“ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಗಳು ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವುದು. ಸಂಘಟಿತರಾಗುವ ವಿದ್ಯಾರ್ಥಿ ಸಮುದಾಯವನ್ನು ಹಿಮ್ಮೆಟ್ಟಿಸಲು ಪಣ ತೊಡುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪ್ರಜಾಸತ್ತಾತ್ಮಕ ಹಕ್ಕಿಗಾಗಿ ಹೋರಾಡಲು ಸಂಘಟಿತರಾಗಬೇಕು” ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ ಹೇಳಿದರು.
ಹಾವೇರಿ ನಗರದ ಆಕ್ಸ್ಫರ್ಡ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಶಾಲಾ ಕಾಲೇಜು ಹಾಸ್ಟೆಲ್ಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಕೊರತೆಯನ್ನು ನೀಗಿಸಲು ಸರ್ಕಾರ ಮುಂದಾಗಬೇಕು. ನೀಟ್ ಭ್ರಷ್ಟಾಚಾರಕ್ಕೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು. ಹಣವುಳ್ಳವರಿಗೆ ಮಾತ್ರ ಶಿಕ್ಷಣ ಎಂಬ ರೀತಿಯಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡುತ್ತಿದ್ದಾರೆ. ನೀಟ್ ಪರೀಕ್ಷೆಯನ್ನು ರದ್ದು ಮಾಡಲು ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ಮಸೂದೆಯನ್ನು ಅಂಗೀಕಾರ ಮಾಡಬೇಕು” ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಎಸ್ಎಫ್ಐ ಮಾಜಿ ಜಿಲ್ಲಾಧ್ಯಕ್ಷರು, ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯರಾದ ರೇಣುಕಾ ಕಹಾರ ಮಾತನಾಡಿ, “ಪ್ರತಿ ವಿದ್ಯಾರ್ಥಿಯೂ ಸಮಾಜದ ಪ್ರಗತಿಗಾಗಿ ಚಿಂತಿಸಬೇಕು. ಸಮಾಜದಲ್ಲಿನ ಅನೇಕ ಸವಾಲುಗಳನ್ನು ಎದುರಿಸಲು ನಿರಂತರವಾದ ಅಭ್ಯಾಸ ಮತ್ತು ಹೋರಾಟವನ್ನು ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಂತಹ ವ್ಯವಸ್ಥೆಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಬೇಕು ಮತ್ತು ಪತ್ರಿಕೆಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಜಾಗೃತರಾಗಿ ಜ್ಞಾನ ಅಭಿವೃದ್ಧಿ ಶಿಕ್ಷಣ ಪಡೆಯಬೇಕಿದೆ” ಎಂದು ಸಲಹೆ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿದರು. ಅತಿಥಿಗಳಾಗಿ ಆಕ್ಸ್ಫರ್ಡ್ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ವೀರೇಶ್ ಹಿತ್ತಲಮನಿ, ಕಾಲೇಜು ಘಟಕದ ಅಧ್ಯಕ್ಷೆ ಪ್ರೇಮಾ ಅರಳ್ಳಳ್ಳಿ ವೇದಿಕೆಯಲ್ಲಿದ್ದರು.
ಇದನ್ನು ಓದಿದ್ದೀರಾ? ವಿಜಯಪುರ | ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿದ ಪ್ರಕರಣ: ಐವರ ಮೃತದೇಹ ಪತ್ತೆ, ಕಾರ್ಯಾಚರಣೆ ಅಂತ್ಯ
ಎಸ್ಎಫ್ಐ ಕಾಲೇಜು ಘಟಕದ ಕಾರ್ಯದರ್ಶಿ ರೇಣುಕಾ ಹಿರೇಗೌಡ್ರು ಸ್ವಾಗತಿಸಿದರು. ಮುಖಂಡರಾದ ಪರಶುರಾಮ ಹರಿಜನ ನಿರೂಪಿಸಿದರು. ನೇಹಾಲ್ ಖಾನ್ ಗಂಗಾವತಿ, ದುರುಗಪ್ಪ ಯಮ್ಮಿಯವರ, ಗೌತಮ್ ಸಾವಕ್ಕನವರ, ಬಸವರಾಜ ಕೊಣಸಾಲಿ, ಅಣ್ಣಪ್ಪ ಶಿಗ್ಗಾಂವಿ, ದೇವರಾಜ, ಸುಲೆಮಾನ್ ಮತ್ತಿಹಳ್ಳಿ, ವಿಜಯ ಶಿರಹಟ್ಟಿ, ಜಗದೀಶ್, ಅತೀಕ್ ಸವಣೂರು, ಬ್ರಹ್ಮೇಂದ್ರ ಸೇರಿದಂತೆ ಅನೇಕ ಪ್ರಮುಖ ಕಾರ್ಯಕರ್ತರು ಪಾಲ್ಗೊಂಡಿದ್ದರು.
