ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಕಿಡಿಗೇಡಿಗಳು ಸುಟ್ಟು ಹಾಕಿ, ದುಷ್ಕೃತ್ಯ ಮೆರೆದಿರುವುದು ಅಕ್ಷಮ್ಯ ಅಪರಾಧ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಖಂಡಿಸಿದ್ದಾರೆ.
“ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಇಂತಹ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತವೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎನ್ನುವುದಕ್ಕೆ ಇದೊಂದು ಸಾಕ್ಷಿ” ಎಂದು ಸಚಿವ ಖೂಬಾ ಕಿಡಿಕಾರಿದ್ದಾರೆ.
“ಬಸವಣ್ಣನವರು ಒಂದು ಜಾತಿಗೆ ಸೇರಿದವರಲ್ಲ, ಇಡೀ ವಿಶ್ವವೇ ಬಸವಣ್ಣನವರ ಸಂದೇಶಗಳಿಗೆ ಮಾರುಹೋಗಿದೆ. ಆದರೆ, ಇಂತಹ ಹೇಯ ಕೃತ್ಯ ನಡೆದಿರುವುದು ಅಕ್ಷಮ್ಯ ಅಪರಾಧ, ಕೂಡಲೇ ಕೃತ್ಯ ಎಸಗಿದ ದುಷ್ಟರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು” ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ, ಇಂತಹ ಸಮಾಜಘಾತಕ ಶಕ್ತಿಗಳಿಗೆ ಬೂಸ್ಟ್ ಸಿಕ್ಕಂತಾಗುತ್ತದೆ, ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದುಗಳ ಮೇಲೆ ಹಲ್ಲೆ, ಇಂದು ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿರುವುದು. ಇಂತಹ ಘಟನೆಗಳು ನಡೆದರೂ ಸರ್ಕಾರದಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ತನ್ನ ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ನಾಯಕರು ಇಂತಹ ದುಷ್ಟರನ್ನು ಕಾಪಾಡುತ್ತಾರೆ ಎನ್ನುವ ಧೈರ್ಯದಿಂದ ಇಂತಹ ಕೆಲಸಗಳು ಮೇಲಿಂದ ಮೇಲೆ ರಾಜ್ಯದಲ್ಲಿ ನಡೆಯುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಾಜ್ಯದಲ್ಲಿ ಲಿಂಗಾಯತರಿಗೆ ಅವಮಾನ ಮಾಡಲಾಗುತ್ತಿದೆ ಹಾಗೂ ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪನವರು ಹೇಳಿದ ಮಾತು ಸತ್ಯವೆಂದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದಲ್ಲಿ ಲಿಂಗಾಯತ ಜನರಿಗಷ್ಟೇ ಅಲ್ಲ, ಲಿಂಗಾಯತರು ಪೂಜಿಸುವ ದೇವರಿಗೆ ಮತ್ತು ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಬೆಲೆಯಿಲ್ಲ. ಲಿಂಗಾಯತರಿಗೆ ಮತ್ತು ಬಹುಸಂಖ್ಯಾತ ಜನರನ್ನು ಅವಮಾನಿಸುವ ಕೆಲಸ ಕಾಂಗ್ರೆಸ್ ಬಹುಕಾಲದಿಂದಲೂ ಮುಂದುವರೆಸಿಕೊಂಡು ಬಂದಿದೆ” ಎಂದು ಸಚಿವ ಖೂಬಾ ಟೀಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋ-ಶಾ ಭಾರತದಲ್ಲಿ ತಲೆಯೆತ್ತಿ ಮೆರೆದಿದೆ ‘ಮೆಕಾರ್ಥಿಯಿಸಂʼ
“ಯಾವುದೇ ಕಾರಣಕ್ಕೂ ಈ ಕೃತ್ಯ ಎಸಗಿದವರನ್ನು ತಪ್ಪಿಸಿಕೊಳ್ಳಲು ಅವಕಾಶ ನೀಡದೆ, ಅವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಂಡು ಎಲ್ಲಾ ಜಾತಿ ಜನಾಂಗಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ತಮ್ಮ ಅಧಿಕಾರದಾಸೆಗೆ ಒಬ್ಬರ ಮೇಲೆ ಒಬ್ಬರಿಗೆ ಎತ್ತಿ ಕಟ್ಟುವ ಕೆಲಸ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ರೂಪಿಸಲಾಗುವುದು” ಎಂದು ಕೇಂದ್ರ ಸಚಿವ ಖೂಬಾ ಎಚ್ಚರಿಕೆ ನೀಡಿದ್ದಾರೆ.