ಹಾಸ್ಟೆಲ್ ಆಹಾರ ಭತ್ಯೆ ಹೆಚ್ಚಿಸಿ ಉತ್ತಮ ಗುಣಮಟ್ಟದ ಆಹಾರ ಒದಗಿಸಿ ಎಂದು ಆಗ್ರಹಿಸಿದ ವಿದ್ಯಾರ್ಥಿಗಳು ಎಸ್ಎಫ್ಐ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಹಾವೇರಿ ಜಿಲ್ಲೆಯ ಸವಣೂರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಇಲಾಖೆ ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮಂಗಳವಾರ ಮುಂಜಾನೆ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಸಂಘಟನೆ ಕಾರ್ಯಕರ್ತರು ಒಗ್ಗೂಡಿ ಸಭೆ ನಡೆಸಿ ಊಟದ ವ್ಯವಸ್ಥೆ ಸರಿಪಡಿಸಿ, ಆಹಾರ ಭತ್ಯೆ ಹೆಚ್ಚಿಸಿ, ಗುಣಮಟ್ಟದ ಆಹಾರ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
“ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವಂತೆ ಅನೇಕ ಬಾರಿ ಹೇಳಿದ್ದರೂ ವಸತಿ ನಿಲಯದಲ್ಲಿ ಈವರಗೆ ಸರಿಪಡಿಸಿಕೊಂಡಿಲ್ಲ. ಇದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ” ಎಸ್ಎಫ್ಐ ಹಾವೇರಿ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ್ ಎಸ್ ಹೇಳಿದರು.
“ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲು ತಾಲೂಕಿನ ಅಧಿಕಾರಿಗಳು ಮುಂದಾಗುತ್ತಿಲ್ಲ. ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ, ಉತ್ತಮ ಗುಣಮಟ್ಟದ ಆಹಾರ ನೀಡಬೇಕು. ಸರ್ಕಾರಿ ಸೌಲಭ್ಯಗಳಿಂದ ವಿದ್ಯಾರ್ಥಿಗಳನ್ನು ವಂಚಿಸುತ್ತಿರುವ ವಿದ್ಯಾರ್ಥಿ ವಿರೋಧಿ ನೀತಿ ಸರಿಯಲ್ಲ” ಎಂದು ಗಂಭೀರವಾಗಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ಜಲ ಪ್ರವಾಹ : ಭಯದಲ್ಲಿ ದಿನದೂಡುತ್ತಿರುವ ನಾಗರಿಕರು!
ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಜೀವನ್ ಪಮ್ಮಾರ ಮಾತನಾಡಿ, “ಪರಿಶೀಲನೆ ನಡೆಸಿ ಕೂಡಲೇ ಊಟದ ವ್ಯವಸ್ಥೆ ಸರಿಪಡಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಅತಿಕ ಜಿ ಎಚ್, ಕಿರಣ್ ಬಸನಾಳ, ಪ್ರಜ್ವಲ್, ಸುದೀಪ್ ಕೆ, ಅಭಿಷೇಕ್ ದೊಡ್ಡಮನಿ, ನನ್ನುಸಾಬ ನದಾಫ, ರಮೇಶ್ ನಾಯಕ್, ನಾಗರಾಜ್ ಕುರಿ, ಸಲೀಂ ಅಹ್ಮದ್, ಆಂಜನೇಯ ಬೇವಿನಹಳ್ಳಿ, ನಿಂಗರಾಜ ದೊಡ್ಡಮನಿ, ಕಿರಣ್ ಲಮಾಣಿ, ಸುದೀಪ್ ಯಲಿಗಾರ, ಕರಬಸು ತಳವಾರ ಸೇರಿದಂತೆ ಬಹುತೇಕರು ಇದ್ದರು.