ಸರ್ಕಾರಿ ನೌಕರರ ಸೊಸೈಟಿಯು ಸೇವಾ ಮನೋಭಾವದಿಂದ ಎಲ್ಲರನ್ನೂ ಒಳಗೊಂಡಂತೆ ಅನ್ಯೋನ್ಯತೆಯಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದು, ನಮ್ಮ ಸೊಸೈಟಿ ಒಂದೇ ಕುಟುಂಬದಂತೆ ನಡೆದುಕೊಂಡು ಬರುತ್ತಿದೆ. ಶಿಕ್ಷಕರ ಸಂಘ ಸುಸಜ್ಜಿತವಾದ ಕಟ್ಟಡವನ್ನೂ ಹೊಂದುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಹಿರಿಯಣ್ಣ ಹೇಳಿದರು.
ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧನೆಗೈದ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮುಂದಿನ ದಿನಗಳಲ್ಲಿ ಸೇವಾ ಮನೋಭಾವ ಇರುವವರು 1,235ಕ್ಕೂ ಹೆಚ್ಚು ಸದಸ್ಯತ್ವ ಹೊಂದುವ ಸಂಸ್ಥೆಯಾಗಿದೆ. ಇಡೀ ಜಿಲ್ಲೆಯಲ್ಲಿ 73 ಸದಸ್ಯರಿಗೆ 90 ಲಕ್ಷಕ್ಕೂ ಹೆಚ್ಚು ಸಾಲವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಕರಿಗೆ ಆರ್ಥಿಕವಾಗಿ ಸಹಕಾರ ನೀಡುವ ನಿಟ್ಟಿನಲ್ಲಿ ಸೊಸೈಟಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಕರ ಸಹಕಾರದಿಂದ ಇವೆಲ್ಲವೂ ಸಾಧ್ಯವಾಗುತ್ತಿದೆ” ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಾಗೂರು ಕೃಷ್ಣೇಗೌಡ ಮಾತನಾಡಿ, “ರಾಜ್ಯದ ದಕ್ಷಿಣ ಭಾಗದಲ್ಲಿ ಕ್ಷೇಮಾಭಿವೃದ್ಧಿಗೋಸ್ಕರ ಸೊಸೈಟಿಗಳು, ಉತ್ತರ ಭಾಗಕ್ಕೆ ಹೋಲಿಸಿದರೂ ಕೂಡ ಕಡಿಮೆ ಪ್ರಮಾಣದಲ್ಲಿವೆ. ಜಿಲ್ಲೆಯಲ್ಲಿ 6 ಸಾವಿರ ಶಿಕ್ಷಕರು ಇದ್ದರೂ ಕೂಡ ಸದಸ್ಯತ್ವ ಹೊಂದಿರುವವರು 1 ಸಾವಿರದಷ್ಟು ಮಾತ್ರ ಇರುವುದರಿಂದ ಮುಂದಿನ ದಿನಗಳಲ್ಲಿ ಸದಸ್ಯತ್ವದ ಸಂಖ್ಯೆ ಹೆಚ್ಚಾಗಬೇಕು” ಎಂದು ಹೇಳಿದರು.
“ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮಟ್ಟ ಹೆಚ್ಚಿದಂತೆ ಶಿಕ್ಷಕರ ಕೆಲಸದ ಒತ್ತಡವೂ ಹೆಚ್ಚಾಗಿದೆ. ಈ ನಡುವೆಯೂ ಕೂಡ ಸೊಸೈಟಿ ಪ್ರಾರಂಭ ಮಾಡಿ ಶಿಕ್ಷಕರಿಗೆ ಸಹಕಾರ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಹೆಚ್ ಎನ್ ಮಾತನಾಡಿ, “ಸೊಸೈಟಿಯು ಶಿಸ್ತಿನಿಂದ ಯಶಸ್ವಿಯಾಗಿ ಬೆಳವಣಿಗೆ ಕಾಣುತ್ತಿರುವುದು ಅಭಿನಂದನಾರ್ಹ, ಈ ಸೊಸೈಟಿಯು ಯಾವುದೇ ರೀತಿಯ ಋಣಾತ್ಮಕ ಯೋಜನೆಗಳಿಗೆ ಬಲಿಯಾಗದೆ ಯಾವುದೇ ರೀತಿಯಲ್ಲಿ ಲೋಪದೋಷಗಳು ಆಗದಂತೆ ನಡೆದುಕೊಂಡು ಹೋಗಲಿ, ಇನ್ನೂ ಹೆಚ್ಚಿನ ಶಿಕ್ಷಕರು ಸೊಸೈಟಿಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಂತಾಗಲಿ” ಎಂದು ಹಾರೈಸಿದರು.
“ಮುಂದಿನ ದಿನಗಳಲ್ಲಿ ಮಕ್ಕಳ ಹಿತದೃಷ್ಟಿಯಲ್ಲಿ ಶಿಕ್ಷಕರು ಹೆಚ್ಚಿನ ಕೆಲಸ ನಿರ್ವಹಿಸುವ ಕೆಲಸವಾಗಬೇಕು. ವಾರ್ಷಿಕ ಪಠ್ಯಕ್ರಮ ಸರಿಯಾದ ರೀತಿಯಲ್ಲಿ ಆಗಬೇಕು. ಆರ್ಥಿಕ ವ್ಯವಹಾರವೇ ಆಗಲಿ, ಬೋಧನೆಯೇ ಆಗಲಿ ವ್ಯವಸ್ಥಿತವಾಗಿ ಆಗಬೇಕು. ಗುರಿ ಮುಟ್ಟಿಸುವಂತಾಗಬೇಕು. ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರಗಳು ಹೆಚ್ಚಾಗಬೇಕು. ಅದೇ ರೀತಿಯಲ್ಲಿ ಸೊಸೈಟಿಯಿಂದ ತಾಲೂಕಿಗೊಂದು ಶಾಲೆಯನ್ನಾದರೂ ದತ್ತು ತೆಗೆದುಕೊಂಡು ಸಹಕಾರ ನೀಡಬೇಕು” ಎಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ಮಹಾಲಕ್ಷ್ಮಿ ಅವರು ಸೊಸೈಟಿಯ ವಾರ್ಷಿಕ ವರದಿಯನ್ನು ವಾಚಿಸಿದರು. ವಿವಿಧ ವಿಭಾಗಗಳಲ್ಲಿ ಅತಿಹೆಚ್ಚು ಅಂಕ ಪಡೆದ ಶಿಕ್ಷಕರ ಮಕ್ಕಳಿಗೆ, ನಿವೃತ್ತಿ ಹೊಂದಿದ ಶಿಕ್ಷಕರಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಶಿರಸಿ | ಸಂವಿಧಾನದ ಆಶಯಕ್ಕೆ ಬದ್ದವಾಗಿ ಕೆಲಸ ಮಾಡುವೆ: ಎಸ್ಪಿ ದೀಪನ್ ಎಂ ಎನ್
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಕೋ ಪ್ರಾಥಮಿಕ ಶಾಲಾ ಶಿಕ್ಷಕರ ಆಪರೇಟಿವ್ ಸೊಸೈಟಿ ಅಧ್ಯಕ್ಷ ರಮೇಶ್, ಗೃಹ ನಿರ್ಮಾಣ ಸಹಕಾರ ಸಂಘದ ಯೋಗೇಶ್, ವೈ ಎಸ್ ತಮ್ಮಣ್ಣ ಶೆಟ್ಟಿ, ರಂಗನಾಥ್ ಕೆ, ಹಿರಿಯಣ್ಣ ಬಿ ಎಲ್, ಯೂನಿಯನ್ ಬ್ಯಾಂಕ್ ಸಂಜೀವ್, ಸೊಸೈಟಿಯ ನಿರ್ದೇಶಕರಾದ ಧರ್ಮಪ್ಪ ನಾಯಕ, ರಾಜು ಬಿ ಹೆಚ್, ಅಶೋಕ್ ಯು ಎನ್, ಪೂರ್ಣೇಶ್, ರೇವಣ್ಣ, ಗೌಡ ಲೋಹಿತ ಜವರಪ್ಪ, ದಿನೇಶ್, ಶ್ರೀನಿವಾಸ್, ರಾಘವೇಂದ್ರ, ಮೀನಾಕ್ಷಿ, ಶುಭಮಂಗಳ, ವೀಣಾ ಸತೀಶ್ ಕುಮಾರ್, ಕಾಂತರಾಜ್, ರೇಣುಕಾ ಪ್ರಸಾದ್, ಕೇಶವಮೂರ್ತಿ, ಆಂಥೋನಿ ಸ್ವಾಮಿ ಸೇರಿದಂತೆ ಶಿಕ್ಷಕರು, ಇಸಿಒ, ಬಿಅರ್ಪಿ, ಸಿಅರ್ಪಿ, ಬಿಐಇಆರ್ಟಿಗಳು ಸೇರಿದಂತೆ ಇತರರು ಇದ್ದರು.