ಮಾಹಾನ್ ನಾಯಕರ ದಿನಾಚಾರಣೆಗಳು ಬಡವರ ಹಾಗೂ ಹಿಂದುಳಿದ ವರ್ಗಗಳ ಜನರಿಗೆ ಉಪಯುಕ್ತ ಕಾರ್ಯ ಮಾಡುವ ಮೂಲಕ ಅರ್ಥಪೂರ್ಣ ಆಚರಣೆಗೆ ನಾಂದಿಯಾಗಲಿ ಎಂದು ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆಯ ರಾಜ್ಯಾಧ್ಯಕ್ಷ ತಿರಕಪ್ಪ ಕೆ ಚಿಕ್ಕೇರಿ ಹೇಳಿದರು.
ಹಾವೇರಿ ನಗರದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ವತಿಯಿಂದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತಿ, ಡಾ.ಬಾಬು ಜಗಜೀವನ್ ರಾಮ್ ಅವರ 117ನೇ ಜಯಂತಿ ಹಾಗೂ ವಿಶ್ವಗುರು ಶ್ರೀ ಬಸವೇಶ್ವರ ಅವರ 190ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಮಾನತೆಯ ಹರಿಕಾರ, ವಿಶ್ವಗುರು ಬಸವೇಶ್ವರರ ದಿನಾಚಾರಣೆಯ ಈ ದಿನ ಬಡವರ ಬದುಕಿಗೆ ಬೆಳಕಾಗುವ ಸಾಮೂಹಿಕ ವಿವಾಹ ಕಾರ್ಯ ಸಾಮಾಜಿಕ ಕಳಕಳಿಯ ಕೆಲಸವಾಗಿದೆ. ಸರ್ವರೂ ಸಮಾನರು ಎಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ನಮಗೆ ತಿಳಿಸಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ ಎಲ್ಲರ ಧ್ವನಿಯಾಗಿದ್ದಾರೆ. ದೇಶದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರು ಆದರ್ಶ ಜೀವನ ಸಾಗಿಸುವ ಮೂಲಕ ಮಹಾನ್ ನಾಯಕರು ನಮ್ಮ ಜೀವನಕ್ಕೆ ಉತ್ತಮ ಸಂದೇಶ ನೀಡಿದ್ದಾರೆ” ಎಂದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, “ಸಂಘಟನೆಗಳು ಇಂತಹ ಸಾಮಾಜಿಕ ಕೆಲಸ ಮಾಡಿದಾಗ ಜನರ ಮೆಚ್ಚುಗೆಗೆ ಪಾತ್ರರಾಗುತ್ತೇವೆ. ಈ ಮೂರು ಮಾಹಾನ್ ನಾಯಕರ ಜನ್ಮದಿನದ ನೆನೆಪಿಗಾಗಿ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಶ್ಲಾಘನೀಯವಾಗಿದೆ. ವಿವಾಹವಾದ ನವ ಜೋಡಿಗಳು ಮಾಹಾನ್ ನಾಯಕರ ತತ್ವ ಸಿದ್ದಾಂತದಡಿ ಉತ್ತಮ ಬದುಕಿಗೆ ಸಾಕ್ಷಿಯಾಗಿರಿ” ಎಂದು ಹೇಳಿ ಕಾರ್ಯಕ್ರಮದ ಯಶಸ್ವಿಗಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈತರಿಗೆ ವೈಜ್ಞಾನಿಕವಾಗಿ ಬೆಳೆನಷ್ಟ ಪರಿಹಾರ ಘೋಷಿಸಬೇಕು: ರಾಜ್ಯಾಧ್ಯಕ್ಷ ಭಾಗ್ಯರಾಜ್
ಈ ಸಂದರ್ಭದಲ್ಲಿ ಮುಖಂಡರುಗಳಾದ ಡಿ ಎಸ್ ಮಾಳಗಿ, ಸಂತೋಷ ಕನ್ನಮ್ಮನವರ, ವೈ ಎನ್ ಮಾಸೂರ, ದುರಗೇಶ ಗೊಣೆಮ್ಮನವರ, ರವಿ ಹುಣಸಿಮರದ, ಮಂಜಪ್ಪ ಮರೋಳ, ಬಸವರಾಜ ಕಾಳೆ ಸದೇರಿದಂತೆ ಬಹುತೇಕರು ಇದ್ದರು.
