ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಜೆಎಂಎಫ್ಸಿ ನ್ಯಾಯಾಲಯವು ತಾಲೂಕಿನ ಪ್ರಾತಿನಿಧ್ಯವನ್ನು ಹೆಚ್ಚಿಸಲು, ನ್ಯಾಯಾಂಗ ಮತ್ತು ಸಮಾಜವನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸುತ್ತದೆಂಬ ವಿಶ್ವಾಸವಿದೆ. ಶೀಘ್ರದಲ್ಲಿಯೇ ಸಂಚಾರಿ ನ್ಯಾಯಾಲಯ ಶಾಶ್ವತಗೊಳ್ಳಲಿದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾ. ಹೇಮಂತ ಚಂದನಗೌಡರ ಹೇಳಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಂಡ ಸಂಚಾರಿ ದಿವಾಣಿ ಮತ್ತು ಜೆಎಂಎಫ್ಸಿ(ಪ್ರಥಮ ದರ್ಜೆಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್) ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದರು.
ನ್ಯಾ. ಕೃಷ್ಣ ದೀಕ್ಷಿತ್ ಮಾತನಾಡಿ, “ತ್ವರಿತ ನ್ಯಾಯ ಒದಗಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಬರುವಂತೆ ಮಾಡಬೇಕು. ನ್ಯಾಯಾಂಗ ವ್ಯವಸ್ಥೆ ಕುಸಿಯಲು ಅವಕಾಶ ಕಲ್ಪಿಸಬಾರದು. ಕಕ್ಷಿದಾರರೊಂದಿಗೆ ಪ್ರೀತಿ, ಗೌರವ, ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು. ನೂತನ ನ್ಯಾಯಾಲಯದ ಕ್ರೀಯಾಶೀಲತೆ ಪ್ರಮಾಣ ಹೆಚ್ಚಾಗಬೇಕು. ವಕೀಲರು ಕನ್ನಡದಲ್ಲಿಯೇ ವಾದ ಮಂಡಿಸುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯದ ಬಗ್ಗೆ ನಂಬಿಕೆ ಹೆಚ್ಚುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ಶಿಲ್ಪಿ ದಿನದರ್ಶಿಕೆ ಬಿಡುಗಡೆ
ಶಾಸಕ ಯು ಬಿ ಬಣಕಾರ ಮಾತನಾಡಿ, “ತಾಲೂಕಿನ ಗಡಿಭಾಗದ ಗ್ರಾಮಗಳ ನಿವಾಸಿಗಳಿಗೆ ಈ ನ್ಯಾಯಾಲಯ ಹೆಚ್ಚು ಅನುಕೂಲವಾಗಲಿದೆ. ಮನೆ ಮನೆಗೆ ನ್ಯಾಯ ಒದಗಿಸುವ ಮಹತ್ವದ ಕೆಲಸ ಇದರಿಂದ ನನಸಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ ಸಿ ಸದಾನಂದಸ್ವಾಮಿ, ಲೋಕೋಪಯೋಗಿ ಇಲಾಖೆ ಹಾವೇರಿ ವಿಭಾಗದ ಎನ್ ಎನ್ ಪಾಟೀಲ, ನೂತನ ತಾಲೂಕು ವಕೀಲದ ಸಂಘದ ಅಧ್ಯಕ್ಷ ಬಿ ಎಚ್ ಬನ್ನಿಕೋಡ, ಉಪಾಧ್ಯಕ್ಷ ಹಿರಿಯ ವಕೀಲ ಎಸ್ ವಿ ತೋಗರ್ಸಿ, ಪ್ರಧಾನ ಕಾರ್ಯದರ್ಶಿ ಮಾರುತಿ ಜೋಕನಾಳ, ಎಸ್ ಎಸ್ ಪಾಟೀಲ, ಕುಮಾರ ಕೋಟಿಹಾಳ, ಸದಸ್ಯ ಪಿ ಡಿ ಬಸನಗೌಡ್ರ, ವಿ ಆರ್ ದ್ರೌಪಕ್ಕಳವರ, ಸುರೇಶ ಬೆಣ್ಣಿ, ಅಬ್ದುಲ್ ರೆಹಮಾನ್ ಹೊನ್ನಾಳಿ, ಸುರೇಶ ದ್ಯಾವಕ್ಕಳವರ, ಫಕೀರೇಶ ತುಮ್ಮಿನಕಟ್ಟಿ ಸೇರಿದಂತೆ ವಕೀಲರು, ಸಾರ್ವಜನಿಕರು ಇದ್ದರು.