ಅರೇಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಡಶಾಲಾ ವಿಭಾಗ) ಪರೀಕ್ಷಾ ಕೇಂದ್ರಗಳ ವ್ಯಾಪ್ತಿಗೆ ಸೇರಿರುವ ವಿವಿಧ ಶಾಲೆಯ ಸುಮಾರು 260 ಮಕ್ಕಳಿಗೆ 2024-25ನೇ ಸಾಲಿನ ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಎಸ್ಎಸ್ಎಲ್ಸಿ ಅಣಕು ಪರೀಕ್ಷೆ ನಡೆಸಲಾಯಿತು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ವ್ಯಾಪ್ತಿಯ ಶಾಲೆಗಳಲ್ಲಿ ನಡೆಸಿದ ಅಣಕು ಪರೀಕ್ಷೆ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, “ರಾಜ್ಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಯಾವ ರೀತಿಯಲ್ಲಿ ನಡೆಯುತ್ತದೆಯೋ ಅದೆ ಮಾದರಿಯಲ್ಲಿ ಈ ಪರೀಕ್ಷೆಯು ನಡೆಡಿದ್ದು, ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ ಹೆಚ್ಚಿಸಿದೆ, ವಿದ್ಯಾರ್ಥಿಗಳು ಮಾನಸಿಕ ಒತ್ತಡವನ್ನು ಮಾಡಿಕೊಳ್ಳದೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತ ದಿನನಿತ್ಯ ಸಮಯ ಪಾಲನೆ ಮಾಡಿಕೊಂಡು ಪಠ್ಯಪುಸ್ತಕವನ್ನು ಓದುತ್ತ ಪರೀಕ್ಷೆಯನ್ನು ಎದುರಿಸಬೇಕು” ಎಂದು ಸಲಹೆ ನೀಡಿದರು.
“ಮುಖ್ಯ ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಉಳಿದಿದ್ದು, ಈಗಲೂ ಸಮಯವಿದೆ. ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯಬೇಕು. ಈ ಬಾರಿ ತಾಲೂಕಿನ ಎಲ್ಲ ಶಾಲೆಯ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದು, ಶೇ.90ಕ್ಕೂ ಮೇಲ್ಪಟ್ಟು ಉತ್ತಮ ಫಲಿತಾಂಶ ಪಡೆಯಬಹುದೆಂಬ ನಿರೀಕ್ಷೆಯಲ್ಲಿದ್ದೇವೆ. ಈ ಬಾರಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿ ಎಂಬ ಉದ್ದೇಶದಿಂದ ಪಾಸಿಂಗ್ ಮತ್ತು ಸ್ಕೋರಿಂಗ್ ಎಂಬ ಎರಡು ಪ್ಯಾಕೇಜ್ ಮಾಡಿದ್ದು, ಯಾವ ವಿದ್ಯಾರ್ಥಿ ಶಿಕ್ಷಣದಲ್ಲಿ ಹಿನ್ನಡೆ ಇದ್ದಾರೆ ಅವರ ಮೇಲೆ ನಿಗಾವಹಿಸಿ ಅವರಿಂದ ಉತ್ತಮ ಫಲಿತಾಂಶ ಪಡೆಯಲು ಹಾಗೂ ಉತ್ತಮ ಕಲಿಕಾ ಜ್ಞಾನವಿರುವ ವಿದ್ಯಾರ್ಥಿಗಳಿಂದ ಹೆಚ್ಚಿನ ಅಂಕಗಳಿಸಲು ಈ ಪ್ಯಾಕೆಜ್ ಸಹಕಾರಿಯಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಸಾಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಅ ರಾ ಶ್ರೀನಿವಾಸರ ಭಾಷಣ
ಈ ವೇಳೆ ಶಿಕ್ಷಣ ಸಂಯೋಜನಾಧಿಕಾರಿ ಗೋಪಾಲ್, ಜಗದೀಶ್, ಮುಖ್ಯ ಶಿಕ್ಷಕರಾದ ಶಿವಕುಮಾರ್ ಎಸ್ ಎನ್, ಮಂಜುಳಾ, ಶಿಕ್ಷಕರಾದ ಪ್ರಸನ್ನ ಅರಸ್, ಪ್ರವೀಣ್, ನವೀನ್, ಪಾಟೀಲ್ ಸೇರಿದಂತೆ ಇತರರು ಇದ್ದರು.
