ʼನಮ್ಮೂರಿನಲ್ಲಿರುವ ರಾಮನನ್ನು ಪೂಜೆ ಮಾಡಿದರೆ ನಮಗೆ ರಾಮ ಆಶೀರ್ವಾದ ಮಾಡೋದಿಲ್ವಾʼ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಪ್ರಶ್ನಿಸಿದರು.
ರಾಮಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಹಾಸನ ನಗರದಲ್ಲಿ ಪ್ರತಿಕ್ರಿಯಿಸಿದರು.
“ಬಿಜೆಪಿಯವರದ್ದೇ ಒಂದು ಅಜೆಂಡಾ ಇರುತ್ತದೆ. ಯಾರನ್ನು ಕರೆಯಬೇಕು, ಯಾರನ್ನು ಕರೆಯಬಾರದು ಎನ್ನುವುದೆಲ್ಲಾ ಇರುತ್ತವೆ. ಬಿಜೆಪಿ ಅಜೆಂಡಾನಾ ನಾವೇಕೆ ಪ್ರಶ್ನೆ ಮಾಡಲು ಹೋಗಬೇಕು? ಅಲ್ಲಿ ರಾಮಮಂದಿರಕ್ಕೆ ಹೋಗಿ ರಾಮನ ದರ್ಶನ ಮಾಡಿ, ರಾಮನ ಪೂಜೆ ಮಾಡಿದರೆ ಮಾತ್ರ ಆಶೀರ್ವಾದನಾ? ಅಲ್ಲೇ ಹೋಗಿ ಪೂಜೆ ಮಾಡಬೇಕಾ” ಎಂದರು.
“ದೇವರು ಸರ್ವಾಂತರ್ಯಾಮಿ, ಎಲ್ಲೆಡೆ ಇದ್ದಾನೆ. ನಮ್ಮಲ್ಲೂ ಇದ್ದಾನೆ, ನಿಮ್ಮಲ್ಲೂ ಇದ್ದಾನೆ, ಎಲ್ಲ ಜಾಗದಲ್ಲೂ ಇದ್ದಾನೆ. ನಾವು ತೃಪ್ತಿಗೆ, ಮನಸ್ಸಿನ ನೆಮ್ಮದಿಗೆ ದೇವಸ್ಥಾನಕ್ಕೆ ಹೋಗೋದು ಅಷ್ಟೇ” ಎಂದರು.
ಈ ಸುದ್ದಿ ಓದಿದ್ದೀರಾ? ನೆಲಮಂಗಲ | ಬೆಂಗಳೂರು ಚಲೋ; ಅತಿಥಿ ಉಪನ್ಯಾಸಕರ ಪಾದಯಾತ್ರೆ
“ಅವರವರ ನಂಬಿಕೆಗೆ ಅನುಗುಣವಾಗಿ ಅವರವರು ನಡೆದುಕೊಳ್ಳುತ್ತಾರೆ. ಅದರಲ್ಲಿ ಸರಿ ತಪ್ಪು ಅಂತ ವ್ಯಾಖ್ಯಾನ ಮಾಡಲು ಹೋಗಲ್ಲ. ಅವರದ್ದು ಸಣ್ಣತನ ಅಂತ ಹೇಳೋಣವೇ?, ದೊಡ್ಡತನ ಅಂತ ಹೇಳೋಣವೇ” ಎಂದು ಪ್ರಶ್ನಿಸಿದರು.