“ರಾಜ್ಯದ ಜನರು ಹಾಲಿನ ಬೆಲೆ, ವಿದ್ಯುತ್ ದರ ಏರಿಕೆಯ ಕಹಿಗಳನ್ನು ಅನುಭವಿಸುತ್ತಿರುವಾಗಲೇ ಏಪ್ರೀಲ್ ಒಂದ ರಿಂದ ಅನ್ವಯವಾಗುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಡೀಸೆಲ್, ಟೋಲ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರ ಮೇಲೆ ಹೊರೆ ಯಾಗಿದೆ. ಜನವಿರೋಧಿ ಕ್ರಮಗಳನ್ನು ಕೈ ಬಿಡಬೇಕು ” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಖಂಡಿಸಿದರು.
ಹಾವೇರಿ ಪಟ್ಟಣದಲ್ಲಿ ಡೀಸೆಲ್ ಹಾಗೂ ಟೋಲ್ ದರ ಹೆಚ್ಚಳ ಖಂಡಿಸಿ ಈದಿನ ಕಾಮ್ ನೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
“ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44 ರಿಂದ ಶೇ 21.77ಕ್ಕೆ ಏರಿಕೆ ಮಾಡಿ, ಆದೇಶಿಸಿದೆ. ಬೆಂಗಳೂರಿನಲ್ಲಿ ₹89.02 ಇದ್ದ ಡೀಸೆಲ್ ಬೆಲೆ ₹91.02 ಆಗಲಿದೆ. ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73ರಷ್ಟು ಹೆಚ್ಚಳವಾಗಲಿದೆ. ನೆರೆ ರಾಜ್ಯಗಳಿಗೆ ಹೋಲಿಸಿದರೆ ಈಗ ತೆರಿಗೆ ದರ ಏರಿಕೆಯ ನಂತರ ಮಾರಾಟ ಬೆಲೆ ಹೆಚ್ಚಳವಾದರೂ, ನೆರೆಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ಡೀಸೆಲ್ ಬೆಲೆ ಕಡಿಮ ಇರಲಿದೆ’ ಎಂದು ಸರ್ಕಾರದ ಆರ್ಥಿಕ ಇಲಾಖೆ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿರುವುದು ಅರ್ಥಹೀನ ಎಂಬುದು ಡಿವೈಎಫ್ಐ ನ ಅಭಿಪ್ರಾಯವಾಗಿದೆ” ಎಂದರು.
“ಗ್ಯಾರಂಟಿ ಯೋಜನೆಗೆ ಹಣ ನೀಡುವ ನೆಪದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಜನ ಸಾಮಾನ್ಯರ ಬದುಕಿನ ಮೇಲೆ ಬೆಲೆ ಏರಿಕೆಯ ಗದಾ ಪ್ರಹಾರವನ್ನೇ ಹರಿಯಬಿಟ್ಟಿದೆ. ಶಾಸಕರ ಸಂಬಳ ಭತ್ಯೆಗಳನ್ನು ಯಾವ ನಾಚಿಕೆ ಇಲ್ಲದೆ ಹೆಚ್ಚಿಸಿಕೊಂಡ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಶಾಸಕರು ಜನಸಾಮಾನ್ಯರ ಬದುಕಿಗೆ ಮಾತ್ರ ಯಾವುದೇ ರಿಯಾಯಿತಿ ನೀಡದಿರುವುದು ಖಂಡನಾರ್ಹವಾಗಿದೆ” ಎಂದು ಕಿಡಿಕಾರಿದರು.
“ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಟೋಲ್ ದರವನ್ನು ಶೇ 4ರಿಂದ ಶೇ 5ರಷ್ಟು ಹೆಚ್ಚಳ ಮಾಡಿದ್ದು, ಮಂಗಳವಾರದಿಂದಲೇ ಜಾರಿಯಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ನೀತಿಯು ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುಸ್ಥರಗೊಳಿಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ʼಅಂತರ್ಯಾಮಿʼ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿದ ಗೃಹಸಚಿವ ಪರಮೇಶ್ವರ್
“ಜನರ ಬದುಕಿನ ಪ್ರಶ್ನೆ ಬಂದಾಗಲೆಲ್ಲ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸದಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಮಾತುಗಳು ಈ ಡೀಸೆಲ್ ಹಾಗೂ ಟೋಲ್ ದರ ಏರಿಕೆ ವಿಷಯದಲ್ಲಿ ಸಾಭೀತಾಗಿವೆ. ಈ ಎರಡು ದರ ಏರಿಕೆಗಳನ್ನು ಕೂಡಲೇ ಕೈ ಬಿಡಬೇಕು ಎಂದು ಬಸವರಾಜ ಪೂಜಾರ್ ಆಗ್ರಹಿಸಿದರು.
