ಉದ್ಯಾನನಗರಿ, ಸಿಲಿಕಾನ್ ಸಿಟಿ, ಕಲ್ಯಾಣ ನಗರಿ, ಕೆರೆಗಳ ನಗರಿ, ಹೈಟೆಕ್ ಸಿಟಿ, ಎಲೆಕ್ಟ್ರಾನಿಕ್ ಸಿಟಿ ಎಂಬೆಲ್ಲ ಹೆಸರಿನಿಂದ ವಿಶ್ವದಲ್ಲಿಯೇ ಖ್ಯಾತಿ ಗಳಿಸಿರುವ ರಾಜ್ಯ ರಾಜಧಾನಿ ಬೆಂಗಳೂರು ಮಳೆಗಾಲದ ಸಮಯದಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ಸಂಪೂರ್ಣ ವಿಫಲವಾಗಿದೆ.
ಹೌದು, ನಗರೀಕರಣದತ್ತ ದಾಪುಗಾಲಿನಲ್ಲಿ ಮುನ್ನುಗ್ಗುತ್ತಿರುವ ಬೆಂಗಳೂರು ಪ್ರತಿ ವರ್ಷ ಮಳೆಗಾಲದ ಸಮಯ ಬಂತೆಂದರೆ ಸಾಕು ಸಮಸ್ಯೆಗಳ ಸರಮಾಲೆಯನ್ನು ಹೊತ್ತು ಬರುತ್ತದೆ. ಅಂಡರ್ಪಾಸ್ಗಳು ನೀರಿನಿಂದ ಜಲಾವೃತಗೊಂಡರೆ, ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯುತ್ತದೆ. ಇದರೊಂದಿಗೆ, ಬಲಿಗಾಗಿ ಕಾದು ಕುಳಿತಿರುವ ರಸ್ತೆಗುಂಡಿಗಳು ಸೇರಿದಂತೆ ಹಲವಾರು ಸಮಸ್ಯೆಗಳು ನಗರದಲ್ಲಿ ತಾಂಡವವಾಡುತ್ತಿವೆ.
ಈ ಸಮಸ್ಯೆಗಳಿಗೆ ಬೆಂಗಳೂರಿನ ಹಲವು ನಾಗರಿಕರು ಬಲಿಯಾಗಿದ್ದಾರೆ. ಅಂಡರ್ಪಾಸ್ಗಳಲ್ಲಿ ನೀರು ತುಂಬಿ ಓರ್ವ ಯುವತಿ ಇತ್ತೀಚೆಗೆ ಸಾವನ್ನಪ್ಪಿದ್ದರು. ರಸ್ತೆಗುಂಡಿಗಳಿಂದ ಹಲವರು ಪ್ರಾಣತೆತ್ತಿದ್ದರೆ, ಇನ್ನೂ ಹಲವರು ಗಂಭೀರ ಗಾಯಗೊಂಡು ಅಂಗಾಂಗ ವೈಕಲ್ಯಗಳಿಂದ ಜೀವನ ದೂಡುತ್ತಿದ್ದಾರೆ.
ರಸ್ತೆಗುಂಡಿ, ಜಲಾವೃತಗಳ ಸಮಸ್ಯೆ ಈ ವರ್ಷದ್ದಲ್ಲ, ಇದು ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಎದುರಾಗುವ ಸಮಸ್ಯೆಗಳಾಗಿವೆ. ಇಷ್ಟಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದೆ ಎಂಬುದಕ್ಕೆ ಈ ವರ್ಷದ ಮಳೆಗಾಲದ ಸಮಯದಲ್ಲಿ ನಗರದಲ್ಲಿ ಉಂಟಾದ ಸಮಸ್ಯೆಗಳೇ ಸಾಕ್ಷಿ.
ಅನುದಾನವಿದ್ದರೂ ಮುಚ್ಚದ ಗುಂಡಿಗಳು
ಮಳೆಗಾಲಕ್ಕೂ ಮುಂಚೆ ರಸ್ತೆ ನಿರ್ವಹಣೆ, ಕೆರೆ, ರಾಜಕಾಲುವೆ ಹಾಗೂ ಚರಂಡಿ ಹೂಳೆತ್ತಲು ಬಿಬಿಎಂಪಿ ಸಿದ್ಧವಾಗಿರಬೇಕು. ಆದರೆ, ಬಿಬಿಎಂಪಿ ತನ್ನ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂಬುದು ಮಳೆ ಸುರಿಯುತ್ತಿರುವ ಈ ಸಮಯದಲ್ಲಿ ತಿಳಿಯುತ್ತದೆ. ಮಳೆನೀರು ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗಾಗಿ ಬಿಬಿಎಂಪಿಯ 2023-24ರ ಬಜೆಟ್ನಲ್ಲಿ ₹7,020 ಕೋಟಿ ಮೀಸಲಿಟ್ಟಿದೆ.
ಪ್ರವಾಹ ನಿಯಂತ್ರಣಕ್ಕಾಗಿ ಪ್ರಾಥಮಿಕ ಮತ್ತು ದ್ವಿತೀಯ ಚರಂಡಿಗಳ ದುರಸ್ತಿ ಮತ್ತು ನಿರ್ವಹಣೆಗೆ ₹55 ಕೋಟಿ ಹಾಗೂ 12 ಕೆರೆಗಳ ಪುನರುಜ್ಜೀವನಕ್ಕೆ ₹35 ಕೋಟಿಯನ್ನು ಬಿಬಿಎಂಪಿ ಮೀಸಲಿರಿಸಿದೆ.
ಅಲ್ಲದೆ, ಈ ಹಿಂದಿನ 243 ವಾರ್ಡ್ಗಳಿಗೂ ಎಲ್ಲ ರಸ್ತೆ-ಚರಂಡಿ, ಪಾದಚಾರಿ ಮಾರ್ಗ ದುರಸ್ತಿ, ಚರಂಡಿಗಳ ಹೊಳೆತ್ತುವಿಕೆ ಹಾಗೂ ನಿರ್ವಹಣೆಗೆ ತಲಾ ₹30 ಲಕ್ಷ ನೀಡಲಾಗಿತ್ತು. ರಸ್ತೆ ಗುಂಡಿ ಮುಚ್ಚುವಿಕೆಗೆ ಪ್ರತಿ ವಾರ್ಡ್ಗೆ ತಲಾ ₹15 ಲಕ್ಷ ನೀಡಲಾಗಿದೆ. ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ ₹25 ಲಕ್ಷ ಹಾಗೂ ಮಾನ್ಸೂನ್ ಕಂಟ್ರೋಲ್ ರೂಂ ನಿರ್ವಹಣೆಗೆ ತಲಾ ₹5 ಲಕ್ಷದಂತೆ ಪ್ರತಿ ವಾರ್ಡಗೆ ಒಟ್ಟು 75 ಲಕ್ಷ ನೀಡಲಾಗುವುದು ಎಂದು ಇತ್ತೀಚೆಗೆ ಬಿಬಿಎಂಪಿ ಪ್ರಕಟಣೆ ಹೊರಡಿಸಿತ್ತು.
ಜನರು ಕಟ್ಟಿದ ತೆರಿಗೆ ಹಣಕ್ಕೆ ಸಮಸ್ಯೆಗಳ ಮಹಾಪೂರ
ಅನುದಾನದ ಜತೆಗೆ ಬಿಬಿಎಂಪಿಯು ರಸ್ತೆಗಳು, ಉದ್ಯಾನವನಗಳು ಮತ್ತು ಕೆರೆಗಳ ನಿರ್ವಹಣೆಯಂತಹ ನಾಗರಿಕ ಕಾರ್ಯಗಳನ್ನು ಕೈಗೊಳ್ಳಲು ತೆರಿಗೆ ಆದಾಯವನ್ನು ಅವಲಂಬಿಸಿದೆ. ಬಿಬಿಎಂಪಿ ಪ್ರತಿ ವರ್ಷ ನಗರದ ನಾಗರಿಕರಿಂದ ಆಸ್ತಿ ತೆರಿಗೆಯನ್ನು ಸಂಗ್ರಹಿಸುತ್ತದೆ. ಪ್ರತಿ ವರ್ಷವೂ ಆಸ್ತಿ ತೆರಿಗೆ ಕಟ್ಟದೇ ವಂಚಿಸುವವರಿಗೆ ನೋಟಿಸ್ ಕಳುಹಿಸಿ ಆಸ್ತಿ ತೆರಿಗೆ ಕಟ್ಟುವಂತೆ ಹೇಳುತ್ತದೆ.
ಈ ವರ್ಷ ಇದುವರೆಗೆ ಊಹಿಸಲೂ ಸಾಧ್ಯವಾಗದ ₹ 4,000 ಕೋಟಿ ತೆರಿಗೆ ಸಂಗ್ರಹವನ್ನು ಸಂಗ್ರಹಿಸುವ ವಿಶ್ವಾಸವನ್ನು ಬಿಬಿಎಂಪಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ (ಅಕ್ಟೋಬರ್ ವರೆಗೆ) ಬಿಬಿಎಂಪಿ ₹2,637 ಕೋಟಿ ಸಂಗ್ರಹಿಸಿದ್ದರೆ, ಅದರ ಹಿಂದಿನ ವರ್ಷ ₹2,415 ಕೋಟಿ ಸಂಗ್ರಹಿಸಿದೆ.
2022-23ರಲ್ಲಿ ಬಿಬಿಎಂಪಿ ₹3,339 ಕೋಟಿ, 2021-22ರಲ್ಲಿ ₹3,123 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಬಿಬಿಎಂಪಿಯು ವರ್ಷಕ್ಕೆ ಶೇ.64ರಷ್ಟು ಆಸ್ತಿ ತೆರಿಗೆ ಸಂಗ್ರಹವನ್ನು ಸಾಧಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಮಳೆಯ ಅಬ್ಬರ: ಹಲವು ಬಡಾವಣೆಗಳು ಜಲಾವೃತ, ವಾಹನ ಸವಾರರ ಪರದಾಟ
ಅಲ್ಲದೇ, ಹೊಸ ಬೈಕ್ ತೆಗೆದುಕೊಂಡರೆ, ಜನರ ಮೇಲೆ ನಾನಾ ರೀತಿಯ ಟ್ಯಾಕ್ಸ್ ಹಾಕಲಾಗುತ್ತದೆ. ಇಷ್ಟೆಲ್ಲ ಹಣ ಬಿಡುಗಡೆ ಮಾಡಿದರೂ ಜನರು ತೆರಿಗೆ ಕಟ್ಟಿದರೂ ಸಹ ನಗರದಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುತ್ತಿರುವ ತೊಂದರೆಗಳನ್ನು ತಡೆಯಲಾಗುತ್ತಿಲ್ಲ. ಈಗಲೂ ರಸ್ತೆಗಳಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ಚರಂಡಿಗಳು ಹೂಳಿನಿಂದ ತುಂಬಿವೆ. ಅಂಡರ್ಪಾಸ್ಗಳಲ್ಲಿ ಈಗಲೂ ಸರಾಗವಾಗಿ ನೀರು ಹರಿದುಹೋಗುತ್ತಿಲ್ಲ. ರಸ್ತೆ-ಅಂಡರ್ಪಾಸ್ಗಳು ಜಲಾವೃತಗೊಳ್ಳುತ್ತಿವೆ. ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ಇದೆ.