ಗದಗ- ಹೊನ್ನಾಳಿ ರಸ್ತೆಗೆ ಕೆಳಸೇತುವೆ ನಿರ್ಮಿಸಿ, ರಾಣೆಬೆನ್ನೂರು -ಕೂನಬೇವು ರಸ್ತೆಯಲ್ಲಿ ಈಗಿರುವಂತೆಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕೂನಬೇವು, ಕಜ್ಜರಿ ಹಾಗೂ ಬುಡಪನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಹಿಂದೆ ಗ್ರಾಮಸ್ಥರು ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ( ಕೆಶಿಪ್)ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಅವರು, ಪರಿಶೀಲನೆ ನಡೆಸುತ್ತೇವೆ ಎಂದು ಸಬೂಬು ಹೇಳುತ್ತಾ, ರಸ್ತೆ ಕಾಮಗಾರಿ ನಡೆಸುತ್ತಲೇ ಬಂದರು. ಈ ಸಂಬಂಧ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದ ಶಾಸಕರಾದ ಬಸವರಾಜ ಶಿವಣ್ಣನವರ ಅವರು ಸ್ಥಳಕ್ಕೆ ಭೇಟಿ ನೀಡಿ, ಕೆಳಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಆದಾಗ್ಯೂ, ಕೆಶಿಫ್ ಈ ವಿಷಯದಲ್ಲಿ ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿದ ಗ್ರಾಮಸ್ಥರು, ನಮಗೆ ಈಗಿರುವ ರಸ್ತೆ ಮಟ್ಟದಲ್ಲೇ ಸುಗಮ ಸಂಚಾರ ಸಾಧ್ಯವಾಗುವ ರೀತಿಯಲ್ಲಿ ಗದಗ-ಹೊನ್ನಾಳಿ ಹೆದ್ದಾರಿಗೆ ಕೆಳಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸಿ ಒಂದು ವರ್ಷ ಆದರೂ ಕಾಮಗಾರಿ ನಡೆಯುತ್ತಲೇ ಇದೆ. ಮೊದಲು ನಮಗೆ ಕೆಳಸೇತುವೆ ನಿರ್ಮಿಸಿ, ಆನಂತರ ಕಾಮಗಾರಿ ಮುಂದುವರೆಸಿ ಎಂದು ಒತ್ತಾಯಿಸಿ, ಕಾಮಗಾರಿಯನ್ನು ತಡೆದು ನಿಲ್ಲಿಸಿದರು.
ಸ್ಥಳಕ್ಕೆ ಬಾರದ ಅಧಿಕಾರಿಗಳು
ನೂರಾರು ಗ್ರಾಮಸ್ಥರು, ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದಿರಲಿಲ್ಲ. ರೈತಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಎಪಿಎಮ್ಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ ಹಾಗೂ ಜಿ. ಪಂ ಸದಸ್ಯ ಏಕನಾಥ ಭಾನುವಳ್ಳಿ ಅವರು ಕೆಶಿಪ್ ಅಧಿಕಾರಿಗಳೊಂದಿಗೆ ಫೋನಿನಲ್ಲಿಯೇ ಮಾತನಾಡಿದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಆರ್ ಎಚ್ ಭಗವಾನ್ ಮತ್ತು ಪೊಲೀಸ್ ಅಧಿಕಾರಿಗಳು, ರೇಲ್ವೆ ಮೇಲ್ಸೇತುವೆ ಸುತ್ತುವರೆದು ಸಂಚರಿಸುವುದರಿಂದ ಗ್ರಾಮಸ್ಥರು ಅನುಭವಿಸಬೇಕಾದ ತೊಂದರೆ, ಅಪಾಯ ಮತ್ತು ಅನಾನುಕೂಲಗಳನ್ನು ಕುರಿತು ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದರು.
ನಂತರ ಕೆಶಿಪ್ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು ಇದೇ ದಿ. 15ರಂದು ಕೆಶಿಪ್, ಜನಪ್ರತಿನಿಧಿಗಳು ಹಾಗೂ ರೈತಸಂಘದ ಪ್ರತಿನಿಧಿಗಳನ್ನು ಸೇರಿಸಿ ಸಭೆಯೊಂದನ್ನು ಆಯೋಜಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರಲ್ಲದೆ, ಆ ವರೆಗೆ ಕಾಮಗಾರಿ ನಡೆಸಕೂಡದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಣೆಬೆನ್ನೂರು ಗ್ರಾಮೀಣ ಠಾಣೆಯ ಪಿಎಸ್ಐ ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಇದನ್ನು ಓದಿದ್ದೀರಾ? ರತನ್ ಟಾಟಾ | ಬಂಡವಾಳಶಾಹಿಗಳ ರತ್ನ – ಸಮಾಜವಾದಿ ಆಶಯಗಳ ದುಃಸ್ವಪ್ನ?
ಪ್ರತಿಭಟನೆಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಜಿಪಂ ಸದಸ್ಯ ಏಕನಾಥ್ ಭಾನುವಳ್ಳಿ, ರೈತಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜ್ಯ ಸಂಚಾಲಕ ರವೀಂದ್ರಗೌಡ ಪಾಟೀಲ, ಎಎಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಗ್ರಾಂ.ಪಂ ಮಾಜಿ ಅಧ್ಯಕ್ಷ ಮಾಲತೇಶ ಮಾಸಣಗಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಮೈಲಾರೆಪ್ಪ ಮಾಳಗುಡ್ಡಪ್ಪನವರ, ರೈತಸಂಘದ ತಾಲುಕಾ ಕಾರ್ಯದರ್ಶಿ ಚಂ ಸು. ಪಾಟೀಲ, ಗ್ರಾಮ ಘಟಕದ ಅಧ್ಯಕ್ಷ ಮಹಾದೇವಪ್ಪ ಬಣಕಾರ, ಚನ್ನವೀರಗೌಡ ಪಾಟೀಲ, ರುದ್ರಗೌಡ ಪಾಟೀಲ, ಷಣ್ಮುಖಪ್ಪ ಅಣಜಿ, ವಿರುಪಾಕ್ಷಪ್ಪ ಬಣಕಾರ, ಲಕ್ಕಣ್ಣ ಅಣಜಿ, ಚನಬಸಗೌಡ ಪಾಟೀಲ, ಪರಮೇಶ್ವರಪ್ಪ ಬಣಕಾರ ಸೇರಿದಂತೆ ನೂರಾರು ರೈತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
