ಪತ್ನಿಗೆ ಕೌಟುಂಬಿಕ ಹಿಂಸೆ ನೀಡಿ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪತಿಗೆ ಕಲಬುರಗಿ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ.
ನಗರದ ರಾಮನಗರದ ಅಜೀಲಕುಮಾರ ಬಿರಾದಾರ ಶಿಕ್ಷೆಗೊಳಗಾದ ಅಪರಾಧಿ. 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಅನೀಲಕುಮಾರ ಒಂದು ಹೆಣ್ಣು ಮಗುವಾದ ನಂತರ ಪತ್ನಿಗೆ ಮನೆ ಕೆಲಸ ಸರಿಯಾಗಿ ಮಾಡಲು ಬರುವುದಿಲ್ಲ. ನೀನು ಅನ್ಯ ಜಾತಿಯವಳು ನಮ್ಮ ಮನೆಗೆ ಒಪ್ಪುವುದಿಲ್ಲ ಎಂದು ಮಾನಸಿಕ, ದೈಹಿಕ ಕಿರುಕುಳ ನೀಡಿದ್ದನು. ತದನಂತರ ಅವಾಚ್ಯ ಶಬ್ಧಗಳಿಂದ ಬೈದು ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದ.
ಈ ಸಂಬಂಧ ನೊಂದ ಮಹಿಳೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪಿಎಸ್ಐ ಚಂದ್ರಶೇಖರ್ ಅವರು ತನಿಖೆ ನಡೆಸಿ ದೋಷಾರೋಪಣೆ ವರದಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಅಭಿಯೋಜನೆಯು 10 ಜನ ಸಾಕ್ಷಿದಾರರನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಅಭಿಯೋಜನೆಯ ವಾದ ಪುರಸ್ಕರಿಸಿದ 5ನೇ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು ಆರೋಪಿಗೆ 2 ವರ್ಷ ಸಾಧಾ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ವಾದ ಮಂಡಿಸಿದ್ದರು.