“ವಿಕಲಚೇತನರಿಗೆ ನಿರಾಮಯಾ ಕಾರ್ಡ್ ವಿತರಿಸುವುದು ಕಡಿಮೆ ಆಗಿದೆ. ನಮ್ಮ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಿಟಿಜನ್ ಜರ್ನಲಿಸ್ಟ್ ಕಾರ್ಯಾಗಾರ ಮಾಡಲಾಗುತ್ತಿದೆ. ಎಲ್ಲರೂ ಒಂದಾಗಿ ಸ್ವಾಸ್ಥ್ಯ ಸಮಾಜವನ್ನು ಕಟ್ಟಬೇಕಿದೆ” ಎಂದು ರೋಷನಿ ಸಂಸ್ಥೆಯ ನಿರ್ದೇಶಕರು ಅನಿತಾ ಡಿಸೋಜಾ ಅವರು ಪ್ರಸ್ತಾವಿಕ ಮಾತುಗಳನ್ನು ಆಡಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ರೋಷನಿ ಸಂಸ್ಥೆ ಹಾಗೂ ನ್ಯಾಷನಲ್ ಟ್ರಸ್ಟ್ ಸಹಯೋಗದಲ್ಲಿ ಬಡ್ತೆ ಕದಂ ಅಟಿಸಂ, ಸೆರೆಬ್ರೇಲ್ ಪಾಲಸಿ, ಮಲ್ಟಿಪಲ್ ಡಿಜೆಬಿಲಿಟಿ, ಜಾಗೃತ ಕಾರ್ಯಕ್ರಮ ಹಾಗೂ ಸುದ್ದಿ ಬರವಣಿಗೆ ಕುರಿತು ಕಾರ್ಯಗಾರ ರೋಷನಿ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ವಿಸ್ತರಣಾ ಅಧಿಕಾರಿ ಎಸ್ ಆನಂದ ಮಾತನಾಡಿ, “ನಮ್ಮ ಕೆಲಸದ ಒತ್ತಡದಲ್ಲಿ ಸಾಮಾಜಿಕ ಕಾರ್ಯ ಮಾಡಲು ಸಾಧ್ಯವಾಗದಿರಬಹುದು. ಆದರೆ; ರೋಶನಿ ಸಂಸ್ಥೆ ಸಾಮಾಜಿಕ ಸೇವೆಯ ಮೂಲಕ ಸಮಾಜದಿಂದ ದೂರವಿರುವವರನ್ನು ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಮಾಡುತ್ತಿರುವುದು ಮಹತ್ಕಾರ್ಯವಾಗಿದೆ. ಉಚಿತ ಟ್ರೀಟಮೆಂಟ್ ಮತ್ತು ವಿಶೇಷವಾಗಿ ಮದ್ಯವ್ಯಸನ ಬಿಡಿಸುವ ಕಾರ್ಯದಲ್ಲಿ ರೋಶನಿ ಯಶಸ್ವಿ ಕಂಡಿದೆ. ನಾವು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಮೊದಲು ಮಾನಸಿಕವಾಗಿ ಗಟ್ಟಿಗೊಳ್ಳಬೇಕು. ಇಂತಹ ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಹಕಾರವಿರುತ್ತದೆ” ಎಂದರು.
ಸಾಹಿತಿ ಪತ್ರಕರ್ತರು ಮಾರುತಿ ಸಿಡ್ಲಾಪುರ ಮಾತನಾಡಿ, “ಸರ್ಕಾರವು ಸಾಕಷ್ಟು ಅವಕಾಶ ನೀಡುತ್ತದೆ. ಆದರೆ; ಅವಕಾಶಗಳು ಎಲ್ಲರಿಗೂ ತಲುಪುವುದಿಲ್ಲ. ಸಮಾಜದಲ್ಲಿರುವ ತೊಂದರೆಗಳನ್ನು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವುದು ಪತ್ರಿಕೆಯ ಕೆಲಸವಾಗಬೇಕು. ಎಲ್ಲರೂ ನನಗೇಕೆ ಬೇಕು ಎಂದರೆ ಬದಲಾವಣೆ ಸಾಧ್ಯವೆ? ಆದ್ದರಿಂದ ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯರೇ ಕಾಳಜಿವಹಿಸಬೇಕಿದೆ. ಸರ್ಕಾರಕ್ಕೆ ಸುದ್ದಿ ಮುಟ್ಟಿಸುವ ಕೆಲಸವಾದರೆ; ಪರಿವರ್ತನೆ ಸಾಧ್ಯವಾಗುತ್ತದೆ. ದುರ್ಬಲರನ್ನು ಉಳಿಸುವ ಕೆಲಸವಾಗಲಿ” ಎಂದರು.
ಸಾಮಾಜಿಕ ಕಾರ್ಯಕರ್ತರು ಫೇರೋಜ್ ಅಹಮ್ಮದ್ ಶಿರಬಡಗಿ ಮಾತನಾಡಿ, ತಮ್ಮಷ್ಟಕ್ಕೆ ತಾವೇ ಕೆಲಸ ಮಾಡಿಕೊಂಡು ಹೋಗುವುದು ದೊಡ್ಡ ಕೆಲಸವಲ್ಲ. ಆದರೆ; ಸಮಾಜ ಸೇವೆಯಲ್ಲಿ ಸಿಗುವ ಸಂತೋಷ ಎಲ್ಲೂ ಸಿಗಲ್ಲ. ದುಡಿದು ಗಳಿಸಿ ಶ್ರೀಮಂತರಾಗುವುದೇ ಮುಖ್ಯವಲ್ಲ. ಸೇವೆ ಮಾಡುವುದೇ ಮುಖ್ಯವಾಗಬೇಕು ಎಂದರು.

ಈ ಸುದ್ದಿ ಓದಿದ್ದೀರಾ? ಗದಗ | ನವ ಗುಲಾಮಗಿರಿಗೆ ತಳ್ಳುತ್ತಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಲು ಒತ್ತಾಯಿಸಿ: ಬೃಹತ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಅಂಗವಿಕಲರಿಗೆ ನಿರಾಮಾಯ ಕಾರ್ಡಗಳನ್ನು ವಿತರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಈದಿನ.ಕಾಮ್ ಜಿಲ್ಲಾ ವರದಿಗಾರರು ಶರಣಪ್ಪ ಎಚ್ ಸಂಗನಾಳ, ಈದಿನ.ಕಾಮ್ ಸೆಂಟ್ರಲ್ ಕೋ-ಆರ್ಡಿನೆಟರ್ ಸಂತೋಷ ಎಚ್ ಎಂ ಹಾಗೂ ರೋಷನಿ ಸಂಸ್ಥೆಯ ಸಿಬ್ಬಂದಿಗಳು ಅನೇಕರು ಉಪಸ್ಥಿತರಿದ್ದರು.
Thanks for the support