ತುಮಕೂರು ಜಿಲ್ಲೆಯ ಭೌಗೋಳಿಕ ಚಿತ್ರಣವನ್ನು ಅರಿತಿದ್ದೇನೆ ಹಾಗೂ ಜಿಲ್ಲೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ಅರಿವು ಇದ್ದಿದ್ದರಿಂದ ಐದು ವರ್ಷಗಳ ಕಾಲ ಜನರ ಬಳಿಯೇ ಇದ್ದು ಕೆಲಸ ಮಾಡಲು ಸಾಧ್ಯವಾಯಿತು. ಹಾಗಾಗಿ ಇಲ್ಲಿನ ಜನತೆಯ ನಾಡಿಮಿಡಿತ ಗೊತ್ತಿದೆ ಎಂದು ತುಮಕೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಹೇಳಿದರು.
ತುಮಕೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ತುಮಕೂರನ್ನು ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ಸೇರ್ಪಡೆ ಮಾಡಿರಲಿಲ್ಲ. ಅಂದಿನ ಸೆಂಟ್ರಲ್ ಅರ್ಬನ್ ಮಿನಿಸ್ಟರ್ ವೆಂಕಯ್ಯ ನಾಯ್ಡು ಅವರಿಗೆ, ‘ತುಮಕೂರು, ಬೆಂಗಳೂರಿನ ಪಕ್ಕದಲ್ಲೇ ಇರುವುದರಿಂದ ಒಂದು ಉಪನಗರಕ್ಕೆ ಇರುವ ಸಾಧ್ಯತೆಗಳನ್ನು ಮನವರಿಕೆ ಮಾಡಿದ ನಂತರ ತುಮಕೂರನ್ನು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ತರಲಾಯಿತು” ಎಂದು ಹೇಳಿದರು.
“ರಾಷ್ಟ್ರೀಯ ಹೆದ್ದಾರಿ 206 ಹಾಗೂ ದಾವಣಗೆರೆಗೆ ರೈಲು, ತುಮಕೂರು ರಾಯದುರ್ಗ ರೈಲ್ವೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ನನ್ನ ಕಾಲದಲ್ಲಿ ಶಂಕು ಸ್ಥಾಪನೆ ಮಾಡಿದ್ದೆ. ಈಗ ಎಲ್ಲವೂ ಸ್ಥಗಿತವಾಗಿವೆ. ಅಪ್ಪರ್ ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ₹5,000 ಕೋಟಿ ಹಣ ಮೀಸಲಿಟ್ಟಿತ್ತು. ಇದರಲ್ಲಿ ನಯಾ ಪೈಸೆ ಬಿಡುಗಡೆಯಾಗಿಲ್ಲ. ಈಗಿರುವ ಸ್ಥಳೀಯ ಸಂಸದರಾಗಲಿ, ರಾಜ್ಯ ಸಂಸದರಾಗಲೀ ತುಟಿ ಬಿಚ್ಚುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜಾ ಅಮರೇಶ್ವರ ನಾಯಕರಿಗೆ ಟಿಕೆಟ್; ಬಿಜೆಪಿ ಕಾರ್ಯಕರ್ತರಲ್ಲಿ ಅಸಮಧಾನ
“ಜಿಲ್ಲೆಯಲ್ಲಿ ಶಾಸಕನಾಗಿ, ಸಂಸದನಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ನನಗೆ ಈ ಬಾರಿ ಅವಕಾಶ ಮಾಡಿಕೊಡಿ” ಎಂದು ಮನವಿ ಮಾಡಿಕೊಂಡರು.
