“ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಣಕಾಸು ಕ್ರೋಡೀಕರಣದ ನೆಪದಲ್ಲಿ ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆಗಳನ್ನು ಮಾಡಿ ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ಗಣಿ ಮಾಲೀಕರುಗಳಿಗೆ ಬೆಂಬಲ ನೀಡುತ್ತ ಬಂದಿದೆ. ಅದೇ ರೀತಿಯಲ್ಲಿ ಒಟಿಎಸ್ ಪದ್ದತಿಯನ್ನು ಜಾರಿಗೆ ತಂದಿರುವುದು ಸರ್ಕಾರ ಲೂಟಿಕೋರರ ಪರ ನಿಂತಿರುವುದು ಸ್ಪಷ್ಟವಾಗುತ್ತಿದೆ” ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
“ಜಿಎಸ್ಟಿ ಕಟ್ಟದೆ ಸಾವಿರಾರು ಕೋಟಿ ವಂಚಿಸಿರುವ ವಂಚಕರಿಗೂ ಸಹ ಈ ಒಟಿಎಸ್ ನೀತಿಯನ್ನು ಜಾರಿಗೆ ತರುತ್ತಿರುವುದು ಮತ್ತಷ್ಟು ಆತಂಕದ ಸಂಗತಿ. ಈಗಾಗಲೇ ಅಕ್ರಮ ಗಣಿಗಾರಿಕೆಗಳ ವಿರುದ್ಧ ಹೋರಾಟ ಮಾಡುತ್ತಿರುವ ಎಸ್ ಆರ್ ಹಿರೇಮಠ್ ರಂತಹ ಹೋರಾಟಗಾರರಿಗೆ ಮಾಡುತ್ತಿರುವ ಅಪಮಾನ ಹಾಗೂ ಮುಂದಿನ ಪೀಳಿಗೆಗಳಿಗೆ ರಾಜ್ಯದ ನೈಸರ್ಗಿಕ ಸಂಪತ್ತನ್ನು ಉಳಿಸದೆ ಎಲ್ಲವನ್ನು ತಮ್ಮ ಅವಧಿಯಲ್ಲಿಯೇ ಲೂಟಿ ಮಾಡಿ ಸರ್ಕಾರ ಉಳಿಸಿಕೊಳ್ಳುವ ಇರಾದೆ” ಎಂದು ಹೇಳಿದರು.
“ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಾಂಜನಪ್ಪ ದಾಖಲೆಗಳನ್ನು ಬಿಡುಗಡೆ ಮಾಡಿ, ಪಾವಗಡ ಕ್ಷೇತ್ರದ ಶಾಸಕ ಎಚ್.ವಿ. ವೆಂಕಟೇಶ್ ಅವರ ಪತ್ನಿಯ ಒಡೆತನದ ವೆಂಕಟೇಶ್ವರ ಸ್ಟೋನ್ ಕ್ರಷರ್ ಈಗಾಗಲೇ ಸರ್ಕಾರಕ್ಕೆ 10 ಕೋಟಿ ರೂ.ಗಳಿಗೂ ಹೆಚ್ಚು ರಾಜಧನ ಹಾಗೂ ದಂಡದ ಮೊತ್ತ ಬಾಕಿ ಉಳಿಸಿಕೊಂಡಿದೆ. ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಒಟಿಎಸ್ ನೀತಿಯ ಮೂಲಕ ಅವರ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ. ಈ ಕೂಡಲೇ ಒಟಿಎಸ್ ಅನ್ನು ರದ್ದುಗೊಳಿಸಬೇಕು. ಅಕ್ರಮ ಗಣಿ ಮಾಲೀಕರುಗಳ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದೂ ದೇವಾಲಯದ ಬಳಿಯಿದ್ದ ತಮ್ಮದೇ ಮನೆ ಕೆಡವಿ ‘ಅಗತ್ಯ ವಸ್ತುಗಳನ್ನಾದರೂ ರಕ್ಷಿಸಿಕೊಳ್ಳಬಹುದು’ ಎಂದ ಮುಸ್ಲಿಮರು!
“ಶಾಸಕ ವೆಂಕಟೇಶ್ 20 ಎಕರೆ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದು ಇವರ ಮೇಲೆ ಹಾಕಿರುವ ದಂಡದ ಮೊತ್ತ ಕೇವಲ ಐದು ಎಕರೆಗಳಿಗೆ ಮಾತ್ರ ಆಗಿದೆ. ಈ ದಂಡದ ಮೊತ್ತ 40 ಕೋಟಿ ರೂ.ಗಳಿಗೂ ಹೆಚ್ಚು ಆಗಿದ್ದು ಕೂಡಲೇ ಮರುಪರಿಶೀಲಿಸಿ ಹಾಲಿ ಶಾಸಕರ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಹಾಗೂ ಕೂಡಲೇ ಅವರ ಬಳಿ ದಂಡದ ಮೊತ್ತವನ್ನು ವಸೂಲಿ ಮಾಡಿ ರಾಜ್ಯದ ಬೊಕ್ಕಸಕ್ಕೆ ತುಂಬಿಸಬೇಕೆಂದು” ಆಗ್ರಹಿಸಿದರು.
“ಇದೇ ರೀತಿ ರಾಜ್ಯದ ಅನೇಕ ಹಾಲಿ ಶಾಸಕರುಗಳು ಮಾಜಿ ಶಾಸಕರುಗಳು ಮಂತ್ರಿಗಳು ಅಕ್ರಮ ಗಣಿಗಾರಿಕೆಯಲ್ಲಿ ನಿರತರಾಗಿದ್ದು, ದಂಡದ ಮೊತ್ತ ಸಾವಿರಾರು ಕೋಟಿ ಆಗಿದೆ. ಇವರುಗಳನ್ನು ರಕ್ಷಿಸಲು ಕಾಂಗ್ರೆಸ್ ಸರ್ಕಾರ ನಿಂತಿರುವುದು ರಾಜ್ಯದ ದೌರ್ಭಾಗ್ಯ , ಸರ್ಕಾರ ಈ ಕೂಡಲೇ ಎಚ್ಚೆತ್ತುಕೊಳ್ಳುತ್ತಿದ್ದಲ್ಲಿ ಆಮ್ ಆದ್ಮಿ ಪಕ್ಷ ಬೃಹತ್ ಜನಾಂದೋಲನಕ್ಕೆ ಸಿದ್ಧವಾಗಲಿದೆ” ಎಂದು ರಾಮಾಂಜಿನಪ್ಪ ಸರ್ಕಾರವನ್ನು ಎಚ್ಚರಿಸಿದರು.