ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಮೂಲಕ ಸಮಾನವಾಗಿ ಕಾಣುವ ಮತ್ತು ಅವರನ್ನೂ ಅಭಿವೃದ್ಧಿಯ ಪಥದಲ್ಲಿ ಒಳಗೊಂಡಾಗ ಮಾತ್ರ ನೈಜ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಸಾಹಿತಿ ರೂಪ ಹಾಸನ್ ಹೇಳಿದರು.
ಮಹಿಳಾ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಮಹಿಳಾ ವೇದಿಕೆ ಮತ್ತು ಸಿಐಟಿಯು, ಕೆಪಿಆರ್ಎಸ್, ಎಸ್ಎಫ್ಐ, ಡಿವೈಎಫ್ಐ, ಡಿಎಚ್ಎಸ್, ಶ್ರಮ, ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಮಹಿಳಾ ಸರ್ಕಾರಿ ಕಾಲೇಜು ಜಂಟಿಯಾಗಿ ಆಯೋಜಿಸಿದ್ದ “ಲಿಂಗ ಅಸಮಾನತೆ, ಮಹಿಳೆಯರ ಘನತೆ ಮತ್ತು ಅಭಿವೃದ್ಧಿಗಿರುವ ಸಂಬಂಧ ವಿಷಯದ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ಮತ್ತು ಶೋಷಣೆ ನಡೆಯುತ್ತಿದೆ. ಹೆಣ್ಣನ್ನು ಹುಟ್ಟಿನಿಂದಲೇ ನಿರಾಕರಿಸುವ ಈ ಸಮಾಜ ಮಹಿಳೆಗೆ ಯಾವ ರೀತಿಯಲ್ಲಿಯೂ ಸಮಾನವಾದ ಅವಕಾಶಗಳನ್ನು, ಸ್ಥಾನಮಾನಗಳನ್ನು ಕೊಟ್ಟಿಲ್ಲ. ಮಹಿಳೆಯನ್ನು ಕೇವಲ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಾಹಿತಿ ರೂಪ ಹಾಸನ್ ಬೇಸರ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು, ಇದರಿಂದ ಶೇ.30ರಷ್ಟು ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಹಿಳೆಯರ ಸುರಕ್ಷತೆಯ ಪ್ರಶ್ನೆ ಇಂದಿನ ಪೋಷಕರಿಗೆ ದೊಡ್ಡ ಸವಾಲಾಗಿದ್ದು ಸಮಾಜದಲ್ಲಿ ಹೆಣ್ಣುಮಕ್ಕಳು ಘನತೆಯಿಂದ ಬದುಕುವ ವಾತಾವರಣವನ್ನು ಹಾಳು ಮಾಡಲಾಗಿದೆ. ಮಹಿಳೆಯರ ಮೇಲೆ ಮತ್ತು ಅಪ್ರಾಪ್ತೆಯರ ಮೇಲೆ ನಡೆಯುತ್ತಿರುವ ಲೈಗಿಕ ಕಿರುಕುಳ, ದೌರ್ಜನ್ಯ ಅತ್ಯಾಚಾರದಂತಹ ಪ್ರಕರಣಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿವೆ. ಇವುಗಳ ವಿರುದ್ದ ಹೆಣ್ಣುಮಕ್ಕಳು ಜಾಗೃತರಾಗಿ ಸಂಘಟಿತ ಪ್ರತಿಭಟನೆ ನಡೆಸಬೇಕು” ಎಂದರು.

“ಭಾರತದಲ್ಲಿ ಮತ್ತು ರಾಜ್ಯದಲ್ಲಿ ಹೆಣ್ಣುಮಕ್ಕಳನ್ನು ಕಳ್ಳಸಾಗಾಣೆ ಮಾಡಿ ಅವರನ್ನು ವ್ಯೇಶ್ಯವಾಟಿಕೆಯಂತಹ ದಂಧೆಗಳಿಗೆ ತಳ್ಳುತ್ತಿರುವ ದೊಡ್ಡ ಜಾಲ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಬಾಲ್ಯವಿವಾಹಗಳು ಹೆಚ್ಚಾಗಿ ಬಾಲತಾಯಂದಿರ ಸಂಖ್ಯೆ ಹೆಚ್ಚಾಗಿತ್ತಿದೆ. ಹಾಸನದಲ್ಲಿನ ಅಂಕಿಅಂಶಗಳನ್ನು ಗಮನಿಸಿದರೆ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಆತ್ಯಹತ್ಯೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ʼಮಹಿಳೆಯರ ಪ್ರಗತಿಯ ಮಟ್ಟದಿಂದ ಸಮಾಜದ ಪ್ರಗತಿಯ ಮಟ್ಟವನ್ನು ಅಳೆಯುತ್ತೇನೆʼ ಎಂಬ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಮಾತಿನಂತೆ ಸಮಾಜದಲ್ಲಿ ಅಭಿವೃದ್ಧಿಯನ್ನು ಕಾಣಬಹುದು” ಎಂದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಪುಷ್ಪ ಮಾತನಾಡಿ, “ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರನ್ನು ಕಡೆಗಣಿಸಲಾಗಿದೆ. ದುಡಿಯುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ. ವೇತನದಲ್ಲಿ ತಾರತಮ್ಯ ನೀತಿ ಜಾರಿಯಲ್ಲಿದೆ. ಹಲವು ಹೋರಾಟಗಳ ನಂತರ ಮಹಿಳೆಯರಿಗೆ ಸಮಾನ ಮತದಾನದ ಹಕ್ಕು ಸಿಕ್ಕಿದ್ದರೂ ರಾಜಕೀಯದಲ್ಲಿ ಸಮಾನ ಅವಕಾಶ ಮತ್ತು ಸ್ಥಾನಮಾನಗಳು ಈವರೆಗೂ ಲಭಿಸಿಲ್ಲ. ಶೇ.50ರಷ್ಟಿರುವ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.33ರಷ್ಟು ಮೀಸಲಾತಿಯನ್ನು ಒದಗಿಸುವ ಕುರಿತು ಇನ್ನೂ ಚರ್ಚಿಸುತ್ತಿದ್ದೇವೆ. ಸಿಕ್ಕ ಅವಕಾಶಗಳನ್ನು ಮಹಿಳೆಯರೇ ಸಂಪೂರ್ಣವಾಗಿ ಚಲಾಯಿಸುವ ಮುಕ್ತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ಪುರುಷ ಪ್ರಧಾನ ವ್ಯವಸ್ಥೆ ಕಲ್ಪಿಸಿಕೊಟ್ಟಿಲ್ಲ. ಮಹಿಳೆಯರು ಕೆಲಸ ಮಾಡುವ ಸ್ಥಳಗಳಲ್ಲಿ ಮತ್ತು ಶಾಲೆ ಕಾಲೇಜುಗಳಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಗಳನ್ನು ರಚಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಫಲಶೃತಿ | ಅನೈತಿಕ ಚಟುವಟಿಕೆಗಳ ತಾಣವಾಗಿದ್ದ ರೋಣ ‘ಇಂದಿರಾ ಕ್ಯಾಂಟೀನ್’ ಸ್ವಚ್ಫಗೊಳಿಸಿದ ಪುರಸಭೆ
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ ಕೆ ಜಿ ಕವಿತ ಮಾತನಾಡಿ, “ಕಾಲೇಜು ಅಭ್ಯಾಸ ಮಾಡುತ್ತಿರುವ ಹೆಣ್ಣುಮಕ್ಕಳ ವಯಸ್ಸು ಅತ್ಯಂತ ಚಂಚಲವಾಗಿರುತ್ತದೆ. ಈ ಸಂದರ್ಭದಲ್ಲಿ ಮನಸ್ಸು ಮತ್ತು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡು ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ತಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಬೇಕು. ಪೋಷಕರು ತಮ್ಮಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಹುಸಿಗೊಳಿಸದಂತೆ ಬದುಕಿ ಸಮಾಜಕ್ಕೆ ಮಾದರಿಯಾಗಬೇಕು” ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮೂಡಿಸಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ, ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕಿಯರಾದ ಡಾ. ಶ್ರೀದೇವಿ, ಡಾ. ಪೂರ್ಣಿಮ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.