ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಮಲೆಗೆ ತೆರಳುತ್ತಿದ್ದ ಮಿನಿಬಸ್ ಅಪಘಾತಕ್ಕೊಳಗಾಗಿದ್ದು, ಓರ್ವ ಸ್ಥಳದಲ್ಲೇ ಸಾವಿಗೀಡಾಗಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮಲೈ ಬಳಿ ನಡೆದಿದೆ.
ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ, ಸ್ಥಳೀಯ ಶಿವಮಣಿ ಅಯ್ಯಪ್ಪಸ್ವಾಮಿ ಆಶ್ರಮದ ಗುರುಸ್ವಾಮಿ ಮಾರುತಿ ಹರಿಹರ(50) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ.
ಹಾನಗಲ್ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳ 30ಕ್ಕೂ ಹೆಚ್ಚು ಮಾಲಾಧಾರಿಗಳು ಏಪ್ರಿಲ್ 14ರ ಬೆಳಿಗ್ಗೆ ಮಿನಿಬಸ್ನಲ್ಲಿ ಶಬರಿಮಲೆಗೆ ಪ್ರಯಾಣ ಬೆಳೆಸಿದ್ದರು. ಮಾರ್ಗಮಧ್ಯೆ ನಾನಾ ತೀರ್ಥಕ್ಷೇತ್ರಗಳ ದರ್ಶನ ಮಾಡಿ ಎರುಮಲೈಯಲ್ಲಿ ಸೇವೆ ಸಲ್ಲಿಸಿ ಶಬರಿಮಲೆಯತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ.
ಸಂತೋಷ ಜಾಧವ ಮತ್ತು ಗಿರಿರಾಜ ಕಲಾಲ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಕೇರಳದ ಪಾಲಾವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಮೆಗಾ ಡೇರಿ ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಆಗ್ರಹ
ಘಟನೆ ನಡೆದ ಕೂಡಲೇ ಶಾಸಕ ಶ್ರೀನಿವಾಸ ಮಾನೆ ಅವರು ಮುಖಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮೂಲಕ ಕೇರಳ ಸರ್ಕಾರದ ಅಧಿಕಾರಿಗಳನ್ನು ಸಂಪರ್ಕಿಸಿ, ಗಾಯಾಳುಗಳಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.
ಮೃತಪಟ್ಟ ಓರ್ವ ಮಾಲಾಧಾರಿಯ ಪಾರ್ಥಿವ ಶರೀರ ತರಲು ಹಾಗೂ ಗಾಯಾಳುಗಳ ನೆರವಿಗೆ ಧಾವಿಸಲು ಐವರು ಮುಖಂಡರು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಏಳು ಜನರ ತಂಡವನ್ನು ವಿಮಾನದ ಮೂಲಕ ಕೊಚ್ಚಿನ್ಗೆ ಕಳುಹಿಸಿದ್ದಾರೆ. ಸಂಜೆ ಹೊತ್ತಿಗೆ ಘಟನಾ ಸ್ಥಳ ತಲುಪಿದ ತಂಡ ಶರೀರ ತರಲು ವ್ಯವಸ್ಥೆ ಮಾಡುತ್ತಿದ್ದು, ಗಾಯಾಳುಗಳಿಗೆ ನೆರವಾಗಲಿದ್ದಾರೆ.