ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ 2024 ಮಂಡನೆಯನ್ನು ವಿರೋಧಿಸಿ ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್ಡಿಪಿಐ) ಹಾಸನ ಜಿಲ್ಲಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ನೇತೃತ್ವದಲ್ಲಿ ನಗರದ ಹೇಮಾವತಿ ವೃತ್ತದಲ್ಲಿ ವಕ್ಫ್ ತಿದ್ದುಪಡಿ ಬಿಲ್ ಪ್ರತಿಯನ್ನು ಹರಿಯುವ ಮುಖಾಂತರ ಪ್ರತಿಭಟನೆ ನಡೆಸಿದರು.
“ಈ ಮಸೂದೆ ಸಂವಿಧಾನ ಬಾಹಿರವಾಗಿದೆ. ಜಿಲ್ಲಾಧಿಕಾರಿಗಳಿಗೆ ನ್ಯಾಯಾಂಗ ಅಧಿಕಾರ ನೀಡುವುದು ಸಂಪೂರ್ಣವಾಗಿ ಅನ್ಯಾಯಕರ ಮತ್ತು ಸಂವಿಧಾನ ವಿರೋಧಿಯಾಗಿದೆ” ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.
“ಭಾರತದ ಮುಸ್ಲಿಂ ಸಮುದಾಯದ ಸಂವಿಧಾನಿಕ ಹಕ್ಕುಗಳು ಮತ್ತು ವಕ್ಫ್ ಆಸ್ತಿಗಳನ್ನು ರಕ್ಷಿಸುವ ಬಗ್ಗೆ ಅಲ್ಲ. ಮೋದಿ ಸರ್ಕಾರ ಈ ಮಸೂದೆಯ ಮೂಲಕ ವಕ್ಫ್ ಬೋರ್ಡ್ ಮೇಲೆ ಹಿಂದುತ್ವದ ಆದರ್ಶಗಳನ್ನು ಬಲತ್ಕಾರವಾಗಿ ಹೇರಲು ಯತ್ನಿಸುತ್ತಿದೆ. ಇದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಗೆ ವಿರುದ್ಧವಾದದ್ದು, ಈ ಮಸೂದೆಯನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ ದೇಶಾದ್ಯಂತ ಸಿಎಎ, ಎನ್ಆರ್ಸಿ ಮಾದರಿಯಲ್ಲಿ ಪ್ರತಿಭಟನೆಗಳು ನಡೆಯಲಿವೆ” ಎಂದು ಒಕ್ಕೂಟ ಸರ್ಕಾರಕ್ಕೆ ಎಸ್ಡಿಪಿಐ ಸಂಘಟನೆ ಎಚ್ಚರಿಕೆ ನೀಡಿದೆ.
“ತಿದ್ದುಪಡಿಯ ಹಿಂದಿನ ಅಸಲಿ ಉದ್ದೇಶ, ವಕ್ಫ್ ಕಾಯ್ದೆಯ ಅನುಷ್ಠಾನವನ್ನು ಬಿಜೆಪಿ ತನ್ನ ಬಹುಮತದ ಬಲದಿಂದ ದುರುಪಯೋಗಪಡಿಸಿಕೊಂಡು ದೇಶವನ್ನು ಕೇಸರಿ ಬಣ್ಣದಿಂದ ಮುಚ್ಚಲು ಪ್ರಯತ್ನಿಸುತ್ತಿದೆ. ಈ ಮಸೂದೆ ಮುಸ್ಲಿಂ ಸಮುದಾಯದ ಹಕ್ಕುಗಳ ಮೇಲೆ ನೇರ ದಾಳಿ ಮಾಡುವ ಮೂಲಕ ವಕ್ಫ್ ಸಂಸ್ಥೆಗಳ ಶಕ್ತಿಯನ್ನು ಕುಂದಿಸುತ್ತದೆ” ಎಂದು ಆರೋಪಿಸಿದರು.
“ಈಗಿನ ಕಾನೂನುಗಳು ಹಿಂದೂ ಧಾರ್ಮಿಕ ಆಸ್ತಿಗಳನ್ನು ಹಿಂದೂ ಅಲ್ಲದವರಿಂದ ನಿರ್ವಹಿಸುವಂತಾಗಲು ನಿರ್ಬಂಧಿಸುತ್ತವೆ. ಆದರೆ ಹೊಸ ವಕ್ಫ್ ಮಸೂದೆಯಡಿ ವಕ್ಫ್ ಬೋರ್ಡ್ ಆಡಳಿತವನ್ನು ಕಬಳಿಸಲು ಮಾಡಿದ ಸಂಚು” ಎಂದು ಸಂಘಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ವಲಸೆ ಕಾರ್ಮಿಕರಿದ್ದ ವಾಹನ ಪಲ್ಟಿ; ನಾಲ್ವರಿಗೆ ಗಂಭೀರ ಗಾಯ
ಈ ವೇಳೆ ಹಾಸನ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಶಜೀಲ್ ಅಹ್ಮದ್ ಎಸ್ಡಿಪಿಐ ಮುಖಂಡ ಫೈರೋಜ್ ಪಾಶ, ಸಫಿರ್, ಆಟೋ ಇರ್ಫಾನ್, ತನ್ವಿರ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸೈಯ್ಯದ್ ಅನ್ಸರ್, ಅಪ್ಸರ್ ಪಾಷ, ಜಮೀಲ್ ಬೇಗ್ ಸೇರಿದಂತೆ ಇತರರು ಇದ್ದರು.
