“ಪ್ರಾರಂಭಿದ ಹಂತದಲ್ಲೇ ಪ್ರಶ್ನೆಗೆ ಒಳಪಟ್ಟು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದ ಅಸಹಜ ಸಾವುಗಳ ಪ್ರಕರಣದ ತನಿಖೆಗೆ ಎಸ್.ಐ.ಟಿ ರಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಸ್ವಾಗತಿಸುತ್ತದೆ” ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದ್ದಾರೆ.
ಹಾವೇರಿ ಪಟ್ಟಣದ ಪತ್ರಿಕಾ ಹೇಳಿಕೆ ನೀಡಿದ ಅವರು, “80ರ ದಶಕದಲ್ಲಿ ನಡೆದ ಪದ್ಮಲತಾ ಪ್ರಕರಣದ ಸಂದರ್ಭದಿಂದಲೇ ಡಿವೈಎಫ್ಐ ಅಲ್ಲಿನ ವಿದ್ಯಮಾನಗಳಿಗೆ ವಿರೋಧ ವ್ಯಕ್ತಪಡಿಸಿದೆ. ಹಲವು ಹಂತಗಳಲ್ಲಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡಿದೆ. ಆ ಹೋರಾಟಗಳ ನಂತರವಷ್ಟೇ ಸಿ.ಬಿ.ಐ. ತನಿಖೆಗೆ ಒಪ್ಪಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಪ್ರಕರಣಗಳು ನಡೆದು ಉದ್ದೇಶಪೂರ್ವಕವಾಗಿ ಸಾಕ್ಷಿನಾಶ ಮಾಡಲಾಗಿದೆ ಎಂದೂ ಕುಖ್ಯಾತವಾಗಿದ್ದ ಪ್ರಕರಣಗಳು ಇರುವುದರಿಂದ ಕೂಲಂಕುಷವಾದ ತನಿಖೆ ನಡೆಯಬೇಕಿದೆ” ಎಂದು ಹೇಳಿದರು.
“ಈ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಪ್ರಾರಂಭದ ದಿನಗಳಿಂದ ಪ್ರಕರಣಗಳ ಬೆನ್ನು ಹತ್ತಿ ಹೋರಾಟ ಪ್ರತಿಭಟನೆ ಗಳನ್ನು ಮಾಡಿದ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಸ್.ಐ.ಟಿ ಯು ನಿಷ್ಪಕ್ಷಪಾತ ತನಿಖೆ ನಡೆಸಬೇಕು” ಎಂದರು.
“ಕಾಲ ವಿಳಂಬ ಮಾಡದೇ ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆದು ಸತ್ಯವನ್ನು ಹೊರಗೆಳೆಯಬೇಕು. ಸಿ.ಬಿ.ಐ.ನ್ಯಾಯಾಲಯದ ತೀರ್ಪು ಸೂಚಿಸಿರುವಂತೆ ಸೌಜನ್ಯ ಪ್ರಕರಣದಲ್ಲಿ ಪ್ರಾಥಮಿಕ ಹಂತದಲ್ಲಿ ತನಿಖೆಯ ದಾರಿ ತಪ್ಪಿಸಲು, ಸಾಕ್ಷಿ ನಾಶ ಮಾಡಿದ ತನಿಖಾಧಿಕಾರಿಗಳನ್ನು ತೀವ್ರ ತನಿಖೆಗೆ ಒಳಪಡಿಸಿ, ಆರೋಪಿಗಳನ್ನು ಶಿಕ್ಷಸಬೇಕು” ಎಂದು ಒತ್ತಾಯಿಸಿದರು.