ಮೈಸೂರು ಜಿಲ್ಲೆಯ ಹುಣಸೂರು ಕರ್ನಾಟಕ ಏಕೀಕರಣ ಕರ್ತೃ, ನಾಡು ಕಂಡಂತ ಧೀಮಂತ ನಾಯಕ ಡಿ ದೇವರಾಜ ಅರಸು ಅವರ ಕರ್ಮಭೂಮಿ.
ಮೈಸೂರು ಸಾಂಸ್ಕೃತಿಕ ನಗರವಾಗಿ ಎಷ್ಟು ಖ್ಯಾತಿ ಹೊಂದಿದೆಯೋ ಅಷ್ಟೇ ರಾಜಕೀಯವಾಗಿ ತನ್ನದೇ ಆದ ಛಾಪು ಹೊಂದಿದೆ. ದುರಂತ ಅಂದ್ರೆ ಹುಣಸೂರು ಪಟ್ಟಣದಲ್ಲಿ ಅರಸು ಭವನ ನಿರ್ಮಿಸಿ ಬರೋಬ್ಬರಿ 5 ವರ್ಷಗಳೇ ಕಳೆದರೂ ಈವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ.
ದೇವರಾಜ ಅರಸು ಪ್ರತಿನಿಧಿಸುತ್ತಿದ್ದ ಕ್ಷೇತ್ರ, ಮುಖ್ಯಮಂತ್ರಿಗಳಾಗಿ ತನ್ನೂರಿಗೆ ಖ್ಯಾತಿ ತಂದ ಮಹಾ ನಾಯಕನಿಗೆ ಅಗೌರವ ತೋರಿದಂತಿದೆ. ಸಮಾಜವಾದಿ ಕಳಕಳಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹುಣಸೂರು ಅಂದ್ರೆ ವಿಶೇಷ ಕಾಳಜಿ. ಅರಸು ಅವರ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದಾರೆ. ಅದರಲ್ಲೂ ಜಿಲ್ಲೆಯನ್ನಾಗಿ ಮಾಡಬೇಕೆನ್ನುವ ಕೂಗು ಬಹಳ ದಿನದಿಂದ ಇದೆ. ಆದರೆ ಮುಖ್ಯಮಂತ್ರಿಯವರೂ ಕೂಡ ಗಮನ ಹರಿಸದೇ ಇರುವುದು ಶೋಚನೀಯ.
ರಾಜ್ಯದಲ್ಲಿ ಒಂದು ವೇಳೆ ಹೊಸ ಜಿಲ್ಲೆಗಳ ರಚನೆ ಆದರೆ ಆ ಪಟ್ಟಿಯಲ್ಲಿ ಮೊದಲಿಗೆ ಇರುವಂತಹ ಕ್ಷೇತ್ರ ಹುಣಸೂರು. ವಿಶಾಲವಾದ ವ್ಯಾಪ್ತಿ ಹೊಂದಿರುವ ವಾಣಿಜ್ಯ, ವಹಿವಾಟು, ಸರ್ಕಾರಿ ಕಚೇರಿ, ವಿದ್ಯಾಭ್ಯಾಸ, ಆಸ್ಪತ್ರೆ ಸೇರಿದಂತೆ ಎಲ್ಲದಕ್ಕೂ ಅವಲಂಬಿತವಾಗಿರುವ ಕೇಂದ್ರ ಸ್ಥಾನ.
ರಾಜಕೀಯ ಅತಂತ್ರ ಪರಿಸ್ಥಿತಿ ತಾಲೂಕಿನ ಅಭಿವೃದ್ಧಿಗೆ ಮಾರಕವಾಗಿದೆ. ಆಂತರಿಕ ಕಚ್ಚಾಟ ಏನೇ ಇದ್ದರೂ ದೇವರಾಜ ಅರಸು ಅವರಿಗೆ ಅವಮಾನವಾಗದಂತೆ ನಡೆಯಬೇಕಿದ್ದ ಅರಸು ನಿಗಮ ಮಂಡಳಿಯ ಅಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಘನ ಸರ್ಕಾರ ಇಚ್ಛಾಶಕ್ತಿ ಮರೆತಂತಿದೆ.
ಅರಸು ಅವರಿಗೆ ರಾಜ್ಯಾದ್ಯಂತ ಗೌರವ ಸಲ್ಲಿಕೆ ಇರುವಾಗ ತನ್ನ ಕರ್ಮಭೂಮಿಯಲ್ಲಿ ಅರಸು ಹೆಸರು ನೆನಪಿಸುವಂತಹ ಯಾವುದೇ ಕೆಲಸ ನಡೆಯದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಹುಣಸೂರು ಅರಸು ಅವರ ಕನಸಿನ ಕೂಸು ಪಿರಿಯಾಪಟ್ಟಣದಲ್ಲಿ ಹುಟ್ಟಿದರು. ಅವರು ಅತಿಯಾಗಿ ಪ್ರೇಮಿಸಿದ್ದು ಹುಣಸೂರು ಪಟ್ಟಣವನ್ನು ಅವರ ಹೆಸರಿನ ಜತೆ ಅರಸು ಕಲ್ಲಳ್ಳಿ ನಂಟಾಗಿದೆ. ಬಹುತೇಕರು ಹುಣಸೂರು ಅರಸು ಜನ್ಮ ಭೂಮಿ ಅಂತಾನೆ ಭಾವಿಸಿದ್ದಾರೆ. ಅಷ್ಟರ ಮಟ್ಟಿಗೆ ಅವರ ಒಡನಾಟ ಇತ್ತು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಅರಸು ಭವನದ ಕಟ್ಟಡ ನಿರ್ಮಾಣ ಆಗಿ ಐದು ವರ್ಷ ಕಳೆಯುತ್ತಿದೆ. ಹೀಗೆ ಆದರೆ ಶಿಥಿಲಗೊಂಡು ಬಿದ್ದೋಗುವ ಪರಿಸ್ಥಿತಿ ಇದೆ. ಸದ್ಯ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಿದೆ. ಸರ್ಕಾರ ಮತ್ತು ಅಧಿಕಾರಿಗಳಿಗೆ ಜನರ ಹಣವನ್ನು ದುರುಪಯೋಗ ಮಾಡುವುದು ಗೊತ್ತು. ಆದರೆ, ನಿರ್ವಹಣೆ ಮಾಡುವುದೇಗೆ ಎಂಬುದು ತಿಳಿದಿಲ್ಲ” ಎಂದರು.
“ರಾಜ್ಯಕ್ಕೆ ಹೆಸರು ತಂದುಕೊಟ್ಟ ಬಗರ್ ಹುಕುಂ ಹರಿಕಾರನಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ನಡೆದುಕೊಂಡಿಲ್ಲ. ಪ್ರಗತಿಪರ ಸಂಘಟನೆಗಳು ಹಲವು ಭಾರಿ ಮನವಿ ಮಾಡಿದರೂ ಕೂಡಾ ಅಧಿಕಾರಿಗಳು ಕಿವಿಗೊಡುತ್ತಿಲ್ಲ. ಅರಸು ನಿಗಮದ ಎಂ ಡಿ ಹಾಗೂ ಅಧಿಕಾರಿಗಳಿಗೆ ಕಣ್ಣು, ಕಿವಿಗಳು ಇಲ್ಲದಾಗಿದೆ” ಎಂದು ಆರೋಪಿಸಿದರು.
ದಸಂಸ ಸಂಚಾಲಕ ರಾಜು ಚಿಕ್ಕ ಹುಣಸೂರು ಮಾತನಾಡಿ, “ದೇವರಾಜ ಅರಸು ಅವರು ಹುಣಸೂರಿಗೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನೆನಪಿಸಿಕೊಳ್ಳುವ ಜನಸಮುದಾಯ ಇಲ್ಲಿದೆ. ಅರಸು ಇಲ್ಲದೇ ಇದ್ದರು ಅವರು ಮಾಡಿದ ಕೆಲಸವನ್ನು ಜನ ಇನ್ನೂ ಮರೆತಿಲ್ಲ. ಈಗಲೂ ದೇವರಾಜ ಅರಸು ನಮ್ಮ ನಾಯಕರು ಅನ್ನುವ ಜನ ಇರುವ ಈ ಊರಲ್ಲಿ ಅರಸು ಹೆಸರು ಉಳಿಸುವ ಕೆಲಸವನ್ನು ಅಧಿಕಾರಿಗಳು ಮಾಡ್ತಾ ಇಲ್ಲ. ತಿಂಗಳ ಸಂಬಳಕ್ಕೆ ಕೆಲಸ ಮಾಡುವಂತಿದೆಯೇ ಹೊರತು ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಏನಾದರೂ ಕೇಳಿದರೆ ಸಾಕು ಹಾರಿಕೆ ಉತ್ತರ ಕೊಟ್ಟು ಸರ್ಕಾರದ ಮೇಲೆ ಹೇಳಿ, ವರದಿ ಕೊಟ್ಟಿರುವ ಹಾರಿಕೆ ಉತ್ತರ ಕೊಟ್ಟು ಕೈತೊಳೆದುಕೊಳ್ಳುತ್ತಾರೆ” ಎಂದು ಹೌಹಾರಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಣ್ಣ ಬೆಂಕಿಪುರ ಮಾತನಾಡಿ, “ನಾನು ಬುದ್ದಿ ಬಂದಾಗಿನಿಂದ ಹಿಡಿದು ಈವರೆಗೆ ನೋಡಿದರೆ ಅರಸು ಅವರ ಕೊಡುಗೆ ಮುಂದೆ ಇಂದಿನವರ ಕೊಡುಗೆ ಏನೂ ಇಲ್ಲ. ಒಂದು ರಸ್ತೆ, ಸೇತುವೆ ಮಾಡಿಸುವ ಶಕ್ತಿ ಇರದ ಜನಪ್ರತಿನಿಧಿಗಳು ಅರಸು ಅವರಿಗೆ ಗೌರವ ಸಲ್ಲಿಸುತ್ತಾರೆಯೇ?” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ದಸಂಸ 50ರ ಸಂಭ್ರಮ: ಜುಲೈ 10ರಂದು ಬೆಂಗಳೂರಿನಲ್ಲಿ ಸಮಾವೇಶ
“ರಾಜಕೀಯ ಜಿದ್ದಾಜಿದ್ದಿನಲ್ಲಿ ಅರಸು ಅವರ ಹೆಸರು ಅನಾಥವಾಗಿದೆ. ಹುಣಸೂರಿಗೆ ಹಿರಿಮೆ ಗರಿಮೆ ಅಂದರೆ ಅದು ದೇವರಾಜ ಅರಸು. ಮೊದಲು ರಾಜಕಾರಣಿಗಳು ರಾಜಕೀಯ ಮಾಡುವುದನ್ನು ನಿಲ್ಲಿಸಿ, ಅಧಿಕಾರಿಗಳು ರಾಜಕೀಯದ ಬಾಲಂಗೋಚಿ ಆಗದೆ ಕೂಡಲೇ ಅರಸು ಭವನ ಉದ್ಘಾಟನೆ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಸಿಗುವಂತೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಜುಲೈ 8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
