂತು?
ಯುವಕನ ಸಾವಿನ ಬಗ್ಗೆ ಆತನ ಭಾವ ಶಂಕರ್ ಬಾಣಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

