ಪ್ರತಿಯೊಬ್ಬ ಮಾನವರಿಗೂ ಯಾವೆಲ್ಲ ಹಕ್ಕುಗಳಿವೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ”ಯನ್ನು ಪ್ರತಿ ವರ್ಷ ಮಾಡಲಾಗುತ್ತಿದೆ ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನೇರಳೆ ವೀರಭದ್ರಯ್ಯ ಭವಾನಿ ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘ (ರಿ), ಗುಡಿಬಂಡೆ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ “ವಿಶ್ವ ಮಾನವ ಹಕ್ಕುಗಳ ದಿನಾಚರಣೆ-2024ರ” ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರಿಗೂ ಸಹಜವಾದ ಮಾನವ ಹಕ್ಕುಗಳಿದ್ದು, ಸಮಾಜದಲ್ಲಿ ಕೆಲವು ವ್ಯಕ್ತಿಗಳ ಬುದ್ದಿವಂತಿಕೆ, ಆರ್ಥಿಕ ಮತ್ತು ಸಾಮಾಜಿಕ ಬಲ, ಪ್ರಭಾವ ಹಾಗೂ ದರ್ಪ, ದಬ್ಬಾಳಿಕೆಗಳಿಂದ ಅಸಹಾಯಕರು, ದುರ್ಬಲರು ಮಾನವ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಈ ರೀತಿಯ ಪ್ರಕರಣಗಳು ಜಾಗೃತಿಯ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲೇ ಅಧಿಕವಾಗಿ ಕಂಡು ಬರುತ್ತಿವೆ.ಸಮಾಜದಲ್ಲಿ ಪ್ರತಿಯೊಬ್ಬರೂ ಹಕ್ಕುಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಕೇಳುತ್ತಾರೆಯೇ ಹೊರತು ಬಹುತೇಕರು ತಮ್ಮ ನಾಗರೀಕ ಕರ್ತವ್ಯಗಳನ್ನು ಮರೆಯುತ್ತಾರೆ. ಭೂಮಿಯ ಮೇಲೆ ಜನಿಸಿದ ಮೇಲೆ ಪ್ರತಿಯೊಬ್ಬರಿಗೂ ಸಹಜವಾಗಿ ಸಮಾನ ಮಾನವ ಹಕ್ಕುಗಳಿವೆ. ಕೆಲವರು ಇನ್ನೊಬ್ನರ ಹಕ್ಕುಗಳನ್ನು ಕಸಿದು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಾರೆ. ಯಾರ ಹಕ್ಕುಗಳನ್ನು ಯಾರೂ ಕಸಿಯುವಂತಿಲ್ಲ. ಪ್ರತಿ ವ್ಯಕ್ತಿಯೂ ಮಾನವನಾಗಿ ತನಗಿರುವ ಹಕ್ಕುಗಳನ್ನು ಅರಿತುಕೊಂಡಾಗ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತವೆ. ಮಾನವ ಹಕ್ಕುಗಳ ಬಗ್ಗೆ ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ವಿವಿಧ ಕಾರ್ಯಕ್ರಮ, ಶಿಬಿರ ಮತ್ತು ಕಾರ್ಯಾಗಾರಗಳ ಮುಖಾಂತರ ಹೆಚ್ಚಿನ ಅರಿವು ಮೂಡಿಸಬೇಕು. ಈ ಬಗ್ಗೆ ವಿವಿಧ ಇಲಾಖೆಗಳೊಂದಿಗೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ಸಕಾರಾತ್ಮಕವಾಗಿ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿನ ಜೊತೆಗೆ ಒಂದಿಷ್ಟು ಮೂಲಭೂತ ಹಕ್ಕುಗಳಿವೆ. ಪ್ರತಿಯೊಬ್ಬರಿಗೂ ಅರ್ಹವಾಗಿರುವ ಮೂಲಭೂತ ಸ್ವಾತಂತ್ರ್ಯಗಳು ಹಾಗೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು 2024ರ ಮಾನವ ಹಕ್ಕುಗಳ ದಿನದ ಘೋಷವಾಕ್ಯವಾಗಿದೆ. ಅದರಂತೆ ಎಲ್ಲರೂ ಜಾಗೃತರಾಗಿ ಸಂಕಲ್ಪ ಮಾಡೋಣ, ಯಾವುದೇ ತಾರತಮ್ಯವಿಲ್ಲದೆ ಎಲ್ಲ ಮಾನವ ಜೀವಿಗಳ ಹಕ್ಕುಗಳನ್ನು ಗೌರವಿಸೋಣ, ನಮ್ಮ ವಿಚಾರಗಳಿಂದ, ಮಾತುಗಳಿಂದ ಹಾಗೂ ನಡವಳಿಕೆಗಳಿಂದ ಬೇರೆಯವರ ಹಕ್ಕುಗಳು ಉಲ್ಲಂಘನೆಯಾಗದಂತೆ ನಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಅವರು ಮಾತನಾಡಿ ನಮ್ಮ ಬದುಕನ್ನು ಅರ್ಥಪೂರ್ಣವನ್ನಾಗಿಸಿ ತೃಪ್ತಿದಾಯಕವಾಗುವಂತೆ ಮಾಡುವಂತಹ ಮೂಲಭೂತ ಅರ್ಹತೆಗಳು ಹಾಗೂ ಸ್ವಾತಂತ್ರ್ಯಗಳನ್ನು ಮಾನವ ಹಕ್ಕುಗಳೆಂದು ಕರೆಯಲಾಗುತ್ತದೆ. ನಿರ್ಭೀತಿಯಿಂದಿರುವುದು, ಹಕ್ಕುಗಳ ಕಸಿದುಕೊಳ್ಳುವುದರಿಂದ ಮುಕ್ತಿ ಪಡೆಯುವುದು ಹಾಗೂ ನಮ್ಮ ಎಲ್ಲ ಸಾಮರ್ಥ್ಯಗಳ ಉಪಯೋಗ ಮಾಡಿಕೊಳ್ಳುವುದಕ್ಕೆ ಅವಕಾಶವನ್ನು ಪಡೆಯುವುದು ಮನುಷ್ಯನ ಮೂಲಭೂತ ಆಕಾಂಕ್ಷೆಯಾಗಿದೆ. ಆದ ಕಾರಣದಿಂದಲೇ ಮಾನವ ಹಕ್ಕುಗಳನ್ನು ಕೆಲವೊಮ್ಮೆ ‘ಸಹಜವಾದ ಹಕ್ಕುಗಳು’ ಎಂದು ಕರೆಯಲಾಗುತ್ತವೆ. ಜೀವಿಸುವ ಹಕ್ಕಿನಲ್ಲಿ ಘನತೆಯಿಂದ ಜೀವಿಸುವ ಹಕ್ಕೂ ಸೇರಿದ್ದು, ತಾರತಮ್ಯವಿಲ್ಲದೆ ಸಮಾನವಾಗಿ ಕಾಣುವ ಹಕ್ಕು, ಚಿತ್ರಹಿಂಸೆಯಿಂದ ಬಿಡುಗಡೆ, ಬಲವಂತದಿಂದ ಕೆಲಸ ಮಾಡಿಸುವುದರಿಂದ ಬಿಡುಗಡೆ, ತಪ್ಪಾಗಿ ಬಂಧಿಸುವುದರಿಂದ ಸ್ವಾತಂತ್ರ್ಯ, ಮುಕ್ತವಾದ ವಿಚಾರಣೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಲೋಚಿಸುವ, ಮನಸ್ಸಾಕ್ಷಿಯ, ಧರ್ಮದ, ಏಕಾಂತತೆಯ ಹಕ್ಕುಗಳು, ಮುಕ್ತವಾಗಿ ಮಾತನಾಡುವ ಮತ್ತು ವ್ಯಕ್ತಪಡಿಸುವ ಹಕ್ಕು, ಇತರರೊಡನೆ ಸಹವರ್ತಿಯಾಗಿ, ಸರ್ಕಾರದೊಡನೆ, ಸಾರ್ವಜನಿಕ ಹಾಗೂ ಸಮುದಾಯದ ವಿಷಯಗಳಲ್ಲಿ ಭಾಗವಹಿಸುವ ಹಕ್ಕು, ಊಟ, ವಸತಿ, ಆರೋಗ್ಯ, ಶುದ್ಧವಾದ ಪರಿಸರ, ಶಿಕ್ಷಣ ಪಡೆಯುವುದು, ಕೆಲಸ ಮಾಡುವ, ಸಮಾನ ಕೆಲಸಕ್ಕೆ ಸಮಾನ ವೇತನ, ಮತ್ತು ಒಬ್ಬನ ಸಂಸ್ಕೃತಿಯನ್ನು ಹಾಗೂ ಬದುಕುವ ರೀತಿಯನ್ನು ಕಾಪಾಡುವ ಹಕ್ಕುಗಳು ಸಹ ಮಾನವ ಹಕ್ಕುಗಳಲ್ಲಿ ಸೇರುತ್ತವೆ ಇವುಗಳನ್ನು ಎಲ್ಲರೂ ಅರಿಯಬೇಕು ಜೊತೆಗೆ ಇನ್ನೊಬ್ಬರ ಹಕ್ಕುಗಳಿಗೆ ಚುತಿ ಬಾರದ ಹಾಗೆ ನಡೆದುಕೊಳ್ಳಬೇಕು ಎಂದರು.
ಗುಡಿಬಂಡೆಯ ಉನ್ನತಿ ಮಾನವ ಹಕ್ಕುಗಳ ರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ವಿ. ವಿಶ್ವನಾಥ್ ಮಾತನಾಡಿ, ಮಾನವ ಹಕ್ಕುಗಳ ಪರಧಿ ವ್ಯಾಪಕ ಸ್ವರೂಪದ್ದಾಗಿದೆ. ಶೋಷಣೆ ರಹಿತ ಆರೋಗ್ಯ ಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇರುವಂತಹದ್ದು. ಇಂತಹ ಹಕ್ಕುಗಳನ್ನು ರಕ್ಷಿಸುವುದು ಆಡಳಿತ ಯಂತ್ರದ ಕರ್ತವ್ಯವಾಗಿರುತ್ತದೆ. ಯಾವುದೇ ಸಕ್ಷಮ ಕಚೇರಿಯಿಂದಾಗಲಿ ಅಥವಾ ಸಂಸ್ಥೆಯಿಂದಾಗಲಿ ಮಾನವ ಹಕ್ಕುಗಳ ರಕ್ಷಣಾ ಕಾರ್ಯ ವಿಫಲವಾದ ಸಂದರ್ಭಗಳಲ್ಲಿ ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು. “ಮಾನವ ಹಕ್ಕುಗಳ ರಕ್ಷಣೆ” ಎಂಬ ಮೊಬೈಲ್ ಆಪ್ ನ್ನು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಂಡು ಆನ್ ಲೈನ್ ಮೂಲಕವೂ ದೂರು ನೀಡಬಹುದು. ಅಲ್ಲದೇ https://kshrc.karnataka.gov.in ಮತ್ತು www.hrcnet.nic.in ನಲ್ಲೂ ಆಯೋಗ ನಿಗದಿಪಡಿಸಿದ ಸರಳ ನಮೂನೆಯಲ್ಲಿ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿ ದೂರು ಸಲ್ಲಿಸಬಹುದು. ಜೊತೆಗೆ 1800-4252-3333 ಸಹಾಯವಾಣಿಗೆ ಕರೆ ಮಾಡಿ ಯಾವುದೇ ಖರ್ಚಿಲ್ಲದೆ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ಅಂಬೇಡ್ಕರ್’- ಅಮಿತ್ ಶಾ ಆಡಿದ ಮಾತಲ್ಲ, ಹೊಟ್ಟೆಯೊಳಗಿನ ಹೊಲಸು
ಕಾರ್ಯಕ್ರಮದಲ್ಲಿ ಮಾನ್ಯ ನ್ಯಾಯಾಧೀಶರು ಹಾಗೂ ಗಣ್ಯರು ಮಾನವ ಹಕ್ಕುಗಳ ಜಾಗೃತಿ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರತಂದಿರುವ ಕಿರುಹೊತ್ತಿಗೆ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ ರವರು ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ನೆರೆದಿದ್ದವರಿಗೆ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಉಪ ವಿಭಾಗಧಿಕಾರಿ ಡಿ.ಹೆಚ್.ಅಶ್ವಿನ್, ಜಿಲ್ಲಾ ವಾರ್ತಾಧಿಕಾರಿ ಎಂ.ಜುಂಜಣ್ಣ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮುನಿಕೆಂಪೇಗೌಡ, ರಾಷ್ಟ್ರೀಯ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿಗಳ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಕೃಷ್ಣಪ್ಪ, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕು ಮುನ್ನ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಟಿ. ಪ್ರಸನ್ನ ಕುಮಾರ್ ರವರ ಕಲಾತಂಡದಿಂದ ಮಾನವ ಹಕ್ಕುಗಳ ಕುರಿತು ಗೀತ ಗಾಯನದಿಂದ ಗಮನ ಸೆಳೆದರು.