ಸೈದ್ಧಾಂತಿಕ ಬದ್ಧತೆಯ, ಸಮರ್ಪಣಾ ಮನೋಭಾವದ ನಾಯಕರು ಹಾಗೂ ಬಹುದೊಡ್ಡ ವಿದ್ವಾಂಸರ ಅಗಲಿಕೆಯು ನಾಡಿನ ಜನ ಚಳವಳಿ ಮತ್ತು ಬೌದ್ಧಿಕ, ಸಾಹಿತ್ಯ ವಲಯಗಳಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಅಭಿಪ್ರಾಯಪಟ್ಟರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಗಲಿದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್ಎಸ್) ರಾಜ್ಯ ಅಧ್ಯಕ್ಷರಾಗಿದ್ದ ಜಿ ಸಿ ಬಯ್ಯಾರೆಡ್ಡಿ ಮತ್ತು ಪ್ರಖ್ಯಾತ ಚಿಂತಕರು, ವಿದ್ವಾಂಸರು, ಸಾಹಿತಿಗಳಾಗಿದ್ದ ಪ್ರೊ. ಮುಜಾಫರ್ ಅಸ್ಸಾದಿ ಹಾಗೂ ನಾ ಡಿಸೋಜಾ ಅವರಿಗೆ ಪ್ರಗತಿಪರ, ಸಮಾನ ಮನಸ್ಕ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಗೌರವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಪ್ರಾಮಾಣಿಕತೆ, ಸೈದ್ಧಾಂತಿಕ ಬದ್ಧತೆ ಹಾಗೂ ಸಮರಶೀಲ ಹೋರಾಟದ ಮನೋಭಾವದ ಜಿ ಸಿ ಬಯ್ಯಾರೆಡ್ಡಿಯವರು ರಾಜ್ಯದಲ್ಲಿ ರೈತ, ಕಾರ್ಮಿಕರು, ದಲಿತರು, ಆದಿವಾಸಿ ಸಮುದಾಯಗಳು, ಮಹಿಳೆಯರು ಸೇರಿದಂತೆ ಎಲ್ಲ ಶೋಷಿತ ಜನ ವಿಭಾಗಗಳ ಐಕ್ಯ ಚಳವಳಿ ಕಟ್ಟುವಲ್ಲಿ ಮತ್ತು ಅದನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಸಮಾಜದಲ್ಲಿ ಶಾಂತಿ, ನಾಡಿನ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ, ರಾಜ್ಯದಲ್ಲಿ ದುಡಿಯುವ ವರ್ಗದ ಪರ್ಯಾಯ ರಾಜಕೀಯವನ್ನು ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದು” ಎಂದರು.
“ಪ್ರೊ. ಮುಜಾಫರ್ ಅಸ್ಸಾದಿ ಹಾಗೂ ನಾ. ಡಿಸೋಜಾ ಅವರು ಅಪಾರ ಪಾಂಡಿತ್ಯ ತುಂಬಿದ ಕೊಡದಂತಿದ್ದರು. ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರಾಗಿದ್ದರೂ ಯಾವುದೇ ಗರ್ವವಿಲ್ಲದ, ತೀರಾ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು. ಸಮಸಮಾಜವನ್ನು ಕಟ್ಟುವ, ಅನ್ಯಾಯ ಅಸಮಾನತೆಗಳ ಎದುರಿನಲ್ಲಿ ಹೋರಾಡುವ ಜೊತೆಯಲ್ಲಿ ಅವರ ಕೊಡುಗೆಗಳನ್ನು ಸ್ಮರಿಸುತ್ತ ಅವರ ಆಶಯಗಳನ್ನು ಸಾಧಿಸಲು ಮುಂದಾಗುವುದೇ ಈ ಗಣ್ಯರಿಗೆ ಅರ್ಪಿಸುವ ನೈಜ ಶ್ರದ್ದಾಂಜಲಿಯಾಗಿದೆ” ಎಂದು ಬಸವರಾಜ ಪೂಜಾರ ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ, ಅಗಲಿದ ಮೂವರು ಗಣ್ಯರ ಭಾವಚಿತ್ರಗಳಿಗೆ ಪುಷ್ಪಾರ್ಪಣೆಗೈದು ಎರಡು ನಿಮಿಷಗಳ ಗೌರವ ಶ್ರದ್ಧಾಂಜಲಿಗಳನ್ನು ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಬಂದ್ | ಬೆಳ್ಳಂ ಬೆಳಿಗ್ಗೆಯೇ ಶುರುವಾದ ಪ್ರತಿಭಟನೆ : ಸಂಪೂರ್ಣ ಸ್ತಬ್ಧ
ಕಾರ್ಯಕ್ರಮದಲ್ಲಿ ಡಿಎಸ್ಎಸ್ ರಾಜ್ಯ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಅಲೆಮಾರಿ-ಅರೆ ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿನಾಯಕ, ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ ಕೆ ಮಕಬುಲ್, ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡ ಶಿವಬಸಪ್ಪ ಗೋವಿ, ರೈತ ಸಂಘಟನೆಯ ಶಹರ ಅಧ್ಯಕ್ಷ ಸುರೇಶ ಛಲವಾದಿ, ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಪರಿಮಳ ಜೈನ, ಯುವ ಸಾಹಿತಿ ರಾಜಶೇಖರ ಮಾಳವಾಡ, ಕೆಎಸ್ಡಿಸಿಎಫ್ ಜಿಲ್ಲಾ ಮುಖಂಡ ಖಲಂದರ್ ಅಲ್ಲಿಗೌಡ್ರ, ಎಸ್ಎಫ್ಐ-ಡಿವೈಎಫ್ಐ ಮುಖಂಡರಾದ ಗೌತಮ ಸಾವಕ್ಕನವರ, ಮಹೇಶ ಮರೋಳ, ಬಸನಗೌಡ ಭರಮಗೌಡ್ರ, ವಿಠ್ಠಲ ಗೌಳಿ, ರೇಣುಕಾ ಕಹಾರ, ಧನುಷ್ ದೊಡ್ಮನಿ, ಅನ್ವಿಕಾ ಆರ್ ಬಿ ಇದ್ದರು.