ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯ ಕೆರೆಹಳ್ಳಿಯಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಮಹಿಳೆಯರು ಪ್ರತಿಭಟನೆ ನಡೆಸಿ, ಗ್ರಾಮ ಲೆಕ್ಕಾಧಿಕಾರಿ ಶೋಭಾ ಮೂಲಕ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರಿಗೆ ಮನವಿ ಸಲ್ಲಿಸಿದರು.
ಎಂಎಸ್ಐಎಲ್ ಅಂಗಡಿಯ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, “ಈ ಗ್ರಾಮಕ್ಕೆ ಒಂದೇ ರಸ್ತೆ ಇದ್ದು, ಗ್ರಾಮಸ್ಥರು ಈ ರಸ್ತೆಯ ಮೂಲಕವೇ ನಡೆದು ಹೋಗಬೇಕಿದೆ. ಮಹಿಳೆಯರು, ಯುವತಿಯರು, ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಮದ್ಯದಂಗಡಿ ಬಳಿ ಬರುವ ಕೆಲ ಕಿಡಿಗೇಡಿಗಳಿಂದ ಕಿರಿಕಿರಿಯಾಗುತ್ತಿದೆ. ಕೆಲವರು ರೇಗಿಸಿದ್ದುಂಟು. ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಕೂಡಲೇ ಮದ್ಯದಂಗಡಿಯನ್ನು ತೆರವುಗೊಳಿಸಬೇಕು” ಎಂದು ಒತ್ತಾಯಿಸಿದರು.
“ಇಲ್ಲಿ ಮದ್ಯ ಖರೀದಿಸಿದ ಮದ್ಯಪ್ರಿಯರು ನಮ್ಮ ಜಮೀನಿನಲ್ಲಿ ಹಾಗೂ ಮನೆಯ ಹಿಂಭಾಗದಲ್ಲಿ ಬಂದು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಮನಸೋಇಚ್ಚೆ ಪುಡಿ ಮಾಡಿ ಗ್ರಾಮದ ಸ್ವಾಸ್ಥ್ಯವನ್ನು ಹಾಳು ಮಾಡುತಿದ್ದು, ಸಂಜೆ 6 ಗಂಟೆಯ ಮೇಲೆ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಬರಲು ಆಗದಂತಹ ಸನ್ನಿವೇಶವುಂಟಾಗಿದೆ” ಎಂದು ಅಲವತ್ತುಕೊಂಡರು.
ಗ್ರಾಮದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಮದ್ಯದಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಪಟ್ಟುಹಿಡಿದು ಕುಳಿತಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾ ನಿರತರ ಮನವಿ ಆಲಿಸಿದರು.

ಅಬಕಾರಿ ಅಧಿಕಾರಿ ನಾಗರಾಜ್ ಮಾತನಾಡಿ, “ಈ ಸಮಸ್ಯೆಯ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಜತೆಗೆ ನಿತ್ಯವೂ ಈ ಭಾಗದಲ್ಲಿ ಅಬಕಾರಿ ಇಲಾಖೆಯಿಂದ ಬೀಟ್ ವ್ಯವಸ್ಥೆ ಕಲಿಸಿಕೊಡಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? 10.43 ಕೋಟಿ ಮನರೇಗಾ ದಿನಗೂಲಿಗಳ ನೋಂದಣಿ ರದ್ದು; ಬಡವರ ಬದುಕು ಕಸಿದ ಮೋದಿ ಸರ್ಕಾರ
ಪಿಎಸ್ಐ ಪ್ರವೀಣ್ ಎಸ್ ಪಿ ಮಾತನಾಡಿ, “ಇಲ್ಲಿನ ಸಮಸ್ಯೆಗಳ ವರದಿಯನ್ನು ಮೇಲಧಿಕಾರಿಗೆ ಕಳುಹಿಸಿಕೊಟ್ಟು ಕ್ರಮಕೈಗೊಳ್ಳಲಾಗುವುದು ಹಾಗೂ ಅಸಭ್ಯವಾಗಿ ವರ್ತಿಸುವವರ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ನಂತರ ಗ್ರಾಮ ಪಂಚಾಯಿತಿಗೆ ತೆರಳಿ ಅಧ್ಯಕ್ಷರು ಹಾಗೂ ಪಿಡಿಒಗೆ ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಪ್ರಮುಖರಾದ ರವೀಂದ್ರ ಕೆರೆಹಳ್ಳಿ , ಟೀಕಪ್ಪ ಗೌಡ, ಶಾಂತಮ್ಮ, ಜಯಮ್ಮ, ಹೇಮಾವತಿ, ವನಿತಾ, ಮುರುಳಿ ಕೆರೆಹಳ್ಳಿ, ಮಂಜುನಾಥ್ ಗೌಡ, ಸಂತೋಷ್, ಸಚಿನ್ ಗೌಡ, ಅವಿನಾಶ್, ಗಣೇಶ್ ಸೇರಿದಂತೆ ಇತರರು ಇದ್ದರು.