ಕಳೆದ ಎರಡು ವರ್ಷದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಕೊಡಗು ವಿಶ್ವ ವಿದ್ಯಾಲಯವನ್ನು ಮುಚ್ಚುವ ಬಗ್ಗೆ ಸಚಿವ ಸಂಪುಟದ ಉಪ ಸಮಿತಿ ನಿರ್ಧಾರ ತೆಗೆದುಕೊಂಡಿರುವ ಕುರಿತು ಜಿಲ್ಲಾಧ್ಯಂತ ಜನರಿಗೆ ಆತಂಕ ಮೂಡಿದೆ. ‘ಕೊಡಗು ವಿವಿ ಮುಚ್ಚಿದರೆ ಜಿಲ್ಲೆಗೆ ಅಪಮಾನ ಮಾಡಿದಂತೆ’ ಎಂದು ಕೆಎಂಎ ಅಧ್ಯಕ್ಷರಾದ ದುದ್ದಿಯಂಡ ಹೆಚ್ ಸೂಫಿ ಹಾಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕೊಡಗು ವಿಶ್ವ ವಿದ್ಯಾಲಯವನ್ನು ಸ್ಥಗಿತಗೊಳಿಸುವ ಅಥವಾ ಬೇರೆ ವಿವಿಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಸರಕಾರದ ಮುಂದಿದ್ದರೆ ತಕ್ಷಣ ಅದನ್ನು ಕೈ ಬಿಟ್ಟು, ಕೊಡಗು ವಿಶ್ವವಿದ್ಯಾಲಯವನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು’ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಒತ್ತಾಯಿಸಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಿಲ್ಲೆಗೊಂದರಂತೆ 10 ನೂತನ ವಿಶ್ವ ವಿದ್ಯಾಲಯಗಳನ್ನು ಘೋಷಣೆ ಮಾಡಲಾಗಿತ್ತು. ಇದೀಗ ಕೊಡಗು ಸೇರಿದಂತೆ ರಾಜ್ಯದ ವಿವಿಧ 9 ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದೆ.
ಸಂಪುಟ ಉಪ ಸಮಿತಿ ಸಭೆಯ ನಿರ್ಧಾರಕ್ಕೆ ಕೊಡಗಿನಲ್ಲಿ ಇದೀಗ ವ್ಯಾಪಕವಾಗಿ ವಿರೋಧ ಹೆಚ್ಚುತ್ತಿದ್ದು, ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು ಎಂಬುದು ಜಿಲ್ಲೆಯ ಜನತೆಯ ಭಾವನೆಯಾಗಿದೆ.
ಅದ್ದರಿಂದ ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಕೊಡಗಿನ ಇಬ್ಬರು ವಿಧಾನಸಭಾ ಸದಸ್ಯರು ಈ ಕುರಿತು ಕೂಡಲೇ ಸರ್ವಪಕ್ಷಗಳ ಪ್ರಮುಖರ ನಿಯೋಗವನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ದು ಕೊಡಗು ವಿವಿ ಯನ್ನು ಉಳಿಸಿಕೊಳ್ಳಲು ವಿಶೇಷ ಆಸಕ್ತಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರದ ‘ಜ್ಞಾನ ಕಾವೇರಿ’ ಆವರಣದಲ್ಲಿರುವ ಜಿಲ್ಲೆಯ ಏಕೈಕ ಕೊಡಗು ವಿಶ್ವವಿದ್ಯಾಲಯ ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ಇಲ್ಲದಿದ್ದರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಕೊಡಗು ವಿವಿ ನೂರಾರು ಪ್ರದೇಶದ ಜಾಗವನ್ನು ಹೊಂದಿದ್ದು, ಪ್ರಸ್ತುತ ವಿಜ್ಞಾನ ಬ್ಲಾಕ್, ಮಾನವಿಕ ಬ್ಲಾಕ್, ಪುರುಷ ಮತ್ತು ಮಹಿಳಾ ಹಾಸ್ಟೆಲ್ಗಳು ಮತ್ತು ಅತಿಥಿ ಗೃಹ ಕಟ್ಟಡಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಬಹುತೇಕ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಕೊಡಗು ವಿವಿ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದ ಮುಕುಟಪ್ರಾಯವಾಗಿದೆ.ಜಿಲ್ಲೆಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಹೊರ ಜಿಲ್ಲೆಗೆ ತೆರಳುವುದು ಅಸಾಧ್ಯವಾಗಿರುವುದರಿಂದ, ಬಡ ವಿದ್ಯಾರ್ಥಿಗಳಿಗೆ ಕೊಡಗು ವಿವಿ ಅನಿವಾರ್ಯವಾಗಿದೆ.
ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿರುವುದರಿಂದ ವಿಶೇಷ ಪ್ರಕರಣದಡಿ ಇದನ್ನು ಪರಿಗಣಿಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೊಡಗು ವಿವಿಯನ್ನು ಮುಂದುವರಿಸಲು ಸರಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಕೆಎಂಎ ಹಿರಿಯ ಉಪಾಧ್ಯಕ್ಷ ಡಾ ಜೋಯಿಪೆರ ಎ ಕುಂಜ್ಹಬ್ದುಲ್ಲಾ ಮಾತನಾಡಿ ” ಆಧುನಿಕ ಭಾರತದ ನಿರ್ಮಾಣದಲ್ಲಿ ವಿಶ್ವವಿದ್ಯಾಲಯಗಳ ಶಿಕ್ಷಣ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನ್ಯಾಯದ ಪ್ರಜ್ಞೆ ಮೂಡಿಸಿ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವಲ್ಲಿ ವಿಶ್ವವಿದ್ಯಾಲಯಗಳು ಪ್ರಮುಖ ಪಾತ್ರ ವಹಿಸಿವೆ.
ವಿಶ್ವವಿದ್ಯಾಲಯಗಳ ಶಿಕ್ಷಣದಿಂದಲೇ ಆಧುನಿಕ ಪ್ರಜ್ಞೆ ರೂಪುಗೊಳ್ಳಲು ಕಾರಣವಾಗಿದೆ. ಹೀಗಾಗಿ ಮಹತ್ತರವಾಗಿರುವ ವಿಶ್ವವಿದ್ಯಾಲಯಗಳು ಜಿಲ್ಲೆಗೆ ಅತ್ಯಗತ್ಯವಾಗಿದೆ. ಆದ್ದರಿಂದ ಸರಕಾರ ಮುಂದಿನ ಬಜೆಟ್ ನಲ್ಲಿ ಕೊಡಗು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ವಿಶೇಷ ಅನುದಾನದ ಪ್ಯಾಕೇಜ್ ಅನ್ನು ಘೋಷಿಸಿ ನೆರವು ನೀಡಬೇಕು.
ಜೊತೆಗೆ ಜಿಲ್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೊಡಗು ವಿವಿಯಲ್ಲಿ ಎಂಬಿಎ, ಎಲ್ ಎಲ್ ಬಿ ಹಾಗೂ ಎಂಸಿಎ ಮೊದಲಾದ ಕೋರ್ಸ್ ಗಳನ್ನು ಸರ್ಕಾರದಿಂದ ಆರಂಭಿಸಬೇಕು ” ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ: ಸಿಪಿಐಎಂ ಮನವಿ
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಅಕ್ಕಳತಂಡ ಎಸ್ ಮೊಯ್ದು, ನಿರ್ದೇಶಕ ಚಿಮ್ಮಿಚ್ಚಿರ ಕೆ ಇಬ್ರಾಹಿಂ ಹಾಜಿ ಇದ್ದರು.
