“ಕಳೆದ ಇಪ್ಪತ್ತು ವರ್ಷಗಳಿಂದ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು” ಎಂದು ಸಂಘಟನೆ ಪ್ರಧಾನ ಕಾರ್ಯದರ್ಶಿ ಕೆ. ಹನುಮೇಗೌಡ ಒತ್ತಾಯಿಸಿದರು.
ಹಾವೇರಿ ಪಟ್ಟಣದ ಗುರುವಾರ ಸರಕಾರಿ ನೌಕರರ ಭವನದಲ್ಲಿ ಎಐಎಡಬ್ಲ್ಯುಎ ಸಂಯೋಜಿತ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ-ಕಾಲೇಜ್ ಹೊರಗುತ್ತಿಗೆ ನೌಕರರ ಸಂಘಟನೆಯ ಎರಡನೇ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
“ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ, ಅಹಿಂದ ಜನರ ಪರ ಎನ್ನುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ
ರವರು ಅದೇ ವಿಭಾಗಗಳ ಬಡ ಜನರು ಹಾಸ್ಟೆಲ್ ಹೊರಗುತ್ತಿಗೆ ನೌಕರರು ಆಗಿದ್ದಾರೆ ಇವರನ್ನು ಖಾಯಂ ಮಾಡಲು ವಿಶೇಷ ಕಾನೂನುಗಳನ್ನು ರೂಪಿಸಬೇಕು” ಎಂದರು.
“ಗುತ್ತಿಗೆದಾರರು ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕೊಡ ಬೇಕಾದ ಸೌಲಭ್ಯಗಳನ್ನು ಕೊಡದೆ ಹೊರಗುತ್ತಿಗೆ ನೌಕರರನ್ನು ಶೋಷಣೆ ಮಾಡುತ್ತಿದ್ದಾರೆ. ಇಎಸ್ಐ, ಪಿಎಫ್, ನೇಮಕಾತಿ ಆದೇಶ ಪ್ರತಿ, ಸರ್ವೀಸ್ ಸರ್ಟಿಫಿಕೇಟ್ ಯಾವುದೇ ದಾಖಲೆಗಳನ್ನು ಕೊಡುತ್ತಿಲ್ಲ. ಸರಕಾರ ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ಕೊಡುತ್ತಿದ್ದಾರೆ. ಗುತ್ತಿಗೆದಾರರ ಶೋಷಣೆ ತಪ್ಪಿಸಲು ಸರ್ಕಾರ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು” ಎಂದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಹಲವು ವರ್ಷಗಳಿಂದ ಹಾಸ್ಟೇಲ್ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆಯಡಿ ಯಾವುದೇ ಭದ್ರತೆಯಿಲ್ಲದೇ ದುಡಿಯುತ್ತಿದ್ದರೂ ಕನಿಷ್ಠ ವೇತನ, ಭದ್ರತೆ ಸಿಗದಿರುವುದು ನೋವಿನ ಸಂಗತಿ. ಸಂಘಟನೆ ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕಾಗಿ ಹೋರಾಟ ಮಾಡಿರುವ ಫಲವಾಗಿ ಕನಿಷ್ಠ ವೇತನ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಯಾವುದೇ ಕಾರಣಕ್ಕೂ ಇದನ್ನು ತಡೆಹಿಡಿಯದೇ ರಾಜ್ಯ ಸರಕಾರ ಯಾವುದೇ ವಿಳಂಬ ನೀತಿಯನ್ನು ಅನುಸರಿಸದೇ ಕೂಡಲೇ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ಸಮಾವೇಶದಲ್ಲಿ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯದರ್ಶಿ ಶಿವಲಿಂಗಪ್ಪ ವಿ.ಕೆ ಅವರಿಗೆ ಮನವಿ ಸಲ್ಲಿಸಲಾಯ್ತು. ಮನವಿ ಸ್ವೀಕರಿಸಿ ಮಾತನಾಡಿದ ಶಿವಲಿಂಗಪ್ಪ ವಿ.ಕೆ ಅವರು, “ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ನಮ್ಮ ಹಂತದ ಸಮಸ್ಯೆಗಳ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುತ್ತೇವೆ” ಎಂದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, “ಬಾಬಾ ಸಾಹೇಬರು ಹೇಳಿದಂತೆ ನಾವು ಶಿಕ್ಷಣ, ಸಂಘಟನೆ, ಹೋರಾಟ ಧ್ಯೇಯದಡಿ ಕೆಲಸ ಮಾಡಬೇಕಿದೆ. ನಿಮ್ಮ ಹೋರಾಟದ ಫಲವಾಗಿ ಕನಿಷ್ಠವೇತನ ಜಾರಿಯಾಗಿದೆ. ಬೀದರ್ ಮಾದರಿಯಲ್ಲಿ ಸಹಕಾರಿ ಸಂಘ ಮಾಡಲು ನಮ್ಮ ಹಾವೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿದೆ. ಬರುವ ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ” ಎಂದರು.
“ನೀವು ಕೂಡ ಖಾಯಂ ನೌಕರರಲ್ಲದಿದ್ದರೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುತ್ತಿದ್ದೀರಿ. ಇದರಿಂದಾಗಿ ನಾವು ಉತ್ತಮ ಫಲಿತಾಂಶ ಕೊಡಲು ಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆಯದಾಗಲಿ” ಎಂದು ಹಾರೈಸಿದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಶೋಕ ಗಡ್ಡಿಗೌಡರ ಮಾತನಾಡಿ, “ಹೊರಗುತ್ತಿಗೆ ನೌಕರರು ತಮ್ಮ ಮಕ್ಕಳನ್ನು ಬಿಟ್ಟು ಇಲಾಖೆಯ ಹಾಸ್ಟೇಲ್ ಮಕ್ಕಳ ಏಳಿಗೆಗಾಗಿ ಪರಿಶ್ರಮವಹಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮ ಇಲಾಖೆಯಲ್ಲಿರುವ ಹೊರಗುತ್ತಿಗೆಯವರನ್ನು ನಮ್ಮ ಕುಟುಂಬದವರಂತೆ ಪರಿಗಣಿಸಿ ಅವರಿಗೆ ಸಮಸ್ಯೆಗಳಾಗದಂತೆ ನೋಡಿಕೊಳ್ಳೊತ್ತೇವೆ” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಹೊರಗುತ್ತಿಗೆ ನೌಕರರ ಕುಂದು ಕೊರತೆಗಳನ್ನು ಪರಿಹರಿಸಲು ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ನಿರ್ವಹಣಾ ಸಮಿತಿ ರಚಿಸಲು ಸರಕಾರ ಆದೇಶ ಮಾಡಿದ್ದು, ಈ ವರೆಗೂ ಜಿಲ್ಲೆಯಲ್ಲಿ ಈ ಸಮಿತಿ ರಚನೆಯಾಗಿಲ್ಲ. ಕೂಡಲೇ ಹಾವೇರಿ ಜಿಲ್ಲಾ ಮಟ್ಟದಲ್ಲಿ ಕುಂದು ಕೊರತೆ ನಿರ್ವಹಣಾ ಸಮಿತಿ ರಚಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಯುದ್ಧ ತ್ಯಜಿಸಿದ ಬುದ್ಧ ಅಹಿಂಸಾ ತತ್ವಕ್ಕೆ ಶರಣಾದ: ಎಚ್ ಎಸ್ ಪಾಟೀಲ್
ಕಾರ್ಯಕ್ರಮವನ್ನು ರಮೇಶ ಗುಳ್ಳಮ್ಮನವರ ನಿರ್ವಹಿಸಿದರು. ಸ್ವಾಗತವನ್ನು ಫಕ್ಕಿರೇಶ ಪೂಜಾರ ಸ್ವಾಗತಿಸಿದರು. ಲಿಂಗರಾಜ ದುರ್ಗದ ವಂದಿಸಿದರು.
ವೇದಿಕೆಯಲ್ಲಿ ಹಿರಿಯ ಹೋರಾಟಗಾರರಾದ ರುದ್ರಪ್ಪ ಜಾಬೀನ, ರಾಜ್ಯ ಉಪಾಧ್ಯಕ್ಷರಾದ ಶಾಂತಾ ವಿ. ಗಡ್ಡಿಯವರ, ಜಿಲ್ಲಾ ಮುಖಂಡರಾದ ಎಚ್.ಎಚ್ ನದಾಫ, ಶಿವರಾಜ ಹಿತ್ಲರ್, ಶೋಭಾ ಡೊಳ್ಳೇಶ್ವರ, ಸುನೀತಾ ಬಡನಾಯ್ಕರ, ಸುನೀಲ್ ಎಲ್, ಶೇಖಪ್ಪ ಮಾಗಳಹಳ್ಳಿ, ಅನಸೂಯ ಹಿರೆತಿಮ್ಮಣ್ಣವರ, ಮಹಾಂತೇಶ ಬಳ್ಳೂಡಿ, ಮಾರುತಿ ಎಸ್, ಅಲ್ನಾಬಿ ನದಾಪ್, ರೇಖಾ ಮಾಳಗಿಮನಿ, ವೆಂಕಟೇಶ ಭಜಂತ್ರಿ, ಲಲಿತಾ ಮಿರ್ಜಿ, ಆಂಜನೇಯ ಜಾಡರ, ಪುಟ್ಟಮ್ಮ ಡಿ, ಹನಮವ್ವ, ಮಂಜುಳಾ ಯಳವಟ್ಟಿ, ಮಂಜುನಾಥ, ಪ್ರವೀಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.