ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನಾಲ್ಕೈದು ತಿಂಗಳಿಂದ ಶುಚಿ ಸಂಭ್ರಮ ಕಿಟ್ ನೀಡದೆ, ವಿದ್ಯಾರ್ಥಿಗಳನ್ನು ಸೌಲಭ್ಯ ವಂಚಿತರನ್ನಾಗಿ ಮಾಡಿರುವುದು ಖಂಡನೀಯ ಎಂದು ಎಸ್ಎಫ್ಐ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಗ್ರಹಿಸಿದರು.
ಹಾವೇರಿ ನಗರದ ಪರಿವೀಕ್ಷಣಾ ಮಂದಿರದಲ್ಲಿ ಎಸ್ಎಫ್ಐ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, “ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಶುಚಿ ಸಂಭ್ರಮ ಕಿಟ್ ನೀಡಲಾಗುತ್ತಿತ್ತು, 2024-25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕೈದು ತಿಂಗಳಿಂದ ಯಾವುದೇ ರೀತಿಯ ಕಿಟ್ ನೀಡದೆ ವಿದ್ಯಾರ್ಥಿಗಳಿಗೆ ಸೌಲಭ್ಯಗಳಿಂದ ವಂಚಿಸಿದ್ದಾರೆ” ಎಂದು ಆರೋಪಿಸಿದರು.
“ಶೀಘ್ರವಾಗಿ ಶುಚಿ ಸಂಭ್ರಮ ಕಿಟ್ ವಿತರಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಶನ್ ನೇತೃತ್ವದಲ್ಲಿ ಅನೇಕ ಬಾರಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಅಧಿಕಾರಿಗಳು ತಿಂಗಳಗಳು ಕಳೆದರೂ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡಿದೆ ವಳಂಬ ದೋರಣೆಯನ್ನು ಅನುಸಾರಿಸುತ್ತಿದ್ದಾರೆ. ಪ್ರತಿ ತಿಂಗಳು ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬ್ರಷ್, ಪೇಸ್ಟ್, ಮೈಸೂರು ಸ್ಯಾಂಡಲ್, 2 ಬಟ್ಟೆ ಸೋಪು, ಕೊಬ್ಬರಿ ಎಣ್ಣೆ ನೀಡುತ್ತಿದ್ದಾರೆ. ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೂ ಈ ಎಲ್ಲ ಕಿಟ್ಗಳನ್ನು ನೀಡುತ್ತಿದ್ದರು. ಆದರೆ 2024-25 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ನಾಲ್ಕೈದು ತಿಂಗಳು ಕಳೆದರೂ ಈವರೆಗೂ ವಿದ್ಯಾರ್ಥಿ ಕಿಟ್ ವಿತರಣೆ ಮಾಡಿಲ್ಲ” ಎಂದು ಆರೋಪಿಸಿದರು.
“ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ, ಉತ್ತಮ ಅಭ್ಯಾಸಕ್ಕಾಗಿ ವಸತಿ ನಿಲದ ಆಸರೆಯೊಡ್ಡಿ ಬಂದಿರುತ್ತಾರೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು. ಬೇರೆ ಬೇರೆ ಇಲಾಖೆಗಳ ರೀತಿಯಲ್ಲಿ ವಿಳಂಬ ಮಾಡದೆ ಮುಂಚಿತವಾಗಿ ವಿತರಣೆ ಮಾಡಬೇಕು. ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಬೇಕು” ಎಂದು ಬಸವರಾಜ್ ಎಸ್ ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ದುರುಗಪ್ಪ ಯಮ್ಮಿಯವರ ಮಾತನಾಡಿ, “ಬಡ ವಿದ್ಯಾರ್ಥಿಗಳ ಸಣ್ಣಪುಟ್ಟ ಅನುದಾನದ ಶುಚಿ ಕಿಟ್ ನೀಡಲು ಸರ್ಕಾರ ಬಜೆಟ್ ಕೊರತೆಯೆಂದು ಹೇಳುತ್ತಿರುವಾಗ, ಸಚಿವರು ತಮ್ಮ ಕಚೇರಿ ಮತ್ತು ಮನೆ ನವೀಕರಣ ಮಾಡಿಕೊಳ್ಳಲು ಒಬ್ಬೊಬ್ಬರು 50 ಲಕ್ಷ ರೂಪಾಯಿ ದುಂದುವೆಚ್ಚ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಆದರೆ ಪ್ರತಿ ಗಂಡು ಮಕ್ಕಳ ಕಿಟ್ಗೆ ₹130 ಹಾಗೂ ಹೆಣ್ಣು ಮಕ್ಕಳ ಕಿಟ್ಗೆ ₹140 ಮೌಲ್ಯದ ಪರಿಕರ ಒಳಗೊಂಡ ಕಿಟ್ಟನ್ನು ಪ್ರತಿ ತಿಂಗಳು ನೀಡಬೇಕು. ಕಳೆದ ವರ್ಷ ಎರಡ್ಮೂರು ತಿಂಗಳು ಹಾಗೂ ಈ ವರ್ಷದ ನಾಲ್ಕೈದು ತಿಂಗಳು ವಿತರಣೆ ಮಾಡಿಲ್ಲ. ಆ ತಿಂಗಳು ನೀಡಬೇಕಾದ ಕಿಟ್ ಹಣ ಎಲ್ಲಿ? ಯಾರ ಜೇಬು ಸೇರಿತು? ಈ ಬಾರಿ ಭ್ರಷ್ಟಾಚಾರ ವಾಸನೆ ಕಂಡುಬರುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ಸ್ಪಷ್ಟತೆ ನೀಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಾಭಿಮಾನಿ ಸಮಾವೇಶದ ಮೂಲಕ ಸಿಎಂಗೆ ಬೆಂಬಲ : ಕೆ. ಶಾಂತಪ್ಪ
ಈ ಸಂದರ್ಭದಲ್ಲಿ ಎಸ್ಎಫ್ಐ ಉಪಾಧ್ಯಕ್ಷ ಸುಲೇಮಾನ್ ಮತ್ತಿಹಳ್ಳಿ, ಶೃತಿ ಆರ್ ಎಂ, ಮುತ್ತುರಾಜ್ ದೊಡ್ಡಮನಿ, ಸಹ ಕಾರ್ಯದರ್ಶಿ ವಿಜಯ ಶಿರಹಟ್ಟಿ, ಮಹೇಶ್ ಮರೋಳ, ಕೃಷ್ಣಾ ನಾಯಕ್, ಮುಖಂಡರಾದ ಅಣ್ಣಪ್ಪ ಕೊರವರ್, ನಿಖಿತಾ ಕಂಬಳಿ, ಫಾತಿಮಾ ಶೇಖ್, ದಾನೇಶ್ವರಿ, ಲಲಿತಾ ಬಿ ಸಿ, ರಕ್ಷಿತಾ ಡವಗಿ ಸೇರಿದಂತೆ ಬಹುತೇಕರು ಇದ್ದರು.