“ರಾಜ್ಯ ಸರಕಾರ ಹಾವೇರಿ ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ರದ್ದುಪಡಿಸಬೇಕು. ನಮ್ಮ ಶಾಂತಿಯುತ ಈ ಪ್ರತಿಭಟನೆಗೆ ಸರಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ” ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನ ಎದುರಿಗೆ ಇಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
“ಜಿಲ್ಲೆಯಾಗಿ ಇಪ್ಪತೈದು ವರ್ಷಗಳಾದರೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಶೈಕ್ಷಣಿಕವಾಗಿಯಾದರೂ ಮುಂದುವರೆದಿದ್ದೇವೆ ಎಂದು ಹೇಳಿಕೊಳ್ಳಲಾಗುತ್ತಿಲ್ಲ. ಈ ಕಾರಣದಿಂದಾಗಿ ಜಿಲ್ಲೆಯ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕು. ಶಿಕ್ಷಣಕ್ಕಾಗಿ ದಾವಣಗೆರೆ, ಧಾರವಾಡದಂತಹ ದೂರದ ನಗರಗಳಿಗೆ ಬಡ ಮಕ್ಕಳು ಅಲೆದಾಡುವಂತಾಗಬಾರದು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗಬೇಕು. ಹಾಗಾಗಿ ಸರಕಾರ ನಮ್ಮ ಮನವಿಗೆ ಕಣ್ತೆರೆದು ಸ್ಪಂದಿಸಬೇಕು” ಎಂದು ಹೇಳಿದರು.
ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿಯವರು ಮಾತನಾಡಿ, “ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾವೇರಿ ವಿಶ್ವ ವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯಿಂದ ಸರಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ಹೋರಾಟ ಬೇರೆಯೆ ತಿರುವು ಪಡೆಯುತ್ತದೆ. ಸರಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವಿಶ್ವ ವಿದ್ಯಾಲಯದ ಬೆಳವಣಿಗೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು” ಎಂದು ಹೇಳಿದರು.
ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮೀಗಳು ಮಾತನಾಡಿ, “ಹಾವೇರಿ ವಿವಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ಒಂದು ಸಾರಿ ನಮಗೆ ಸಿಕ್ಕ ಈ ವಿಶ್ವವಿದ್ಯಾಲಯದ ಅವಕಾಶವನ್ನು ನಾವು ಕಳೆದುಕೊಂಡರೆ ಮತ್ತೆ ನಾವು ಪಡೆದುಕೊಳ್ಳಲು ಸಾಧ್ಯವಿಲ್ಲ. ದೇಶ ಬೆಳೆಯಬೇಕಾದರೆ ಕೃಷಿ ಮತ್ತು ಶಿಕ್ಷಣ ಅಭಿವೃದ್ಧಿಯಾಗಬೇಕು. ಸರಕಾರ ಇದನ್ನು ಮನಗಾಣಬೇಕು. ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಿರಂತರವಾಗಿ ವಂಚನೆಗೊಳಗಾಗುತ್ತಿದೆ. ಹಾಗಾಗಿ ಸರಕಾರ ವಿಶ್ವ ವಿದ್ಯಾಲಯ ಮುಚ್ಚಲು ಅಥವಾ ವಿಲೀನಗೊಳಿಸಲು ಮುಂದಾಗಬಾರದು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಧ್ವಜ ದಿನಾಚರಣೆ
ಮನವಿ ಸಂದರ್ಭದಲ್ಲಿ ಹಾವೇರಿ ಬಣ್ಣದ ಮಠದ ಶ್ರೀ ಅಭಿನರುದ್ರ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮೌಲ್ವಿಗಳು ಜನಾಬ್ ಮುಕ್ತಿಯಾರ್ ಅಹಮದ್ ಭಾವಿಕಟ್ಟಿ, ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಏಳುಕೋಟೆಪ್ಪ ಪಾಟೀಲ, ಹನುಮಂತ ಹಲಗೇರಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಹಿರಿಯ ನಾಗರೀಕರ ವೇದಿಕೆ ಮುಖಂಡರಾದ ಎಸ್.ಎನ್ ತಿಪ್ಪನಗೌಡ್ರ, ಕರವೇ ಜಿಲ್ಲಾಧ್ಯಕ್ಷರಾದ ಗಿರೀಶ ಬಾರ್ಕಿ, ಡಿ.ಎಸ್.ಎಸ್ ರಾಜ್ಯ ಮುಖಂಡರಾದ ಉಡಚಪ್ಪ ಮಾಳಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.