ಸರ್ಕಾರಿ ಬಸ್ಸಿನ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಶಾಲೆ-ಕಾಲೇಜ್ ಹಾಗೂ ಹಾಸ್ಟೆಲ್ಗಳಿಗೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿರುವ ಕೆಎಸ್ಆರ್ಟಿಸಿ ಘಟಕದಲ್ಲಿ ವ್ಯವಸ್ಥಾಪಕರಿಗೆ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಗರ ಸಾರಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ದಿನನಿತ್ಯ ವ್ಯಾಪಾರ ವಹಿವಾಟಿಗಾಗಿ, ವಿದ್ಯಾಭ್ಯಾಸಕ್ಕಾಗಿ ಸೇರಿದಂತೆ ಅನೇಕ ಚಟುವಟಿಕೆಗಳಿಗೆ ವಿದ್ಯಾರ್ಥಿಗಳು, ಕಾರ್ಮಿಕರು, ರೈತರು, ಸರ್ಕಾರಿ ನೌಕರರು, ವ್ಯಾಪಾರಸ್ಥರು ಅನೇಕ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ತುಂಬಾ ಅನುಕೂಲಕರವಾಗಿದೆ. ಆದರೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಸಾರಿಗೆ ವ್ಯವಸ್ಥೆಯಿಲ್ಲದೆ ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.
“ಶೈಕ್ಷಣಿಕ ವರ್ಷ ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜು ಹಾಸ್ಟೆಲ್ಗಳಿಗೆ ತೆರಳಲು ಬಸ್ಸಿನ ಸಮಸ್ಯೆಗಳು ವಿಪರೀತವಾಗಿದ್ದು, ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಸಮಯಕ್ಕೆ ಸರಿಯಾಗಿ ಹೀಗಿರುವ ಬಸ್ಸಿನ ಜತೆಗೆ ಗ್ರಾಮೀಣ ಪ್ರದೇಶಗಳಿಗೆ ಸರಿಯಾದ ಸಮಯಕ್ಕೆ ಹೆಚ್ಚವರಿ ಬಸ್ಗಳನ್ನು ಬಿಡಬೇಕು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಹಾವೇರಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೆಕು” ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಪರವಾಗಿ ಆಗ್ರಹಿಸಿದರು.
ಎಸ್ಎಫ್ಐ ಮುಖಂಡ ಸುಲೇಮಾನ ಮತ್ತಿಹಳ್ಳಿ ಮಾತನಾಡಿ, “ಡಿಪೋ ಪಕ್ಕದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ 2 ಹಾಸ್ಟೆಲ್ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುವುದಿಲ್ಲವೆಂದು ವಿದ್ಯಾರ್ಥಿಗಳು ಗಂಭೀರವಾಗಿ ಆರೋಪಿಸುತ್ತಿದ್ದಾರೆ. ಜಿಲ್ಲಾ ಕೇಂದ್ರದಿಂದ ಹಾಸ್ಟೆಲ್ ಶಾಲಾ ಕಾಲೇಜುಗಳು ನಗರದ ಹೊರವಲಯದಲ್ಲಿ ಇರುವುದರಿಂದ ನಿತ್ಯವೂ ಐದಾರು ಕಿಲೊಮೀಟರ್ ನಡೆದು ಹೋಗಬೇಕಿದೆ. ಪ್ರತಿ ವರ್ಷ ಎಸ್ಎಫ್ಐ ನೇತೃತ್ವದಲ್ಲಿ ಹೋರಾಟ ಮಾಡಿದಾಗ ಮಾತ್ರ ಬಸ್ ವ್ಯವಸ್ಥೆ ಸರಿಯಾಗಿರುತ್ತದೆ. ಸ್ವಲ್ಪ ದಿನಗಳ ಬಳಿಕ ವಿದ್ಯಾರ್ಥಿಗಳಿಗೆ ಮತ್ತೆ ಸರಿಯಾಗಿ ಸ್ಪಂದಿಸುವುದಿಲ್ಲ” ಎಂದು ಆರೋಪಿಸಿದರು.
ಮನವಿ ಪತ್ರ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಕೆಂಪಣ್ಣ ಅಂಬಣ್ಣಗಿ ಮಾತನಾಡಿ, “ಸಂಬಂಧಿಸಿದ ಚಾಲಕ-ನಿರ್ವಾಹಕರೊಂದಿಗೆ ಮತ್ತೊಮ್ಮೆ ಮಾತನಾಡಿ ಕಡ್ಡಾಯವಾಗಿ ಬಸ್ ನಿಲ್ಲಿಸಲು ಆದೇಶ ಹೊರಡಿಸುತ್ತೇವೆ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ಒಪ್ಪಂದದಲ್ಲಿ ಅನ್ಯಾಯವಾಗಿದೆ, ಕೇಂದ್ರ ಸರ್ಕಾರವೂ ನ್ಯಾಯ ನೀಡುತ್ತಿಲ್ಲ: ನ್ಯಾ. ಗೋಪಾಲಗೌಡ
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜು ಬಂಗಾಳಿ, ನಿರಂಜನ ಹಾದಿಮನಿ, ಧನುಷ್ ದೊಡ್ಡಮನಿ, ಅಜಯ್ ಲಮಾಣಿ, ಕಾರ್ತಿಕ್ ತಳವಾರ, ನೀಲಪ್ಪ ತಳವಾರ, ಸುನೀಲ್ ಲಮಾಣಿ, ಮನು ಕಾರಭಾರಿ, ಮುತ್ತುರಾಜ ಹರಿಜನ, ಕುಬೇರ ಗೋಣಿ, ಅಭಿಷೇಕ್, ಆಕಾಶ ಆರ್, ಚಂದ್ರಶೇಖರ ಕೆ ಎಲ್, ಪ್ರಕಾಶ್ ಎಲ್, ಪ್ರಜ್ವಲ್ ಕೆ ಹೆಚ್, ಪರಶುರಾಮ್ ಹೆಚ್ ಎಮ್, ವಿನಾಯಕ ಹರಿಜನ ಸೇರಿದಂತೆ ಬಹುತೇಕ ವಿದ್ಯಾರ್ಥಿಗಳು ಇದ್ದರು.